ಬಿಬಿಸಿ ಯಾವುದೇ ಕಾರ್ಯಸೂಚಿ ಹೊಂದಿಲ್ಲ: ಭಾರತದಲ್ಲಿ ‘ತೆರಿಗೆ ದಾಳಿʼ ಬಳಿಕ ಮುಖ್ಯಸ್ಥರ ಸ್ಪಷ್ಟನೆ

Update: 2023-02-24 14:58 GMT

ಲಂಡನ್, ಫೆ. 24: ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ) ಯಾವುದೇ ಕಾರ್ಯಸೂಚಿಯನ್ನು ಹೊಂದಿಲ್ಲ ಹಾಗೂ ಅದರ ಗುರಿಗಳೇ ಅದನ್ನು ಮುನ್ನಡೆಸುತ್ತಿವೆ ಎಂದು ಜಾಗತಿಕ ಮಾಧ್ಯಮ ಸಂಸ್ಥೆಯ ಮಹಾನಿರ್ದೇಶಕ ಟಿಮ್ ಡೇವೀ ಹೇಳಿದ್ದಾರೆ.

ಬಿಬಿಸಿಯ ಹೊಸದಿಲ್ಲಿ ಮತ್ತು ಮುಂಬೈ ಕಚೇರಿಗಳಲ್ಲಿ ಭಾರತೀಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ ಒಂದು ವಾರದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

‘‘ನಮ್ಮ ಮೊದಲ ಸಾರ್ವಜನಿಕ ಗುರಿಯೆಂದರೆ, ಜನರಿಗೆ ನಿಷ್ಪಕ್ಷ ಸುದ್ದಿಗಗಳು ಮತ್ತು ಮಾಹಿತಿಗಳನ್ನು ಒದಗಿಸುವುದು ಹಾಗೂ ಆ ಮೂಲಕ ತಮ್ಮ ಸುತ್ತಲಿನ ಜಗತ್ತನ್ನು ಅರ್ಥಮಾಡಿಕೊಂಡು ಅದರೊಂದಿಗೆ ವ್ಯವಹರಿಸಲು ನೆರವು ನೀಡುವುದು’’ ಎಂದು ಭಾರತದಲ್ಲಿರುವ ಸಿಬ್ಬಂದಿಗೆ ಕಳುಹಿಸಿರುವ ಇಮೇಲ್ ಒಂದರಲ್ಲಿ ಅವರು ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

‘ತೆರಿಗೆ ಸಮೀಕ್ಷೆ ಕಾರ್ಯ’ ಎಂಬುದಾಗಿ ಅಧಿಕಾರಿಗಳು ಹೇಳಿಕೊಂಡಿರುವ ಶೋಧ ಕಾರ್ಯಾಚರಣೆಯು ಫೆಬ್ರವರಿ 14ರಂದು ಆರಂಭವಾಗಿ ಸುಮಾರು 60 ಗಂಟೆಗಳ ಕಾಲ ಮುಂದುವರಿಯಿತು. ಭಾರತದಲ್ಲಿ ಬಿಬಿಸಿಯ ಆದಾಯವು ದೇಶದಲ್ಲಿನ ಅದರ ಕಾರ್ಯಾಚರಣೆಯ ಮಟ್ಟಕ್ಕೆ ಸರಿಸಮಾನವಾಗಿಲ್ಲ ಎಂಬುದಾಗಿ ಮೂರು ದಿನಗಳ ತಪಾಸಣೆಯ ಬಳಿಕ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಹೇಳಿದೆ.

ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆನ್ನಲಾದ ಪಾತ್ರದ ಬಗ್ಗೆ ಬಿಬಿಸಿ ತಯಾರಿಸಿರುವ ಸಾಕ್ಷಚಿತ್ರವೊಂದು ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಈ ತೆರಿಗೆ ದಾಳಿ ನಡೆದಿದೆ.
ಗುರುವಾರ, ಡೇವೀ ಭಾರತದಲ್ಲಿರುವ ಬಿಬಿಸಿ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ನಿಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ಮತ್ತು ಸುರಕ್ಷಿತವಾಗಿ ಮಾಡಲು ಸಾಧ್ಯವಾಗುವಂತೆ ಬಿಬಿಸಿಯು ನಿಮಗೆ ಸಹಾಯ ಮಾಡುವುದು ಎಂದು ಅವರು ಹೇಳಿದರು.

► ಸತ್ಯ ಸಂಗತಿಗಳನ್ನು ವರದಿ ಮಾಡುವುದು ಪ್ರೇಕ್ಷಕರಿಗೆ ನಾವು ಮಾಡಬೇಕಾದ ಕರ್ತವ್ಯ

‘‘ಭೀತಿ-ರಾಗ-ದ್ವೇಷಗಳಿಗೆ ಒಳಗಾಗದೆ ವರದಿ ಮಾಡುವ ಸಾಮರ್ಥ್ಯಕ್ಕಿಂತ ಹೆಚ್ಚಿನದು ಯಾವುದೂ ಇಲ್ಲ. ಸ್ವತಂತ್ರ ಮತ್ತು ನಿಷ್ಪಕ್ಷ ಪತ್ರಿಕೋದ್ಯಮದ ಮೂಲಕ ಸತ್ಯ ಸಂಗತಿಗಳ ಬೆನ್ನ ಹಿಂದೆ ಹೋಗಿ ಅತ್ಯುತ್ತಮ ಸೃಜನಾತ್ಮಕ ವರದಿಗಳನ್ನು ಸಿದ್ಧಪಡಿಸುವುದು ಮತ್ತು ವಿತರಿಸುವುದು, ಜಗತ್ತಿನಾದ್ಯಂತ ಇರುವ ನಮ್ಮ ಪ್ರೇಕ್ಷಕರಿಗೆ ನಾವು ಮಾಡಬೇಕಾಗಿರುವ ಕರ್ತವ್ಯವಾಗಿದೆ. ಆ ಕೆಲಸದಿಂದ ನಾವು ಹಿಂದೆ ಸರಿಯುವುದಿಲ್ಲ’’ ಎಂದು ಅವರು ಹೇಳಿದರು.

Similar News