ಅಕ್ರಮ ಸಾಗಾಟ ಆರೋಪ : 5ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ; ವಾಹನ ಚಾಲಕ ಸೆರೆ

Update: 2023-03-20 15:46 GMT

ಬ್ರಹ್ಮಾವರ, ಮಾ.20: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಬ್ರಹ್ಮಾವರ ಚಾಂತಾರು ಗ್ರಾಮದ ಕೃಷಿ ಕೇಂದ್ರದ ಬಳಿ ಮಾ.19 ರಂದು ಬೆಳಗಿನ ಜಾವ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ವಾಹನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಿನ್ನಿಗೋಲಿ ತಾಳಿಪಾಡು ನಿವಾಸಿ ಕುಮಾರ (37) ಬಂಧಿತ ಆರೋಪಿ.

ಖಚಿತ ಮಾಹಿತಿಯಂತೆ ಬ್ರಹ್ಮಾವರ ಪ್ರಭಾರ ಆಹಾರ ನಿರೀಕ್ಷಕ ಗುರುಪ್ರಸಾದ ನೇತೃತ್ವ ದಲ್ಲಿ ಪೊಲೀಸರು ಈ ದಾಳಿ ನಡೆಸಿ, ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಕಂಟೈನರ್ ಗೂಡ್ಸ್ ಲಾರಿಯನ್ನು ತಡೆದು ಪರಿಶೀಲಿಸಿದರು.

ಇದರಲ್ಲಿದ್ದ ಅಕ್ಕಿಯನ್ನು ವಾಹನದ ಮಾಲಕ ಪ್ರಶಾಂತ ನಾಯಕ್ ತಿಳಿಸಿದಂತೆ ಶಿರಿಯಾರ ಕಲ್ಮರ್ಗಿ ರೈಸ್ ಮಿಲ್ಲಿನಿಂದ ಮಿಲ್ಲಿನ ಮಾಲಕ ಅನಂತ ನಾಯಕ್ ಕಂಟೈನರ್ ವಾಹನಕ್ಕೆ ತುಂಬಿಸಿ ಕಳುಹಿಸಿಕೊಟ್ಟಿರುವುದಾಗಿ ದೂರಲಾಗಿದೆ. ಲಾರಿಯಲ್ಲಿದ್ದ 5,00,790ರೂ. ಮೌಲ್ಯದ 220 ಅಕ್ಕಿ ಚೀಲಗಳನ್ನು ಹಾಗೂ ಕಂಟೈನರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News