ದಿಲ್ಲಿ ಸಚಿವ ಸಂಪುಟ ಸೇರಿದ ಸೌರಭ್ ಭಾರದ್ವಾಜ್, ಅತಿಶಿ

Update: 2023-03-09 17:33 GMT

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ಅವರು ದಿಲ್ಲಿ ಸರ್ಕಾರದ ಶಿಕ್ಷಣ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದು, ಸೌರಭ್ ಭಾರದ್ವಾಜ್ ಅವರು ಆರೋಗ್ಯ ಖಾತೆಯನ್ನು ಪಡೆದಿದ್ದಾರೆ.

ಎಎಪಿಯ ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರಿಂದ ತೆರವಾದ ಸಂಪುಟ ಸ್ಥಾನವನ್ನು ತುಂಬಲು ಇಬ್ಬರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿಸೋಡಿಯಾ ಹಾಗೂ ಜೈನ್‌ ಪ್ರತ್ಯೇಕ ಪ್ರಕರಣಗಳಲ್ಲಿ ಜೈಲಿನಲ್ಲಿದ್ದು, ಭ್ರಷ್ಟಾಚಾರ ಆರೋಪದ ವಿಚಾರಣೆ ಎದುರಿಸುತ್ತಿದ್ದಾರೆ.

 ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಉಭಯ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್ವೀರ್ ಸಿಂಗ್ ಬಿಧೂರ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಲ್ಕಾಜಿ ಕ್ಷೇತ್ರವನ್ನು ಪ್ರತಿನಿಧಿಸುವ ಅತಿಶಿ ಅವರು ಸಾರ್ವಜನಿಕ ಕಾರ್ಯಗಳು, ವಿದ್ಯುತ್ ಮತ್ತು ಪ್ರವಾಸೋದ್ಯಮದ ಖಾತೆಗಳನ್ನು ಸಹ ನಿರ್ವಹಿಸಲಿದ್ದು, ಆರೋಗ್ಯ ಇಲಾಖೆ ಜೊತೆಗೆ ನೀರು ಸರಬರಾಜು ಮತ್ತು ಕೈಗಾರಿಕೆಗಳ ಖಾತೆಯನ್ನು ಭಾರಧ್ವಾಜ್‌ ಅವರಿಗೆ ವಹಿಸಿಕೊಡಲಾಗಿದೆ.

Similar News