ನ್ಯಾ. ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಮತ್ತು ಮುಸ್ಲಿಮ್ ಮೀಸಲಾತಿ

Update: 2023-04-05 02:47 GMT

ಕರ್ನಾಟಕದ ಹಿಂದುಳಿದ ವರ್ಗಗಳ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಮಾತ್ರವಲ್ಲದೆ ಒಟ್ಟಾರೆ ಸಾಮಾಜಿಕ ಹಿಂದುಳಿದಿರುವಿಕೆಯ ಪ್ರಮಾಣವನ್ನು ಅಂದಾಜು ಮಾಡಲು ಚಿನ್ನಪ್ಪರೆಡ್ಡಿ ಆಯೋಗವು ರಾಜ್ಯದ ಜನಸಂಖ್ಯೆಯಲ್ಲಿ 1988ರಲ್ಲಿ ಒಟ್ಟಾರೆಯಾಗಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರ ಪ್ರಮಾಣವನ್ನು ಮತ್ತು ಪ್ರತೀ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರ ಪ್ರಮಾಣವನ್ನು ಹೋಲಿಸುತ್ತದೆ. ಹಾಗೆಯೇ ಪಾಸಾದವರ ಪ್ರಮಾಣವನ್ನು ಹೋಲಿಸಿದರೂ ತೇರ್ಗಡೆಯಾಗಲು ಜಾತಿಯೊಳಗಿನ ವ್ಯಕ್ತಿಗಳ ಸಾಮರ್ಥ್ಯವೂ ಒಂದು ಪಾತ್ರ ವಹಿಸುವುದರಿಂದ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರ ಪ್ರಮಾಣವು ಅತ್ಯಂತ ಕೀಲಕವಾದದ್ದು ಎಂದು ಪರಿಗಣಿಸುತ್ತದೆ. ಆ ನಂತರದ ಉನ್ನತ ಶಿಕ್ಷಣ, ಅದರಿಂದ ಸಿಗುವ ಉದ್ಯೋಗಾವಕಾಶ ಎಲ್ಲಕ್ಕೂ ಎಸೆಸೆಲ್ಸಿ ಪರೀಕ್ಷೆ ಪ್ರಮುಖ ಹಂತವಾಗಿರುವುದರಿಂದ ಅದನ್ನು ಅತ್ಯಂತ ಪ್ರಮುಖ ಮಾನದಂಡವಾಗಿ ಚಿನ್ನಪ್ಪರೆಡ್ಡಿ ಆಯೋಗ ಪರಿಗಣಿಸುತ್ತದೆ.


ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಮುಸ್ಲಿಮರನ್ನು ಒಂದು ಹಿಂದುಳಿದ ಸಮುದಾಯವಾಗಿ ಪರಿಗಣಿಸಿ ಸ್ವಾತಂತ್ರ್ಯ ಪೂರ್ವದಿಂದಲೂ ನೀಡುತ್ತಿದ್ದ ಮೀಸಲಾತಿಯನ್ನು ಬೊಮ್ಮಾಯಿ ನೇತೃತ್ವದ ಕೋಮುವಾದಿ ಬಿಜೆಪಿ ಸರಕಾರ ರದ್ದುಗೊಳಿಸಿದೆ ಮತ್ತು ಈ ಸಮಾಜದಲ್ಲಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಮುಂದುವರಿದಿರುವ ಜಾತಿಗಳಿಗೆ ಸೃಷ್ಟಿಸಿರುವ ಇಡಬ್ಲುಎಸ್ ಪ್ರವರ್ಗದಲ್ಲಿ ಮುಸ್ಲಿಮರನ್ನು ಸೇರಿಸಲಾಗಿದೆ. ಈ ಕೋಮುವಾದಿ ಸಂಚಿಗೆ ಬೊಮ್ಮಾಯಿ ಸರಕಾರ ಎರಡು ಸುಳ್ಳು ನೆಪಗಳನ್ನು ನೀಡುತ್ತಿದೆ. ಮೊದಲನೆಯದು ಮುಸ್ಲಿಮರಿಗೆ ಈವರೆಗೆ ಧರ್ಮಾಧಾರಿತವಾಗಿ ಮೀಸಲಾತಿಯನ್ನು ಕೊಡಲಾಗುತ್ತಿತ್ತು. ಆದರೆ ಧರ್ಮಾಧಾರಿತ ಮೀಸಲಾತಿ ಅಸಾಂವಿಧಾನಿಕ. ಎರಡನೆಯದು ಮುಸ್ಲಿಮ್ ಮೀಸಲಾತಿ ರದ್ದತಿಯ ಬಗ್ಗೆ ಚುನಾವಣೆ ಘೋಷಣೆಯಾದ ನಂತರ ಪೂರ್ವ ದಿನಾಂಕಿತವಾಗಿ ಮಾರ್ಚ್ 27ರಂದು ಹೊರಡಿಸಿದ ಸರಕಾರಿ ಆದೇಶದಲ್ಲಿ ಹೇಳಿರುವ ಹಸಿ ಸುಳ್ಳು. ಈ ಸರಕಾರಿ ಆದೇಶವು ಮುಸ್ಲಿಮರಿಗೆ 2-ಬಿ ಮೀಸಲಾತಿ ಕಲ್ಪಿಸುವ ಹೊತ್ತಿನಲ್ಲಿ ಆ ಬಗೆಯ ಮೀಸಲಾತಿಗೆ ಮುಸ್ಲಿಮರು ಅರ್ಹರೆನ್ನುವ ಯಾವುದೇ ಶಿಫಾರಸಾಗಲೀ, ಅಧ್ಯಯನವಾಗಲೀ ಇರಲಿಲ್ಲ ಎಂಬ ಮತ್ತೊಂದು ದೊಡ್ಡ ಸುಳ್ಳನ್ನು ಹೇಳಿದೆ.

