ಸೋಪ್ ನೂಡಲ್ಸ್ ಖರೀದಿಯಲ್ಲಿ 20 ಕೋಟಿ ರೂ. ಅವ್ಯವಹಾರ: ವರ್ಷ ಕಳೆದರೂ ಸಲ್ಲಿಕೆಯಾಗದ ಅಂತಿಮ ತನಿಖಾ ವರದಿ

Update: 2023-03-07 08:02 GMT

ಬೆಂಗಳೂರು, ಮಾ.6: ಸಾಬೂನು ತಯಾರಿಸಲು ಬಳಸುವ ಕಚ್ಚಾ ಸಾಮಗ್ರಿಯಾದ ಸೋಪ್ ನೂಡಲ್ಸ್ ಖರೀದಿಯಲ್ಲಿ 20 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಪ್ರಕರಣ ಕುರಿತು ಅಂತಿಮ ತನಿಖಾ ವರದಿ ವರ್ಷ ಕಳೆದರೂ ಸರಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 ಈ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದ ಹಿರಿಯ ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ಅವರು 2021ರ ಮೇ 31ರಂದು ತನಿಖಾ ವರದಿ ಸಲ್ಲಿಸಿದ್ದರು. ಈ ವರದಿ ಕುರಿತು ಅಂತಿಮ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪೆನಿ ನಿರ್ದೇಶಕರ ಮಂಡಳಿಯು ವರದಿಯನ್ನೇ ಮುಚ್ಚಿ ಹಾಕಲು ಹೊರಟಿದೆ ಎಂಬುದಕ್ಕೆ ಇನ್ನಷ್ಟು ನಿದರ್ಶನಗಳು'the-file.in'ಗೆ ಲಭ್ಯವಾಗಿವೆ.

ವರ್ಷದಿಂದಲೂ ತನಿಖಾ ವರದಿಯನ್ನು ತಮ್ಮ ಬಳಿಯೇ ಇರಿಸಿ ಕೊಂಡಿರುವ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು 2023ರ ಫೆ.28ರಂದು ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯೂ 'the-file.in'ಗೆ ಲಭ್ಯವಾಗಿದೆ.

ಪ್ರಕರಣದ ವಿವರ: ಸಾಬೂನು ತಯಾರಿಸಲು ಬಳಸುವ ಕಚ್ಚಾ ಸಾಮಗ್ರಿಯಾದ 17 ಸಾವಿರ ಮೆಟ್ರಿಕ್ ಟನ್ ಪ್ರಮಾಣದ  ಸೋಪ್ ನೂಡಲ್ಸ್ ಖರೀದಿಸಲು 2019ರಲ್ಲಿ ಟೆಂಡರ್ ಕರೆಯಲಾಗಿತ್ತು. ಆದರೆ ಕುಂಟು ನೆಪಗಳನ್ನೊಡ್ಡಿದ್ದ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆಯನ್ನು 5 ಬಾರಿ ಮುಂದೂಡಿದ್ದರು. 6ನೇ ಬಾರಿಗೆ ಮತ್ತೆ ಟೆಂಡರ್ ಕರೆದಿದ್ದ ಅಧಿಕಾರಿಗಳು ನೂಡಲ್ಸ್ ಪ್ರಮಾಣವನ್ನು 17 ಸಾವಿರ ಮೆಟ್ರಿಕ್ ಟನ್‌ನಿಂದ 12 ಸಾವಿರ ಮೆಟ್ರಿಕ್ ಟನ್‌ಗೆ ಇಳಿಸಿದ್ದರು. ಆದರೆ 6ನೇ ಬಾರಿ ಕರೆದಿದ್ದ ಟೆಂಡರ್ ಪ್ರಕ್ರಿಯೆ ಪೂರ್ಣಗೊ ಳಿಸಲಿಲ್ಲ. 

2020ರ ಜನವರಿವರೆಗೆ ಮತ್ತೆ 12 ಸಾವಿರ ಮೆಟ್ರಿಕ್ ಟನ್ ಪ್ರಮಾಣಕ್ಕೆ ಕರೆಯಲಾಗಿತ್ತಾದರೂ ಎಪ್ರಿಲ್, ಆಗಸ್ಟ್, ಸೆಪ್ಟಂಬರ್‌ವರೆಗೂ ಈ ಪ್ರಕ್ರಿಯೆ ಮುಂದುವರಿಯಿತು. ಇದಾದ ನಂತರ ಅದಾನಿ ವಿಲ್ಮರ್ ಸಂಸ್ಥೆಗೆ ಪ್ರತೀ ಟನ್‌ಗೆ 59 ಸಾವಿರ ರೂ.ನಂತೆ ಖರೀದಿ ಆದೇಶ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಇದಾದ ನಂತರ ಮತ್ತೊಮ್ಮೆ ಟೆಂಡರ್ ಕರೆದಿದ್ದ ಅಧಿಕಾರಿಗಳು 6 ಸಾವಿರ ಮೆಟ್ರಿಕ್ ಟನ್‌ಗೆ 3 ಎಫ್ ಇಂಡಸ್ಟ್ರೀಸ್‌ಗೆ ಪ್ರತೀ ಮೆಟ್ರಿಕ್ ಟನ್‌ಗೆ 71,500 ರೂ.ಗೆ ಖರೀದಿ ಆದೇಶ ನೀಡಿದ್ದರು. ಪುನಃ ಅಕ್ಟೋಬರ್ 2020ಕ್ಕೆ ಟೆಂಡರ್ ಕರೆದಿದ್ದ ಅಧಿಕಾರಿಗಳು 2020ರ ನವೆಂಬರ್ 20 ರಂದು ಪ್ರತೀ ಮೆಟ್ರಿಕ್ ಟನ್ 87,000 ರೂ.ಗಳಂತೆ, 104 ಕೋಟಿ 40 ಲಕ್ಷ ರೂ.ಗೆ ಕರ್ನಾಟಕ ಕೆಮಿಕಲ್ ಇಂಡಸ್ಟ್ರೀಸ್‌ಗೆ ಖರೀದಿ ಆದೇಶ ನೀಡಲಾಗಿತ್ತು. ಪದೇ ಪದೇ ಟೆಂಡರ್ ಕರೆದಿದ್ದ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

