×
Ad

ಬಿಜೆಪಿ ಆಡಳಿತದಿಂದ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ: ಜೆ.ಪಿ.ನಡ್ಡಾ

ಬೈಂದೂರು ಬಿಜೆಪಿ ಮಂಡಲ ವತಿಯಿಂದ ಕಾರ್ಯಕರ್ತರ ಸಮಾವೇಶ

Update: 2023-02-20 20:58 IST

ಬೈಂದೂರು : ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಾ ಬಂದಿರುವುದರಿಂದ ಲೋಕಾಯುಕ್ತವನ್ನು ಬಲಹೀನಗೊಳಿಸಿತ್ತು. ದ್ವೇಷಪೂರಿತ ಹಾಗೂ ಒಡೆದು ಆಳುವ ನೀತಿಯನ್ನೆ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ದೇಶದ ಜನ ತಿರಸ್ಕಾರ ಮಾಡಿ ಬಿಜೆಪಿಯನ್ನು ಮುನ್ನೆಡೆಸಿದ್ದರಿಂದಾಗಿ ದೇಶ ಇಂದು ಜಾಗತಿಕ ಮಟ್ಟದಲ್ಲಿ ಗೌರವವನ್ನು ಪಡೆದುಕೊಳ್ಳುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. 

ತಾಲೂಕಿನ ಮುಳ್ಳಿಕಟ್ಟೆಯ ನಗು ಸಿಟಿ ಮೈದಾನದಲ್ಲಿ ಸೋಮವಾರ ಬೈಂದೂರು ಬಿಜೆಪಿ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಮಾಜ ವಿಭಜನೆ, ಭ್ರಷ್ಟಾಚಾರ, ಕಮಿಷನ್ ದಂಧೆಗಳನ್ನು ಕಾಂಗ್ರೆಸ್ ಸರಕಾರ ಆದ್ಯತೆಯನ್ನಾಗಿರಿಸಿಕೊಂಡಿದೆ. ಬೈಂದೂರು ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಪಕ್ಷವು ಹಾಲಿ ಶಾಸಕರ ಬಗ್ಗೆ ಟೀಕೆ ಮಾಡುವುದನ್ನು ಅಸ್ತ್ರವಾಗಿಸಿ ಕೊಂಡಿದೆ. ಆದರೆ ಅವರ ಕಾಲದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೆಷ್ಟು ಎಂಬುದನ್ನು ಪರಾಮರ್ಶೆ ಮಾಡಕೊಳ್ಳಲಿ ಎಂದ ಅವರು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಬಡವ, ಕೃಷಿಕ, ರೈತ, ಮಹಿಳೆ ಸೇರಿದಂತೆ ಎಲ್ಲ ವರ್ಗದ ಹಿತ ಕಾಯುವ ಬದ್ಧತೆಯನ್ನು ತೋರುತ್ತಿದೆ ಎಂದರು.

ದೇಶದ ಶೇ.58 ಮಂದಿಗೆ ಕುಡಿಯುವ ನೀರು ಒದಗಿಸಲಾಗಿದೆ. ಶೇ.98 ರಷ್ಟು ಶೌಚಾಲಯ ಸಮಸ್ಯೆ ಪರಿಹರಿಸಲಾಗಿದೆ. ಇಂಧನ ಹಾಗೂ ಮರು ಸಂಸ್ಕರಣಾ ಇಂಧನದಲ್ಲಿ ಜಾಗತಿಕ ಮಟ್ಟದಲ್ಲಿ ದಾಖಲೆ ನಿರ್ಮಿಸಲಾಗಿದೆ. ಜಗತ್ತಿನ ಶೇ.45ರಷ್ಟು ಡಿಜಿಟಲ್ ವ್ಯವಹಾರ ಭಾರತದಲ್ಲಿ ಆಗುತ್ತಿದೆ. ಮಧ್ಯವರ್ತಿಗಳಿಲ್ಲದೆ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ನೇರವಾಗಿ ತಲುಪುತ್ತಿದೆ. ರಾಸಾಯಿನಿಕ, ಔಷಧಿ, ರೈಲ್ವೆ ಸೇರಿದಂತೆ ಪ್ರಮುಖ ಔದ್ಯೋಗಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದವರು ವಿವರಿಸಿದರು.

ದೇಶ ಬದಲಾವಣೆ ಬಯಸುತ್ತಿದೆ. ನಾವೇನು ಹೇಳುತ್ತೇವೆಯೋ ಅದನ್ನು ಮಾಡುತ್ತೇವೆ ಎನ್ನುವ ಬದ್ಧತೆ ಇದೆ. ಬಿಜೆಪಿಗೆ ಮಾರ್ಗದರ್ಶಕರಾಗಿದ್ದ ಡಾ.ವಿ.ಎಸ್.ಆಚಾರ್ಯ,ಎ.ಜಿ.ಕೊಡ್ಗಿ ಎಂದೆಂದಿಗೂ ನಮಗೆ ಸ್ಮರಣಿಯರು. ನರೇಂದ್ರ ಮೋದಿಯಂತಹ ಬದ್ಧತೆಯುಳ್ಳ ಪ್ರಧಾನಿ ಮಂತ್ರಿಯ ಆಡಳಿತದ ಅಮೃತ ಕಾಲಘಟ್ಟದಲ್ಲಿ ಇರುವ ನಾವುಗಳು ಭಾಗ್ಯಶಾಲಿಗಳು ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿದರು.

ಬೈಂದೂರು ಕ್ಷೇತ್ರದ ಅಭಿವೃದ್ಧಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಸ್ಥಳೀಯ ಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು. 

ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ. ಉದಯಕುಮಾರ ಶೆಟ್ಟಿ, ಶಾಸಕ ಲಾಲಾಜಿ ಮೆಂಡನ್, ವಿಧಾನಪರಿಷತ್ ಸದಸ್ಯ ನವೀನ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಕಿಶೋರಕುಮಾರ ಬಿ, ಸದಾನಂದ ಉಪ್ಪಿನಕುದ್ರು, ಶರತ್ಕುಮಾರ ಶೆಟ್ಟಿ ಉಪ್ಪುಂದ, ಉಮೇಶ್ ಶೆಟ್ಟಿ ಕಲ್ಗದ್ದೆ, ಆನಂದ ಖಾರ್ವಿ, ರವಿ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರ್ ಕಾರ್ಯಕ್ರಮ ನಿರೂಪಿಸಿ, ಪ್ರಕಾಶ್ ಪೂಜಾರಿ ಜಡ್ಡು ವಂದಿಸಿದರು.

Similar News