ಮುಸ್ಲಿಮರು ಹಿಂದುಳಿದ ವರ್ಗಗಳ ಭಾಗ 

ಮೊದಲನೆಯದಾಗಿ ಮುಸ್ಲಿಮರನ್ನು ಇಡೀ ಸಮುದಾಯವಾಗಿ ಹಿಂದುಳಿದಿದೆ ಎಂದು ಪರಿಗಣಿಸಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಕೇರಳ, ತಮಿಳುನಾಡು ಹಾಗೂ ಬಿಹಾರಗಳಲ್ಲಿ ಕೂಡ ಈಗಲೂ "Other Backward Classes -ಇತರ ಹಿಂದುಳಿದ ವರ್ಗಗಳ’ ಭಾಗವಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲಿ ಈಗಲೂ 20 ರಾಜ್ಯಗಳ ವಿವಿಧ ಮುಸ್ಲಿಮ್ ಸಮುದಾಯಗಳು ಮೀಸಲಾತಿಯನ್ನು ಪಡೆದುಕೊಳ್ಳುತ್ತಿವೆ. 2013ರಲ್ಲಿ ಕರ್ನಾಟಕದ ಬಿಜೆಪಿಯ ಸದಾನಂದ ಗೌಡರ ಸರಕಾರವು ಮುಸ್ಲಿಮರ ಒಂಭತ್ತು ಉಪ ಪಂಗಡಗಳನ್ನು ಬಿಟ್ಟು ಉಳಿದೆಲ್ಲಾ ಮುಸ್ಲಿಮರನ್ನು ಕೇಂದ್ರದ ಒಬಿಸಿ ಮೀಸಲಾತಿ ಒದಗಿಸುವಾಗ ಹಿಂದುಳಿದ ವರ್ಗಗಳೆಂದೇ ಪರಿಗಣಿಸಬೇಕೆಂದು ಆದೇಶಿಸಿತ್ತು.

ಏಕೆಂದರೆ ಸಂವಿಧಾನದ ಆರ್ಟಿಕಲ್ 15(4) ಮತ್ತು 16(4)ರ ಪ್ರಕಾರ ಪ್ರಭುತ್ವವು ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಿ ಅವರ ಏಳಿಗೆಗೆ ಮೀಸಲಾತಿಯನ್ನೂ ಒಳಗೊಂಡಂತೆ ಇತರ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಕಾಲಕಾಲಕ್ಕೆ ಸರಕಾರಗಳು ಸಮಾಜದಲ್ಲಿ ಈ ಬಗೆಯ ಹಿಂದುಳಿದಿರುವಿಕೆಗೆ ಬಲಿಯಾಗಿರುವ ಯಾವುದೇ ವರ್ಗಗಳು, ಅವರು ಯಾವುದೇ ಧರ್ಮ, ಸಮುದಾಯ, ಜಾತಿಗಳಿಗೆ ಸೇರಿದ್ದರೂ, ಪತ್ತೆ ಹಚ್ಚಿ ಅವರಿಗೆ ಮೀಸಲಾತಿ ಕಲ್ಪಿಸಬೇಕು. ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಯಾವುದೇ ಸರಕಾರ ಈ ಕಾರಣಗಳಿಗಾಗಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲೇ ಬೇಕು. ಅದಕ್ಕೆ ಧರ್ಮದ ಅಡ್ಡಗೋಡೆಯಿಲ್ಲ. ಇದನ್ನು ಕರ್ನಾಟಕದ ಹೈಕೋರ್ಟಿನ ವಿಭಾಗೀಯ ಪೀಠ 1979ರ ಎಪ್ರಿಲ್ 9 ರಂದು WP 4371/77 ಪ್ರಕರಣದಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಹೇಳಿದೆ:

