ಉಡುಪಿ | ವಿದೇಶಿ ಕರೆನ್ಸಿ ನೀಡುವುದಾಗಿ ವಂಚಿಸಿ ಸುಲಿಗೆ ಪ್ರಕರಣ: 6 ಮಂದಿ ಅಂತರಾಜ್ಯ ಆರೋಪಿಗಳ ಬಂಧನ, ಸೊತ್ತು ವಶ

Update: 2023-04-02 12:48 GMT

ಉಡುಪಿ, ಎ.1: ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದೇಶಿ ಕರೆನ್ಸಿ ನೀಡುವುದಾಗಿ ವಂಚಿಸಿ ಸುಲಿಗೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಮಾ.31ರಂದು ಬಂಧಿಸಿದ್ದಾರೆ.

ಉತ್ತರಪ್ರದೇಶ ಮೂಲದ ದೆಹಲಿ ಲಕ್ಷ್ಮೀನಗರದ ನಿವಾಸಿ ಮುಹಮ್ಮದ್ ಪೊಲಾಶ್ ಖಾನ್(42), ಮುಂಬೈಯ ಇಂದಿರಾನಗರ ನಿವಾಸಿ ಮುಹಮ್ಮದ್ ಮಹ್ತಾಬ್ ಬಿಲಾಲ್ ಶೇಖ್ (43), ಪಶ್ಚಿಮ ಬಂಗಾಳ ಮೂಲದ ನಾರ್ಥ್‌ ಈಸ್ಟ್ ದೆಹಲಿ ನಿವಾಸಿ ಮುಹಮ್ಮದ್ ಪಿರೋಝ್‌ (30), ಹರಿಯಾಣ ರಾಜ್ಯ ಫರಿದಾಬಾದ್ ನಿವಾಸಿ ನೂರ್ ಮುಹಮ್ಮದ್ (36), ಈಸ್ಟ್ ದೆಹಲಿಯ ಮೀರಜ್ ಖಾನ್ (32), ಮುಹಮ್ಮದ್ ಜಹಾಂಗೀರ್ (60) ಬಂಧಿತ ಆರೋಪಿಗಳು. ಬಂಧಿತರಿಂದ 32100 ದಿರಮ್ಸ್ ನ ವಿದೇಶ ಕರೆನ್ಸಿ ನೋಟುಗಳು, 19 ಮೊಬೈಲ್ ಫೋನ್, 6,29,000ರೂ. ನಗದು, ಮೂರು ಬೈಕ್, 30 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.‌

ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ಸಾವರ್ಜನಿಕರ ಬಳಿ ವಿದೇಶಿ ದಿರಮ್ಸ್ ಕರೆನ್ಸಿ ಬದಲಾವಣೆ ಮಾಡಿಕೊಡುವ ಬಗ್ಗೆ ವಿಚಾರಿಸುವ ನೆಪದಲ್ಲಿ ಪರಿಚಯಿಸಿಕೊಂಡು, ಮೊದಲಿಗೆ ಒಂದು ನೈಜ ವಿದೇಶಿ ಕರೆನ್ಸಿ ನೀಡಿ ಸಾರ್ವಜನಿಕರನ್ನು ನಂಬಿಸಿ, ಬಳಿಕ ತಮ್ಮ ಬಳಿ ಇನ್ನೂ ಸಹ ಇಂತಹ ನೈಜ ದಿರಮ್ಸ್ ಕರೆನ್ಸಿಗಳಿದ್ದು ಕಡಿಮೆ ಮೌಲ್ಯಕ್ಕೆ ನೀಡುವುದಾಗಿ ನಂಬಿಸಿದ್ದರು.

ತಾವು ಗುರುತು ಪಡಿಸಿದ ಸ್ಥಳಗಳಿಗೆ ಹಣದೊಂದಿಗೆ ಸಾರ್ವಜನಿಕರನ್ನು ಬರ ಮಾಡಿ ಕೊಂಡು ಬಟ್ಟೆ ಮತ್ತು ಸೋಪು ಇರಿಸಿದ ಗಂಟು ಹಾಕಿದ ಚೀಲದಲ್ಲಿ ವಿದೇಶೀ ಕರೆನ್ಸಿ ಇರುವುದಾಗಿ ನಂಬಿಸಿ ಚೀಲವನ್ನು ನೀಡಿ ಸಾವರ್ಜನಿಕರು ಪರಿಶೀಲಿಸುವ ಮೊದಲೇ ಅವರ ಕೈನಲ್ಲಿದ್ದ ಹಣದ ಚೀಲವನ್ನು ಸುಲಿಗೆ ಮಾಡಿ ಎಳೆದುಕೊಂಡು ಹೋಗಿದ್ದರು. ಈ ಬಗ್ಗೆ ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಆರೋಪಿಗಳ ಪತ್ತೆಯ ಬಗ್ಗೆ ಎಸ್ಪಿ ಅಕ್ಷಯ್ ಆದೇಶದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ನೇತೃತ್ವದಲ್ಲಿ ಬ್ರಹ್ಮಾವರ ಎಸ್ಸೈ ಮಹಾಂತೇಶ ಯು.ನಾಯಕ್ ಮತ್ತು ಕೋಟ ಎಸ್ಸೈ ಮಧು ಬಿಇ ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ಪ್ರಕರಣದ ಆರೋಪಿಗಳ ಮಾಹಿತಿ ಯನ್ನು ಕಲೆ ಹಾಕಿ ಅವರ ಚಲನವಲನದ ಮೇಲೆ ನಿಗಾವಹಿಸಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ತಂಡ ಯಶ್ವಸಿಯಾಗಿದೆ.

ಬಂಧಿತರ ವಿರುದ್ಧ ದೆಹಲಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿರುವ ವಿಚಾರ ತನಿಖೆಯ ವೇಳೆ ತಿಳಿದು ಬಂದಿದೆ. ಅಲ್ಲದೇ ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಆರೋಪಿಗಳು ಇದೇ ರೀತಿಯ ಕೃತ್ಯ ಎಸಗಿರುವುದು ತಿಳಿದುಬಂದಿದೆ.

ಉಡುಪಿ ಎಸ್ಪಿ ಅಕ್ಷಯ ಎಂ.ಎಚ್., ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ ಮಾರ್ಗದರ್ಶನದಂತೆ, ಡಿವೈಎಸ್ಪಿ ದಿನಕರ ಪಿ.ಕೆ. ನೇತೃತ್ವದ ತಂಡದ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ, ಬ್ರಹ್ಮಾವರ ಎಸ್ಸೈ ಮಹಾಂತೇಶ ಯು.ನಾಯಕ್, ಕೋಟ ಎಸ್ಸೈ ಮಧು ಬಿ.ಇ. ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಮಹಮದ್ ಅಜ್ಮಲ್, ಸಂತೋಷ ರಾಥೋಡ್, ರವಿ ಕುಮಾರ ಮೋಹನ ಕೋತ್ವಾಲ್, ರಾಘವೇಂದ್ರ ಶೆಟ್ಟಿ, ಕೃಷ್ಣಪ್ಪ, ವಾಸು ಪೂಜಾರಿ, ಪ್ರದೀಪ ನಾಯ್ಕ, ಕೃಷ್ಣ ಶೇರಿಗಾರ್, ನಿತಿನ್, ದಿನೇಶ್, ಗೋಪಾಲ ನಾಯ್ಕಿ, ಅಣ್ಣಪ್ಪ, ಪ್ರಶಾಂತ್ ಭಾಗವಹಿಸಿದ್ದಾರೆ.

Similar News