ಉಡುಪಿ: 11ನೇ ರಾ. ಡ್ರ್ಯಾಗನ್ ಬೋಟ್ ಸ್ಪರ್ಧೆಗೆ ವಿದ್ಯುಕ್ತ ಚಾಲನೆ
ಮಡಿಸಾಲು ಹೊಳೆಯಲ್ಲಿ ನೀಳ ಬೋಟ್ಗಳ ಮಿಂಚಿನ ಓಟ
ಉಡುಪಿ, ಫೆ.23: ಇಲ್ಲಿಗೆ ಸಮೀಪದ ಹೇರೂರು ಗ್ರಾಮದಲ್ಲಿ ಹರಿಯುವ ಸುವರ್ಣ ನದಿಯ ಉಪನದಿಯಾದ ಮಡಿಸಾಲು ಹೊಳೆಯಲ್ಲಿ 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್ಷಿಪ್ಗೆ ಗುರುವಾರ ಸಂಜೆ ರಾ.ಹೆದ್ದಾರಿ 66ರಲ್ಲಿರುವ ಹೇರೂರು ಸೇತುವೆ ಬಳಿ ಶಾಸಕ ಕೆ.ರಘುಪತಿ ಭಟ್ ಇತರ ಗಣ್ಯರ ಸಮಕ್ಷಮ ಅಧಿಕೃತ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು, ಭಾರತೀಯ ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್,ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ಸಹಯೋಗದೊಂದಿಗೆ ಈ ಡ್ರ್ಯಾಗನ್ ಬೋಟ್ ಚಾಂಪಿಯನ್ಶಿಪ್ನ್ನು ಆಯೋಜಿಸಿವೆ.
ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್, ಭಾರತೀಯ ಕಯಾಕಿಂಗ್ ಮತ್ತು ಕನೂಯಿಂಗ್ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ಕುಶ್ವಾಹಾ, ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷ ಮೇ.ಜ.ಎಂ.ಎನ್ ದೇವಯ್ಯ, ಕಾರ್ಯದರ್ಶಿ ಕ್ಯಾ.ದಿಲೀಪ್ ಕುಮಾರ್, ಭಾರತೀಯ ಡ್ರ್ಯಾಗನ್ ಬೋಟ್ ತಂಡದ ನಾಯಕ ಮಂಜೀತ್ ಸಿಂಗ್, ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಪಂ ಸಿಇಓ ಪ್ರಸನ್ನ ಎಚ್., ಉಪ್ಪೂರು ಗ್ರಾಪಂ ಅಧ್ಯಕ್ಷ ಮಹೇಶ್ ಕೋಟ್ಯಾನ್, ಚಾಂತಾರು ಗ್ರಾಪಂ ಅಧ್ಯಕ್ಷೆ ಬೇಬಿ, ಹಾರಾಡಿ ಗ್ರಾಪಂ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಡ್ರ್ಯಾಗನ್ ಬೋಟ್ ಪಂದ್ಯಾವಳಿಯ ಸ್ವಾಗತ ಸಮಿತಿ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಷನ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
15 ರಾಜ್ಯ ತಂಡಗಳ ಸ್ಪರ್ಧೆ: ಫೆ.26ರವರೆಗೆ ಸ್ಪರ್ಧೆಗಳು ನಡೆಯಲಿವೆ. ಈ ಚಾಂಪಿಯನ್ಷಿಪ್ನಲ್ಲಿ 15 ರಾಜ್ಯಗಳ 480 ಪುರುಷ, 108 ಮಹಿಳಾ ಕ್ರೀಡಾಪಟುಗಳು ಹಾಗೂ 24ರಷ್ಟು ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಪುರುಷರು, ಮಹಿಳೆಯರು, ಮಿಶ್ರ, ಹಿರಿಯರು ಮತ್ತು ಕಿರಿಯರು ಸೇರಿದಂತೆ ಒಟ್ಟು 18 ವಿಭಾಗಗಳಲ್ಲಿ ಸ್ಪರ್ಧೆಗಳಿದ್ದು, 200ಮೀ., 500ಮೀ. ಹಾಗೂ 2000ಮೀ. ದೂರದ ಸ್ಪರ್ಧೆಗಳಿರುತ್ತವೆ. ಒಂದು ಬೋಟ್ನಲ್ಲಿ 12 (10ಸ್ಪರ್ಧಿಗಳು+2) ಹಾಗೂ 22 (20+2) ಮಂದಿಯ ಎರಡು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗೆ 20 ಸೀಟ್ಗಳ 4 ಹಾಗೂ 12 ಸೀಟ್ಗಳ 7 ಬೋಟ್ಗಳನ್ನು ಬಳಸಲಾಗುತ್ತದೆ ಎಂದು ಕ್ಯಾ. ದಿಲೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.
ಆತಿಥೇಯ ಕರ್ನಾಟಕ ಪುರುಷರ ತಂಡ ಕಳೆದ ನಾಲ್ಕು ಟೂರ್ನಿಗಳ ಚಾಂಪಿಯನ್ ಆಗಿದ್ದು, ಈ ಬಾರಿಯೂ ಮೇಲುಗೈ ಪಡೆಯುವ ನಿರೀಕ್ಷೆ ಇದೆ. ಈ ಬಾರಿ ಕರ್ನಾಟಕವಲ್ಲದೇ ಕೇರಳ, ತಮಿಳುನಾಡು ಪಾಂಡಿಚೇರಿ, ಆಂಧ್ರಪ್ರದೇಶ, ಮಧ್ಯಪ್ರದೇಶ, ದಿಲ್ಲಿ, ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್, ಮಹಾರಾಷ್ಟ್ರ, ರಾಜಸ್ತಾನ್, ಮಣಿಪುರ ರಾಜ್ಯಗಳ ತಂಡಗಳು ಭಾಗವಹಿಸುತ್ತಿವೆ.
ಸ್ಪರ್ಧೆ ನಡೆಯುವ ಮಡಿಸಾಲು ಹೊಳೆಯ ಒಂದು ಕಿ.ಮೀ. ಉದ್ದಕ್ಕೂ ನದಿಯ ಇಕ್ಕೆಲಗಳ ದಂಡೆಯಲ್ಲಿ 5000ಕ್ಕೂ ಅಧಿಕ ಮಂದಿ ಸ್ಪರ್ಧೆಯನ್ನು ವೀಕ್ಷಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.