“..So far as the Muslims are concerned, the commission was unwise in excluding them from the list of Backward Classes solely on the ground that they belong to a religious minority. The Commission has however found that the Muslims are socially and educationally backward and also do not have adequate representation in the service. The fact that they are religious minority is no ground to exclude them from the list of backward classes. The government in our opinion was perfectly justified in listing the Muslims in the list of Backward classes

(ಮುಸ್ಲಿಮರ ಕುರಿತಾಗಿ ಹೇಳಬೇಕೆಂದರೆ ಮುಸ್ಲಿಮರು ಧಾರ್ಮಿಕ ಅಲ್ಪ ಸಂಖ್ಯಾತರಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರನ್ನು ಹಿಂದುಳಿದ ವರ್ಗಗಳಿಂದ ಆಯೋಗವು ಹೊರಗಿಟ್ಟಿದ್ದು ಸಮಂಜಸವಾದ ಕ್ರಮವಲ್ಲ. ಅದೇನೇ ಇದ್ದರೂ ಆಯೋಗವು ಮುಸ್ಲಿಮರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರಕಾರಿ ಸೇವೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ ಎಂಬುದನ್ನು ಗುರುತಿಸಿದೆ. ಅವರು ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ ಎಂಬುದು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಲು ಕಾರಣವೇ ಅಲ್ಲ. ಆದ್ದರಿಂದ ಸರಕಾರವು ಮುಸ್ಲಿಮರನ್ನು ಮತ್ತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ ಸರಿಯಾದುದನ್ನೇ ಮಾಡಿದೆ ಎಂದು ನಾವು ಪರಿಗಣಿಸುತ್ತೇವೆ.)

ಹಾಗೆಯೇ 1992ರಲ್ಲಿ ಮಂಡಲ್ ವರದಿಯ ಸಾಂವಿಧಾನಿಕತೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಒಂಭತ್ತು ನ್ಯಾಯಾಧೀಶರ ಪೀಠವು ಇಂದ್ರಾ ಸಹಾನಿ ಪ್ರಕರಣದಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗಗಳಾಗಿ ಮೀಸಲಾತಿ ಕಲ್ಪಿಸುವ ಬಗ್ಗೆ ನಿಸ್ಸಂದಿಗ್ಧವಾಗಿ ಹೀಗೆ ಸ್ಪಷ್ಟಪಡಿಸಿದೆ:

“This inadequate representation is not confined to any specific section of the people, but all those who fall under the group of social backwardness whether they are Shudras of Hindu community or similarly situated other backward classes of people in other communities, namely, Muslims, Sikhs, Christians etc.”
(https://indiankanoon.org/doc/1363234/)

(ಸರಕಾರಿ ಸೇವೆಗಳಲ್ಲಿ ಅಸಮರ್ಪಕ ಪ್ರಾತಿನಿಧ್ಯವು ಯಾವುದೋ ಒಂದು ಜನವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಎಲ್ಲರಿಗೂ ಅದು ಸಮಾನವಾಗಿ ಅನ್ವಯವಾಗುತ್ತದೆ. ಅವರು ಹಿಂದೂಗಳೊಳಗಿನ ಶೂದ್ರ ಸಮುದಾಯಕ್ಕೆ ಸೇರಿದವರಾಗಿರಬಹುದು ಅಥವಾ ಅದೇ ರೀತಿ ಹಿಂದುಳಿದಿರುವಿಕೆಗೆ ಗುರಿಯಾಗಿರುವ ಮುಸ್ಲಿಮ್, ಸಿಖ್ ಅಥವಾ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದವರಾಗಿದ್ದರೂ ಸಮಾನವಾಗಿ ಅನ್ವಯವಾಗುತ್ತದೆ)

ಹೀಗಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಮುಸ್ಲಿಮ್‌ಸಮುದಾಯಕ್ಕೆ ಸೇರಿದವರಾಗಿದ್ದರೆ ಅವರಿಗೆ ಒಬಿಸಿ ಮೀಸಲಾತಿ ನೀಡಬೇಕಾದ್ದು ಸರಕಾರದ ಸಾಂವಿಧಾನಿಕ ಕರ್ತವ್ಯ. ಅದನ್ನು ಧರ್ಮದ ಆಧಾರದಲ್ಲಿ ನಿರಾಕರಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ. ಹಾಗೆ ನೋಡಿದರೆ ಬೊಮ್ಮಾಯಿ ಸರಕಾರ ಹೊಸ ಮೀಸಲಾತಿ ಸೂತ್ರದಲ್ಲೂ 2-ಡಿ ಪ್ರವರ್ಗದಡಿ ಕ್ರಿಶ್ಚಿಯನ್ನರಿಗೂ, ದಿಗಂಬರ ಜೈನರಿಗೂ, 2-ಎ ಪ್ರವರ್ಗದಡಿಯಲ್ಲಿ ಬೌದ್ಧರಿಗೂ ಮೀಸಲಾತಿಯನ್ನೂ ಮುಂದುವರಿಸಿದೆ. ಹೀಗಾಗಿ ಬೊಮ್ಮಾಯಿ ಸರಕಾರದ ಮೀಸಲಾತಿ ಸೂತ್ರ ಅಸಾಂವಿಧಾನಿಕ ಮಾತ್ರವಲ್ಲ ದ್ವೇಷಪೂರಿತ ಕೋಮುವಾದಿ ಕ್ರಮವೂ ಆಗಿದೆ. ಇದರ ಜೊತೆಗೆ ಮುಸ್ಲಿಮರಿಗೆ 2-ಬಿ ಮೀಸಲಾತಿ ಕಲ್ಪಿಸಲು ಯಾವುದೇ ಅಧ್ಯಯನ ಅಥವಾ ಶಿಫಾರಸು ಇರಲಿಲ್ಲ ಎಂಬ ಮತ್ತೊಂದು ಹಸಿ ಸುಳ್ಳನ್ನು ಬೊಮ್ಮಾಯಿ ಸರಕಾರ ಅಧಿಕೃತವಾಗಿ ಹೇಳಿದೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ 1918ರ ಮಿಲ್ಲರ್ ಸಮಿತಿಯಿಂದ ಮೊದಲುಗೊಂಡು, 1960ರ ನಾಗನಗೌಡ ಸಮಿತಿ, 1977ರ ದೇವರಾಜ ಅರಸು ಸರಕಾರದ ಮೀಸಲಾತಿ ಸೂತ್ರ, 1986ರ ವೆಂಕಟಸ್ವಾಮಿ ಆಯೋಗದ ವರದಿ ಮತ್ತು 1990ರ ನ್ಯಾ. ಚಿನ್ನಪ್ಪರೆಡ್ಡಿ ನೇತೃತ್ವದ ಕರ್ನಾಟಕದ ವೂರನೇ ಹಿಂದುಳಿದ ಆಯೋಗದ ವರದಿಗಳೆಲ್ಲವೂ ಅತ್ಯಂತ ವೈಜ್ಞಾನಿಕ ಅಧ್ಯಯನ ಹಾಗೂ ದತಾಂಶಗಳನ್ನು ಆಧರಿಸಿಯೇ ಮುಸ್ಲಿಮರಲ್ಲಿ ಅತಿ ಹಿಂದುಳಿದವರನ್ನು ಅತಿ ಹಿಂದುಳಿದ ಪ್ರವರ್ಗಗಳಿಗೆ ಸೇರಿಸಿದ್ದಲ್ಲದೆ, ಇಡೀ ಮುಸ್ಲಿಮ್ ಸಮುದಾಯವನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗವಾಗಿ ಪರಿಗಣಿಸಿ ಇಡೀ ಸಮುದಾಯಕ್ಕೆ ಒಬಿಸಿ ಮೀಸಲಾತಿಯನ್ನು ಕಲ್ಪಿಸಿವೆ. ಬೊಮ್ಮಾಯಿ ಸರಕಾರ ರದ್ದು ಮಾಡಿದ ಮುಸ್ಲಿಮರಿಗೆ ನೀಡಲಾಗುತ್ತಿದ್ದ 2-ಬಿ ಪ್ರವರ್ಗದ ಮೀಸಲಾತಿಯು 1994ರ ಸೆಪ್ಟಂಬರ್ 17ರಂದು ಆಗಿನ ವೀರಪ್ಪಮೊಯ್ಲಿ ಸರಕಾರ ಜಾರಿ ಮಾಡಿದ ಹೊಸ ಒಬಿಸಿ ಮೀಸಲಾತಿ ಸೂತ್ರದ ಭಾಗವಾಗಿದೆ. ಈ ಸೂತ್ರವನ್ನು ಆದೇಶವಾಗಿ ಜಾರಿ ಮಾಡಿದ ಸರಕಾರಿ ಆದೇಶದಲ್ಲಿ ಸ್ಪಷ್ಟವಾಗಿ ನಮೂದಿಸಿರುವಂತೆ ಈ ಹೊಸ ಮೀಸಲಾತಿ ಸೂತ್ರವನ್ನು ಸರಕಾರ ನ್ಯಾ. ಚಿನ್ನಪ್ಪರೆಡ್ಡಿ ನೇತೃತ್ವದ ಕರ್ನಾಟಕ ಸರಕಾರದ ಮೂರನೇ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸನ್ನು ಗಮನದಲ್ಲಿಟ್ಟುಕೊಂಡು ರೂಪಿಸಿತ್ತು. ಆದ್ದರಿಂದ ಮುಸ್ಲಿಮರಿಗೆ ನೀಡಲಾಗುತ್ತಿದ್ದ 2-ಬಿ ಮೀಸಲಾತಿಯ ಹಿಂದೆ ಯಾವುದೇ ಅಧ್ಯಯನವೂ ಇರಲಿಲ್ಲ ಮತ್ತು ಯಾವುದೇ ಶಿಫಾರಸೂ ಇರಲಿಲ್ಲ ಎಂಬ ಸರಕಾರದ ಹೇಳಿಗೆ ಅತ್ಯಂತ ಹಸಿ ಹಸಿ ಸುಳ್ಳು. ಇದನ್ನು ಚಿನ್ನಪ್ಪರೆಡ್ಡಿ ಆಯೋಗದ ವರದಿಯ ಅಧ್ಯಯನ ಮತ್ತು ಶಿಫಾರಸುಗಳನ್ನು ಗಮನಿಸಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ನ್ಯಾ. ಚಿನ್ನಪ್ಪರೆಡ್ಡಿ ವರದಿ

