×
Ad

ಉಡುಪಿ ಸೀರೆಗೆ ವಿಶ್ವ ಮಾನ್ಯತೆ: ಡಿಸಿ ಕೂರ್ಮಾರಾವ್ ಆಶಯ

ಉಡುಪಿ ಕೈಮಗ್ಗ ಸೀರೆ ನೇಯ್ಗೆ ತರಬೇತಿ ಉದ್ಘಾಟನೆ

Update: 2023-03-26 17:48 IST

ಉಡುಪಿ : ಉಡುಪಿಯ ಹೆಮ್ಮೆ ಎನಿಸಿರುವ ಕೈಮಗ್ಗದ ಸೀರೆ  ಭೌಗೋಳಿಕವಾಗಿ ವಿಶಿಷ್ಟ ಮಾನ್ಯತೆ ಪಡೆದಿದ್ದು, ಉಡುಪಿ ಸೀರೆಯ ಉತ್ಪಾದನೆ ಅಧಿಕಗೊಂಡು, ವಿಶ್ವ ಮಾನ್ಯತೆ ಪಡೆಯುವಂತಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ, ಜಿಲ್ಲಾ ಖಜಿನ ಪ್ರತಿಷ್ಠಾನ ಟ್ರಸ್ಟ್, ಕೈಮಗ್ಗ ಮತ್ತು ಜವಳಿ ಇಲಾಖೆ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳ ಸಹಯೋಗದಲ್ಲಿ ಇಂದು ರಜತಾದ್ರಿಯ ಜಿಪಂ ಸಭಾಂಗಣ ದಲ್ಲಿ ನಡೆದ ಉಡುಪಿ ಕೈ ಮಗ್ಗ ಸೀರೆ ನೇಯ್ಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿಯ ವಿಶಿಷ್ಠ ಹಾಗೂ ಹೆಮ್ಮಯಾದ ಉಡುಪಿ ಸೀರೆಯ ಬಗ್ಗೆ ದೇಶದ ವಿತ್ತ ಸಚಿವರು ಕೂಡಾ ಧರಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಸೀರೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ಪಾದಿಸಿ ಎಲ್ಲಡೆ ದೊರೆಯುವಂತೆ ಮಾಡುವ ಉದ್ದೇಶದಿಂದ ಆರಂಭಿಸಿರುವ ಈ ನೇಯ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿಸಲಾಗಿದೆ. ಇಲ್ಲಿ ತರಬೇತಿ ಪಡೆದವರು ಇನ್ನೂ ಹೆಚ್ಚು ಬದ್ದತೆಯಿಂದ ಅತ್ಯುತ್ತಮ ರೀತಿಯ ಉಡುಪಿ ಸೀರೆಗಳನ್ನು ತಯಾರಿಸುವ  ಮೂಲಕ  ವಿಶ್ವದಾದ್ಯಂತ ಇದನ್ನು ಪ್ರಸಿದ್ಧಿಗೊಳಿಸಬೇಕು ಎಂದರು.

ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್ ಮಾತನಾಡಿ, ಉಡುಪಿ ಸೀರೆಗಳು ಉಡುಪಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೊರೆಯದೇ ಇರುವುದನ್ನು ಗಮನಿಸಿ, ಆಸಕ್ತರನ್ನು ಗುರುತಿಸಿ ಈ ತರಬೇತಿ ನೀಡಲಾಗುತ್ತಿದೆ. ಇವರಿಗೆ  6 ತಿಂಗಳ ಕಾಲ ಅಗತ್ಯ ತರಬೇತಿ ನೀಡುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಜವಳಿ ಇಲಾಖೆಯಲ್ಲಿ ಲಭ್ಯವಿರುವ ಹಲವು ಸೌಲಭ್ಯಗಳನ್ನು ದೊರಕಿಸಲಾಗುವುದು. ಇವರು ತಯಾರಿಸಿದ ಸೀರೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಿ ಹೆಚ್ಚಿನ ಲಾಭದಾಯಕ ಚಟುವಟಿಕೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಉಡುಪಿ ಪ್ರಾಥಮಿಕ ನೇಕಾರರ ಸಹಕಾರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ  ಮಾತನಾಡಿ, ಅಪೂರ್ವ ಕರಕುಶಲ ಕಲೆಯಾದ ನೇಕಾರಿಕೆಯನ್ನು ಉಳಿಸಿ, ಬೆಳಸುವುದು ಅಗತ್ಯವಿದೆ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರಕ್ಕೆ ಬರುವ ನಿಟ್ಟಿನಲ್ಲಿ ನೇಕಾರಿಕೆ ಉತ್ಪನ್ನಗಳಿಗೆ  ಸೂಕ್ತ ಮಾರುಕಟ್ಟೆ ಹಾಗೂ ಹೆಚ್ಚಿನ ಲಾಭದಾಯಕ ಉದ್ಯಮವನ್ನಾಗಿಸಬೇಕು ಎಂದರು.

ಕೇಂದ್ರ ಸರಕಾರದ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯದ ಚೆಕ್ ಹಾಗೂ ಜವಳಿ ಇಲಾಖೆ ವತಿಯಿಂದ ನೀಡಲಾದ ಸವಲತ್ತುಗಳನ್ನು ವಿತರಿಸಲಾಯಿತು.

ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್, ದಕ್ಷಿಣ ಕನ್ನಡ ಪದ್ಮಶಾಲಿ ಸಂಘದ ಅಧ್ಯಕ್ಷ ರಾಮದಾಸ ಶೆಟ್ಟಿಗಾರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಲಕ್ಷ್ಮಣ ಕೊಡಿಯಾಲಬೈಲು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಾಮ ನಿರ್ದೇಶಿತ ಸದಸ್ಯ ಮಾದವ ಶೆಟ್ಟಿಗಾರ್ ಕೆರೆಕಾಡು ಮೊದಲಾದವರು ಉಪಸ್ಥಿತರಿದ್ದರು.

Similar News