ಸೇನೆಯ ಲೆಫ್ಟಿನೆಂಟ್ ಕರ್ನಲ್ ಬಂಧನ; ಮೃತ ಮಹಿಳೆಯ ಪೆಂಡೆಂಟ್ ಮೂಲಕ ಪ್ರಕರಣ ಬೇಧಿಸಿದ ಪೊಲೀಸರು!

Update: 2023-02-26 04:16 GMT

ಗುವಾಹತಿ: ಮೃತ ಮಹಿಳೆಯ ಕೊರಳಲ್ಲಿದ್ದ ಪೆಂಡೆಂಟ್ ಸಹಾಯದಿಂದ ಪೊಲೀಸರು ಹತ್ಯೆ ಆರೋಪಿಯನ್ನು ಪತ್ತೆ ಮಾಡಿದ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ಸಂಬಂಧ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹಾಗೂ ಅಸ್ಸಾಂನ ಶೋಣಿತಾಪುರ ಜಿಲ್ಲೆಯ ತೇಜಪುರ ಸೇನಾ ನಾಲ್ಕನೇ ಕೇಂದ್ರ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್.ವಾಲಿಯಾ ಅವರನ್ನು ಬಂಧಿಸಲಾಗಿದೆ.

ವಂದನಾ ಶ್ರೀ ಎಂಬ ವಿವಾಹಿತ ಮಹಿಳೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಅಧಿಕಾರಿಯನ್ನು ಬಂಧಿಸಲಾಗಿದೆ. ಮೃತ ಮಹಿಳೆ ತಮಿಳುನಾಡಿನ ಚೆನ್ನೈಯವರು. ತಮಿಳುನಾಡಿನಲ್ಲಿ ಸೇವೆ ಸಲ್ಲಿಸಿದ್ದ ವಾಲಿಯಾ ಹಾಗೂ ನಾಲ್ಕು ವರ್ಷದ ಪುತ್ರಿ ಇದ್ದ ಮಹಿಳೆಗೆ ಪ್ರೇಮ ಸಂಬಂಧ ಇತ್ತು ಎನ್ನಲಾಗಿದೆ.

ಫೆಬ್ರುವರಿ 15ರಂದು ಗುವಾಹತಿಯಿಂದ 23 ಕಿಲೋಮೀಟರ್ ದೂರದ ಚಂಗಚೇರಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 31ರಲ್ಲಿ ಮೃತ ಮಹಿಳೆಯ ಶವ ಮತ್ತೆಯಾಗಿತ್ತು. ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಎಸೆಯಲಾಗಿತ್ತು. ಡಿಜಿಪಿ ಬೃಜೆನ್‌ಜೀತ್ ಸಿಂಘ ಅವರ ನೇತೃತ್ವದಲ್ಲಿ ತನಿಖೆ ನಡೆಸಲು ಡಿಜಿಪಿ ಜಿ.ಪಿ.ಸಿಂಗ್ ಆದೇಶ ನೀಡಿದ್ದರು.

ಮೃತ ಮಹಿಳೆಯ ಕೊರಳಲ್ಲಿದ್ದ ಪೆಂಡೆಂಟ್‌ನ ಆಧಾರದಲ್ಲಿ ಪ್ರಕರಣವನ್ನು ತನಿಖೆ ನಡೆಸಲಾಯಿತು. ಇದರಲ್ಲಿ ಮಾ ಲಿಂಗ ಭೈರವಿ ಚಿತ್ರ ಕಂಡು ಬಂದಿತ್ತು. ಈ ಸಂಬಂಧ ದೇವಾಲಯದ ಆಡಳಿತವರ್ಗಕ್ಕೆ ಇ-ಮೇಲ್ ಕಳುಹಿಸಿ ಪ್ರಕರಣದ ತುರ್ತನ್ನು ವಿವರಿಸಲಾಗಿತ್ತು. ಮಹಿಳೆ ಹಾಗೂ ಪೆಂಡೆಂಟ್ ಚಿತ್ರವನ್ನು ಕಳುಹಿಸಿದ್ದೆವು. ಮೂರು ದಿನ ಬಳಿಕ ಮಹಿಳೆಯ ಫೋಟೊ, ಮೊಬೈಲ್ ನಂಬರ್ ಹಾಗೂ ವಿಳಾಸದ ಸಹಿತ ವಿವರ ಲಭ್ಯವಾಯಿತು. ನಿಯತವಾಗಿ ಮಹಿಳೆ ದೇವಸ್ಥಾನಕ್ಕೆ ಬರುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತು ಎಂದು ಬೃಜೇನ್‌ಜೀತ್ ಸಿಂಘ ವಿವರಿಸಿದ್ದಾರೆ.

ಮಹಿಳೆಯ ತಂದೆಗೆ ಕರೆ ಮಾಡಿ ಕೇಳಿದಾಗ ಮಹಿಳೆ ಕೆಲ ದಿನಗಳ ಹಿಂದೆ ನಾಲ್ಕು ವರ್ಷದ ಮಗುವಿನೊಂದಿಗೆ ವಾರಾಣಾಸಿಗೆ ತೆರಳಿದ್ದು ತಿಳಿದು ಬಂತು. ಮೊಬೈಲ್ ಕರೆ ವಿವರ ತೆಗೆದಾಗ ಅದು ದೃಢಪಟ್ಟಿದೆ. ಅಲ್ಲಿಂದ ಆಕೆ ದೆಹಲಿಗೆ ಬಳಿಕ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಗುವಾಹತಿಗೆ ತೆರಳಿದ್ದಾರೆ. ಫೆಬ್ರುವರಿ 14ರಂದು ಸಂಜೆ 7.20ಕ್ಕೆ ಗುಹವಾತಿ ತಲುಪಿದ್ದ ಅವರು ವಾಲಿಯಾ ಜತೆ ಮಾತನಾಡಿದ್ದರು. ಬಳಿಕ ವಾಲಿಯಾ ಆಕೆಯನ್ನು ಬರಮಾಡಿಕೊಂಡಿದ್ದರು.

ಬಳಿಕ ವಾಲಿಯಾ ಮಹಿಳೆಯನ್ನು ಹತ್ಯೆ ಮಾಡಿ ಮಗುವನ್ನು ಕೊಲ್ಕತ್ತಾಗೆ ಕರೆದೊಯ್ದು ಹೌರಾ ರೈಲು ನಿಲ್ದಾಣದಲ್ಲಿ ಬಿಟು ಬಂದಿದ್ದಾರೆ. ಇದು ಸಿಸಿಟಿವಿ ದೃಶ್ಯಾವಳಿಯಿಂದ ದೃಢಪಟ್ಟಿತು. ಅಸ್ಸಾಂ ಪೊಲೀಸರು ಮಗುವನ್ನು ರಕ್ಷಿಸಿ ವಾಪಾಸು ಕರೆ ತಂದಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ಮಹಿಳೆಯ ಜತೆ ಜಗಳವಾಡಿ ಆಕೆಯನ್ನು ಕೊಂದಿದ್ದಾಗಿ ವಾಲಿಯಾ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರ ಹೇಳಿದ್ದಾರೆ.

Similar News