ಕರ್ನಾಟಕ ಸರಕಾರವು ಮೂರನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನ್ಯಾ. ಚಿನ್ನಪ್ಪರೆಡ್ಡಿಯವರನ್ನು ನೇಮಿಸಿ ಕರ್ನಾಟಕದಲ್ಲಿ ಒಬಿಸಿ ಮೀಸಲಾತಿಗೆ ಅರ್ಹವಾಗಿರುವ ವರ್ಗಗಳನ್ನು ಗುರುತಿಸಿ ಅವರಿಗೆ ಯಾವ ಬಗೆಯ ಮೀಸಲಾತಿಯನ್ನು ಕಲ್ಪಿಸಬೇಕೆಂದು ಶಿಫಾರಸು ಮಾಡಲು ಕೋರಿಕೊಂಡಿತ್ತು. ನ್ಯಾ. ಚಿನ್ನಪ್ಪರೆಡ್ಡಿಯವರು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿದ್ದು ವಸಂತ್ ಕುಮಾರ್ ವರ್ಸಸ್ ಕರ್ನಾಟಕ ಸರಕಾರ ಪ್ರಕರಣದಲ್ಲಿ ದೇವರಾಜ ಅರಸು ಸರಕಾರದ ಮೀಸಲಾತಿ ಸೂತ್ರವನ್ನು ಪರಿಶೀಲಿಸಿದ ಸಾಂವಿಧಾನಿಕ ಪೀಠದಲ್ಲಿ ಒಬ್ಬರಾಗಿದ್ದರು. ಹಾಗೆಯೇ ದೇಶದಲ್ಲಿ ಹಿಂದುಳಿದ ವರ್ಗಗಳನ್ನು ಪತ್ತೆ ಹಚ್ಚುವಾಗ ಅನುಸರಿಸಬೇಕಾದ ಮಾನದಂಡಗಳನ್ನು ಒದಗಿಸಿದವರಲ್ಲಿ ಒಬ್ಬರಾಗಿದ್ದರು. 1988ರಲ್ಲಿ ತನ್ನ ಅಧ್ಯಯನವನ್ನು ಪ್ರಾರಂಭಿಸಿದ ನ್ಯಾ. ಚಿನ್ನಪ್ಪರೆಡ್ಡಿ ಆಯೋಗವು ಎರಡು ವರ್ಷಗಳ ಕಾಲ ವಿಸ್ತೃತವಾದ ಅಂಕಿಅಂಶಗಳನ್ನು ಸಂಗ್ರಹಿಸಿತು.