ಕರ್ನಾಟಕ ಕೆಮಿಕಲ್ ಮತ್ತು ಕರ್ನಾಟಕ ಅರೋಮಾ ಕಂಪೆನಿ ಸೋದರ ಸಂಸ್ಥೆಗಳಾಗಿವೆ. ಇವೆರಡೂ ಒಂದೇ ವಿಳಾಸದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ಕೆಮಿಕಲ್ ಕಂಪೆನಿಯು ತನ್ನ ಸೇವಾವಧಿ ಯಲ್ಲಿ ಎಂದಿಗೂ ಯಾರಿಗೂ 1 ಟನ್‌ನಷ್ಟೂ ಕೂಡ  ನೂಡಲ್ಸ್  ಸರಬರಾಜು ಮಾಡಿಲ್ಲ ಎಂದು ನೌಕರರ ಸಂಘವು ದೂರಿನಲ್ಲಿ ವಿವರಿಸಿತ್ತು. ಇಂತಹ ಸಂಸ್ಥೆಗಳಿಗೆ ಆರ್ಥಿಕ ಬಿಡ್‌ನಲ್ಲಿ ಅವಕಾಶ ನೀಡಿ ಕೆಟಿಪಿಪಿ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.ಇನ್ನು ನೂಡಲ್ಸ್ ಹೊರತುಪಡಿಸಿ ಇನ್ನಿತರ ಸಾಮಗ್ರಿಗಳ ಖರೀದಿಗೆ ವಾರ್ಷಿಕ ಟೆಂಡರ್ ಕರೆದಿದ್ದ ಅಧಿಕಾರಿಗಳು ನೂಡಲ್ಸ್ ಖರೀದಿಗೆ ಮಾತ್ರ  ಪದೇ ಪದೇ ಟೆಂಡರ್ ಪ್ರಕ್ರಿಯೆಗಳನ್ನು   ಮುಂದೂಡಿದ್ದು  ಸಂಶಯಗಳಿಗೆ ಕಾರಣವಾಗಿತ್ತು.

ಅಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಪಾನ್ ಸೆಂಚುರಿ, ಬಿರ್ಲಾ ಕಂಪೆನಿ, ಮಲೇಶ್ಯಾ, ಕೆಎಲ್ಕೆ ಪಾಲ್ಮೋಸಾ, ಇಜೀಲ್ ಕೆಮಿಕಲ್ಸ್ ಪ್ರೈವೈಟ್ ಲಿಮಿಟೆಡ್ ಚೆನ್ನೈ, ಕರನೀತ್ ಎಂಟರ್‌ರ್ಪ್ರೈಸೆಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಬೆಂಗಳೂರು ಬಿರ್ಲಾ ಲಿಮಿಟೆಡ್, ಮಲೇಶ್ಯಾ ಕಂಪೆನಿ 3ಎಫ್ ಇಂಡಸ್ಟ್ರೀಸ್ ಇಂಡಿಯಾ ಸೇರಿದಂತೆ ಹಲವು ಕಂಪೆನಿಗಳು ನೂಡಲ್‌ನ ಕೇವಲ 55ರಿಂದ 60 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದವು. ಆದರೆ ಕೆಎಸ್‌ಡಿಎಲ್‌ನ ಭ್ರಷ್ಟ ಅಧಿಕಾರಿಗಳು ಕರ್ನಾಟಕ ಕೆಮಿಕಲ್ಸ್ಕಂ ಪೆನಿಯಿಂದ ಖರೀದಿಸಿ ಕಂಪೆನಿಯ ಬೊಕ್ಕಸಕ್ಕೆ ನಷ್ಟಕ್ಕೆ ಕಾರಣರಾಗಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು.

ಪತ್ರದಲ್ಲೇನಿದೆ?

2021ರ ಮೇ 31ರ ತನಿಖಾ ವರದಿಯಲ್ಲಿ ನಮೂದಿಸಿರುವ ಆರೋಪ ಅಂಶ 2 ಮತ್ತು ಆರೋಪ ಅಂಶ 4ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮಗಳು ಪ್ರಗತಿಯಲ್ಲಿದ್ದು, ಪ್ರಕರಣದಲ್ಲಿ ಅಂತಿಮ ತೀರ್ಮಾನ ತೆಗೆದುಕೊಂಡ ಕ್ರಮಗಳ ಕುರಿತು ಸರಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿರುತ್ತೀರಿ. ಆದರೆ ಒಂದು ವರ್ಷ ಕಳೆದರೂ ಈ ಕುರಿತು ತಮ್ಮಿಂದ ಯಾವುದೇ ಮಾಹಿತಿ, ವರದಿ ಬಂದಿರುವುದಿಲ್ಲ. ಕೂಡಲೇ ವಿವರವಾದ ವರದಿಯನ್ನು ಸ್ಪಷ್ಟ ದಾಖಲೆಗಳೊಂದಿಗೆ ಸರಕಾರಕ್ಕೆ ಕಳಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆರ್.ಮಂಜುಳಾ ಅವರು 2023ರ ಫೆ.28ರಂದು ಕೆಎಸ್‌ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶಿಸಿದ್ದಾರೆ.

Similar News