ಮಂಗಳೂರು: ಯುವಕ, ಯುವತಿಯನ್ನು ತಡೆದು ಸುಲಿಗೆ ಪ್ರಕರಣ; ಮೂವರ ಬಂಧನ

Update: 2023-03-29 17:05 GMT

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಯನ್ನು ತಡೆದು ಐ-ಫೋನ್ ಮತ್ತು ಬೈಕ್ ದೋಚಿದ್ದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಬಸ್ತಿಪಡ್ಪು ನಿವಾಸಿ ಝಾಕೀರ್ ಹುಸೇನ್‌ ಅಲಿಯಾಸ್ ಶಾಕೀರ್ (27), ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ಉಬೈದುಲ್ಲಾ ಅಲಿಯಾಸ್ ಉಬ್ಬಿ(33), ಮೇಲಂಗಡಿ ನಿವಾಸಿ ಇಬ್ರಾಹಿಮ್ ಖಲೀಲ್ ಅಲಿಯಾಸ್ ಖಲೀಲ್(22) ಬಂಧಿತ ಆರೋಪಿಗಳು.

ಉಚ್ಚಿಲದ ಜಿಯೋ ಪೆಟ್ರೋಲ್ ಪಂಪ್ ಬಳಿ ಕಳೆದ ಸೋಮವಾರ ಬೆಳಗ್ಗೆ ಯುವಕ ಮತ್ತು ಯುವತಿ ಬೈಕಲ್ಲಿ ತೆರಳುತ್ತಿದ್ದ ವೇಳೆ ಮೂವರ ತಂಡವೊಂದು ಅವರನ್ನು ತಡೆದು ಯುವತಿಯ ಕೈಯಲ್ಲಿದ್ದ ಐ-ಫೋನ್ ಸುಲಿಗೆ ಮಾಡಿದ್ದಲ್ಲದೆ, ಬೈಕನ್ನೂ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬೈಕ್ ಸವಾರ ಅಬ್ದುಲ್ಲ ಎಂಬವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ 2 ಸ್ಕೂಟರ್ ಗಳು, ಸುಲಿಗೆ ನಡೆಸಿದ್ದ ಐಫೋನ್ ಮತ್ತು ಬೈಕನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Similar News