543 ಹಳ್ಳಿಗಳಲ್ಲಿ ಪ್ರತ್ಯಕ್ಷ ಸರ್ವೇ ಅಧ್ಯಯನ ನಡೆಸಿತು ಹಾಗೂ ಜಾತಿವಾರು ಜನಸಂಖ್ಯೆ, ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರ ಮತ್ತು ಪಾಸಾದವರ ಜಾತಿವಾರು, ಸಮುದಾಯವಾರು ಮಾಹಿತಿ, ಉನ್ನತ ಶಿಕ್ಷಣಕ್ಕೆ ಹೋದವರ ಜಾತಿ-ಸಮುದಾಯವಾರು ಮಾಹಿತಿ, ಆದಾಯ ಮಾಹಿತಿ, ಸರಕಾರಿ ಸೇವೆಗಳಲ್ಲಿ ಜಾತಿವಾರು-ಸಮುದಾಯವಾರು ಪ್ರಾತಿನಿಧ್ಯ ಇತ್ಯಾದಿಗಳ ಬಗ್ಗೆ ಕೂಲಂಕಷ ಮಾಹಿತಿಯನ್ನು ಒಟ್ಟು ಮಾಡಿತು. ಭಾರತೀಯ ಸಮಾಜದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಡತನಕ್ಕೆ ದೂಡಲ್ಪಟ್ಟಿರುವುದು ಹಾಗೂ ಅಧಿಕಾರ-ಸಂಪತ್ತುಗಳ ನಿರಾಕರಣೆಯು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗೆ ಕಾರಣ ಎಂದು ಚಿನ್ನಪ್ಪರೆಡ್ಡಿ ಆಯೋಗವು ಪರಿಗಣಿಸಿತು ಮತ್ತು ಈ ಹಿಂದುಳಿದಿರುವಿಕೆಯು ಜ್ಞಾನ ಮತ್ತು ಸಂಪತ್ತಿನ ಸಾಪೇಕ್ಷ ಕೊರತೆಯಲ್ಲಿ ವ್ಯಕ್ತವಾಗುತ್ತದೆ. ಇವೆಲ್ಲಕ್ಕೂ ಬಡತನ ಕಾರಣವಾಗಿದ್ದರೆ ಜಾತಿಯು ಅದರ ಮುಖವಾಗಿರುತ್ತದೆ. ಜಾತಿ ಶ್ರೇಣೀಕರಣದಲ್ಲಿ ಕೆಳಗಿದ್ದಷ್ಟು ಜ್ಞಾನ ಮತ್ತು ಸಂಪತ್ತಿನಿಂದ ದೂರವಾಗುತ್ತಾ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿಯುತ್ತಾ ಹೋಗುವುದು ಭಾರತ ಸಮಾಜದ ನಿರ್ದಿಷ್ಟ ಲಕ್ಷಣ ಎಂದು ಆಯೋಗವು ಪರಿಗಣಿಸಿತು.

ಈ ಹಿಂದುಳಿದಿರುವಿಕೆಯನ್ನು ಅಳೆಯಲು ಪ್ರಧಾನವಾಗಿ ಮೂರು ಮಾನದಂಡಗಳನ್ನು ರೂಪಿಸಿತು ಮತ್ತು ಅದರ ಸುತ್ತ ಕ್ಷೇತ್ರ ಅಧ್ಯಯನ ಹಾಗೂ ಅಂಕಿಅಂಶಗಳನ್ನು ಸಂಗ್ರಹಿಸಿತು. 1) ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರ ರಾಜ್ಯದ ಜನಸಂಖ್ಯೆಯ ಸರಾಸರಿಗೆ ಮತ್ತು ಪಾಸಾದವರ ಸರಾಸರಿಗೆ ಆಯಾ ಜಾತಿ ಮತ್ತು ಸಮುದಾಯಗಳ ಸರಾಸರಿಯನ್ನು ಹೋಲಿಸುವುದು 2) ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರ ಜಾತಿವಾರು ಸರಾಸರಿ 3) ಸರಕಾರದ ಎ.ಬಿ.ಸಿ.ಡಿ. ಶ್ರೇಣಿಗಳ ಉದ್ಯೋಗಗಳಲ್ಲಿ, ಸರಕಾರಿ ಕಾರ್ಖಾನೆ, ವಿಶ್ವವಿದ್ಯಾನಿಲಯಗಳ ನೌಕರರ ಜಾತಿವಾರು ಪ್ರಮಾಣದ ಅಂಕಿಅಂಶ ..ಇತ್ಯಾದಿಗಳು. ಇವೆಲ್ಲದರ ಬಗ್ಗೆ ಅಧ್ಯಯನ ಮಾಡುವಾಗಲೂ ಹಿಂದೂ ಸಮುದಾಯದ ಜಾತಿವಾರು ಅಂಕಿಅಂಶಗಳನ್ನು ಸಂಗ್ರಹಿಸುವುದರ ಜೊತೆಗೆ ಹಿಂದೂಯೇತರ ಸಮುದಾಯಗಳಾದ ಮುಸ್ಲಿಮ್, ಕ್ರಿಶ್ಚಿಯನ್, ಬೌದ್ಧ ಮತ್ತು ಸಿಖ್ ಸಮುದಾಯಗಳ ಅಂಕಿಅಂಶಗಳನ್ನು ಆಯೋಗವು ಸಂಗ್ರಹಿಸಿತು. ಇವೆಲ್ಲಕ್ಕೂ 1988ರ ಅಂಕಿಅಂಶಗಳನ್ನು ಬಳಸಿಕೊಂಡಿತು. ಈ ಅಂಕಿಅಂಶಗಳು: ""JUSTICE: Journey Of The Karnataka Backward Classes” ಎಂಬ ಶೀರ್ಷಿಕೆಯReport of the Karnataka Third Backward Classes Commission- Vol-1ರಲ್ಲಿ ವಿಷದವಾಗಿ ದಾಖಲಾಗಿದೆ.

