ಇಸ್ರೇಲ್‌ಗೆ ಕೃಷಿ ಅಧ್ಯಯನಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ರೈತ ಭಾರತಕ್ಕೆ ವಾಪಸ್

Update: 2023-02-27 08:31 GMT

ತಿರುವನಂತಪುರಂ: ಸರ್ಕಾರ ಪ್ರಾಯೋಜಿಸಿದ್ದ ಆಧುನಿಕ ಕೃಷಿ ತಂತ್ರಜ್ಞಾನ ಅಧ್ಯಯನದ ಭಾಗವಾಗಿ ಇಸ್ರೇಲಿಗೆ ತೆರಳಿ ನಂತರ ನಾಪತ್ತೆಯಾಗಿದ್ದ ಕೇರಳ ರೈತರೊಬ್ಬರು ಸೋಮವಾರ ಭಾರತಕ್ಕೆ ಮರಳಿದ್ದಾರೆ ಎಂದು ndtv.com ವರದಿ ಮಾಡಿದೆ.

ಸೋಮವಾರ ಮುಂಜಾನೆ 5 ಗಂಟೆಗೆ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರೈತ ಬಿಜು ಕುರಿಯನ್ (48), "ಕೇರಳ ಸರ್ಕಾರ, ರಾಜ್ಯ ಕೃಷಿ ಸಚಿವ ಪಿ.ಪ್ರಸಾದ್,  27 ಮಂದಿ ಸದಸ್ಯರ ನಿಯೋಗ ಹಾಗೂ ಅದರ ಮುಂದಾಳತ್ವ ವಹಿಸಿದ್ದ ಅಧಿಕಾರಿಗಳ ಕ್ಷಮೆ ಯಾಚಿಸುತ್ತೇನೆ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಸ್ರೇಲಿನ ಆಧುನಿಕ ಕೃಷಿ ತಂತ್ರಜ್ಞಾನ ಕುರಿತ ಐದು ದಿನಗಳ ಅಧ್ಯಯನ ಮುಗಿದ ನಂತರ ತಾನುಫೆಬ್ರವರಿ 17ರಿಂದ  ನಾಪತ್ತೆಯಾದ ಕುರಿತು ವಿವರಿಸಿದ ಬಿಜು, ಈ ಅವಧಿಯಲ್ಲಿ ತಾನು ಜೆರುಸಲೇಂ ಹಾಗೂ ಬೆತ್ಲೆಹೆಂನ ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದಾದ ನಂತರ, ನಾನು ನಾಪತ್ತೆಯಾಗಿದ್ದೇನೆ ಎಂದು ಸುದ್ದಿಯಾಗಿರುವುದು ನನ್ನ ಗಮನಕ್ಕೆ ಬಂದು, ಮುಂದೇನು ಮಾಡುವುದು ಎಂದು ತೋಚಲಿಲ್ಲ ಎಂದೂ ಹೇಳಿದ್ದಾರೆ.

ನಾನು ನನ್ನ ಕುಟುಂಬದ ಸದಸ್ಯರಿಗೆ, ಕೆಲವು ವ್ಯಕ್ತಿಗಳ ನೆರವಿನಿಂದ ನಾನು ಸುರಕ್ಷಿತವಾಗಿದ್ದೇನೆ ಎಂದು ಮಾಹಿತಿ ನೀಡಿದ್ದೆ ಮತ್ತು ನನ್ನ ಫೋನ್‌ನಿಂದ ಕರೆ ಮಾಡಲು ಅಂತಾರಾಷ್ಟ್ರೀಯ ಕರೆ ಅಥವಾ ಅಂತರ್ಜಾಲ ಸೌಲಭ್ಯವಿರಲಿಲ್ಲ ಎಂದು ತಿಳಿಸಿದ್ದಾರೆ.

ಈ ನಡುವೆ, ನನ್ನ ಸಹೋದರನ ನೆರವಿನಿಂದ ನಾನು ಭಾರತಕ್ಕೆ ಮರಳಿದೆ. ನನ್ನ ವೀಸಾ ಅವಧಿಯು ಮೇ 8ರವರೆಗೆ ಇದ್ದುದರಿಂದ, ನಾನು ಇಸ್ರೇಲ್‌ನಲ್ಲೇ ಉಳಿದುಕೊಂಡಿದ್ದರಲ್ಲಿ ಯಾವುದೇ ಕಾನೂನು ಬಾಹಿರವಾದದ್ದು ಇರಲಿಲ್ಲ ಎಂದು ಹೇಳಿದ್ದಾರೆ.

ಬಿಜು ಕುರಿಯನ್ ನಾಪತ್ತೆಯಾಗಿದ್ದಾರೆ ಎಂದು ವರದಿಯಾದ ಬೆನ್ನಿಗೆ, ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು ಎಂದು ರಾಜ್ಯ ಕೃಷಿ ಸಚಿವ ಪಿ.ಪ್ರಸಾದ್ ಪ್ರಕಟಿಸಿದ್ದರು.

ಫೆಬ್ರವರಿ 12ರಂದು ರೈತರ ನಿಯೋಗವು ಇಸ್ರೇಲ್‌ಗೆ ತೆರಳಿತ್ತು ಹಾಗೂ ಬಿಜು ಕುರಿಯನ್ ಅಧ್ಯಯನ ಮುಗಿದ ನಂತರ ಫೆಬ್ರವರಿ 17ರಿಂದ ನಾಪತ್ತೆಯಾಗಿದ್ದರು.

ಇದನ್ನೂ ಓದಿ: ನಳಿನ್‌ ರ ಚುನಾವಣೆಗೆ ಟಿಪ್ಪು-ಸಾವರ್ಕರ್‌ ಚರ್ಚೆ ನಾನು ಒಪ್ಪಲ್ಲ: ಯಡಿಯೂರಪ್ಪ

Similar News