ಚಿನ್ನಪ್ಪರೆಡ್ಡಿ ಆಯೋಗವು ಮೇಲಿನ ಮೂರೂ ಪ್ರಶ್ನೆಗಳ ಸುತ್ತ ಕರ್ನಾಟಕದ 102 ಜಾತಿ ಮತ್ತು ಸಮುದಾಯಗಳಿಗೆ ಸಂಬಂಧಪಟ್ಟ ಅಂಕಿಅಂಶವನ್ನೂ ಪ್ರತ್ಯೇಕವಾಗಿ ಸಂಗ್ರಹಿಸಿ ನಂತರ ಅವುಗಳನ್ನು ಸಾಪೇಕ್ಷ ತುಲನೆ ಮಾಡಿ ಹಿಂದುಳಿದಿರುವಿಕೆಯ ದೂರವನ್ನು ನಿಶ್ಚಿತಗೊಳಿಸಿ ತಲಾವಾರು ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿತು. ಆದರೆ ಈ ಲೇಖನದಲ್ಲಿ ಅವೆಲ್ಲದರ ವಿವರಗಳನ್ನು ಚರ್ಚಿಸಿಲ್ಲ. ಬದಲಿಗೆ ಈ ಎಲ್ಲಾ ಮಾನದಂಡಗಳಲ್ಲಿ ಸಮಾಜದಲ್ಲಿ ಅತ್ಯಂತ ಮುಂದುವರಿದ ಸಮುದಾಯವಾಗಿರುವ ಬ್ರಾಹ್ಮಣ ಜಾತಿಯ ಅಂಕಿಅಂಶಗಳನ್ನು ಹಾಗೂ ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಪರಿಶಿಷ್ಟ ಜಾತಿಗಳ ಅಂಕಿಅಂಶಗಳನ್ನು ಒದಗಿಸಲಾಗಿದೆ ಮತ್ತು ಅದರ ಹೋಲಿಕೆಯಲ್ಲಿ ಮುಸ್ಲಿಮ್‌ಸಮುದಾಯದ ಸಂಬಂಧಪಟ್ಟ ಅಂಕಿಅಂಶಗಳನ್ನು ನೀಡಲಾಗಿದೆ. ಬೊಮ್ಮಾಯಿ ಸರಕಾರ ಮುಸ್ಲಿಮರನ್ನು ಅತ್ಯಂತ ಮುಂದುವರಿದ ಬ್ರಾಹ್ಮಣರ ಜೊತೆಗೆ ಸ್ಪರ್ಧೆಗೊಡ್ಡಿರುವುದು ಇದಕ್ಕೆ ಒಂದು ಕಾರಣವಾದರೆ ಮುಸ್ಲಿಮರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಸರಿಯಾಗಿ ಗ್ರಹಿಸುವಲ್ಲಿ ಇದು ಒಂದು ಉತ್ತಮ ಸಾಧನವಾಗಬಹುದು ಎಂದು ನಾನು ಭಾವಿಸುತ್ತೇನೆ.

ಶೈಕ್ಷಣಿಕ ಹಿಂದುಳಿದಿರುವಿಕೆ

ಕರ್ನಾಟಕದ ಹಿಂದುಳಿದ ವರ್ಗಗಳ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಮಾತ್ರವಲ್ಲದೆ ಒಟ್ಟಾರೆ ಸಾಮಾಜಿಕ ಹಿಂದುಳಿದಿರುವಿಕೆಯ ಪ್ರಮಾಣವನ್ನು ಅಂದಾಜು ಮಾಡಲು ಚಿನ್ನಪ್ಪರೆಡ್ಡಿ ಆಯೋಗವು ರಾಜ್ಯದ ಜನಸಂಖ್ಯೆಯಲ್ಲಿ 1988ರಲ್ಲಿ ಒಟ್ಟಾರೆಯಾಗಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರ ಪ್ರಮಾಣವನ್ನು ಮತ್ತು ಪ್ರತೀ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರ ಪ್ರಮಾಣವನ್ನು ಹೋಲಿಸುತ್ತದೆ. ಹಾಗೆಯೇ ಪಾಸಾದವರ ಪ್ರಮಾಣವನ್ನು ಹೋಲಿಸಿದರೂ ತೇರ್ಗಡೆಯಾಗಲು ಜಾತಿಯೊಳಗಿನ ವ್ಯಕ್ತಿಗಳ ಸಾಮರ್ಥ್ಯವೂ ಒಂದು ಪಾತ್ರ ವಹಿಸುವುದರಿಂದ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರ ಪ್ರಮಾಣವು ಅತ್ಯಂತ ಕೀಲಕವಾದದ್ದು ಎಂದು ಪರಿಗಣಿಸುತ್ತದೆ. ಆ ನಂತರದ ಉನ್ನತ ಶಿಕ್ಷಣ, ಅದರಿಂದ ಸಿಗುವ ಉದ್ಯೋಗಾವಕಾಶ ಎಲ್ಲಕ್ಕೂ ಎಸೆಸೆಲ್ಸಿ ಪರೀಕ್ಷೆ ಪ್ರಮುಖ ಹಂತವಾಗಿರುವುದರಿಂದ ಅದನ್ನು ಅತ್ಯಂತ ಪ್ರಮುಖ ಮಾನದಂಡವಾಗಿ ಚಿನ್ನಪ್ಪರೆಡ್ಡಿ ಆಯೋಗ ಪರಿಗಣಿಸುತ್ತದೆ. 1988ರಲ್ಲಿ ಕರ್ನಾಟಕದ ಜನಸಂಖ್ಯೆ 4.4 ಕೋಟಿ ಎಂದು ಆಯೋಗ ವೈಜ್ಞಾನಿಕವಾಗಿ ಅಂದಾಜಿಸುತ್ತದೆ.

ಅಲ್ಲದೆ ವೆಂಕಟಸ್ವಾಮಿ ಆಯೋಗವು 1984-86ರಲ್ಲಿ 60 ಲಕ್ಷ ಜನರನ್ನು ಭೇಟಿ ಮಾಡಿ 1931ರ ಕೊನೆಯ ಜಾತಿ ಸೆನ್ಸಸ್ ಅನ್ನು ಗಮನದಲ್ಲಿಟ್ಟುಕೊಂಡು ಮುಂದಿರಿಸಿದ ಜಾತಿವಾರು ಜನಸಂಖ್ಯೆಯ ಅಂದಾಜನ್ನು ಸರಕಾರವು ಒಪ್ಪಿಕೊಂಡಿತ್ತು. ಚಿನ್ನಪ್ಪರೆಡ್ಡಿ ಆಯೋಗವು ಆ ಅಂದಾಜನ್ನು ಒಪ್ಪಿಕೊಳ್ಳುತ್ತದೆ. ಅದರಂತೆ 1988ರ ವೇಳೆಗೆ ಬ್ರಾಹ್ಮಣರು ಕರ್ನಾಟಕದ ಜನಸಂಖ್ಯೆಯ ಶೇ. 3.4ರಷ್ಟು (15.23 ಲಕ್ಷ), ಪರಿಶಿಷ್ಟ ಜಾತಿ - ಶೇ. 16.7 (73.7 ಲಕ್ಷ) ಮತ್ತು ಮುಸ್ಲಿಮರು ಕರ್ನಾಟಕದ ಜನಸಂಖ್ಯೆಯ ಶೇ. 11.67ರಷ್ಟು (51.47 ಲಕ್ಷ) ಇದ್ದರೆಂದು ಆಯೋಗವು ಅಂದಾಜಿಸುತ್ತದೆ. 1988ರಲ್ಲಿ ಕರ್ನಾಟಕದಲ್ಲಿ ಒಟ್ಟು 3.4 ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದರು. ಅರ್ಥಾತ್ ಎಸೆಸೆಲ್ಸಿವರೆಗೆ ತಲುಪಿದರು. ಇದು ಕರ್ನಾಟಕದ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಲ್ಲಿ ಶೇ.0.77ರಷ್ಟು. ಇದರಲ್ಲಿ 1,34,160 ವಿದ್ಯಾರ್ಥಿಗಳು ತೇರ್ಗಡೆಯಾದರು. ಎಂದರೆ ಶೇ. 0.39ರಷ್ಟು. ಇವು ರಾಜ್ಯದ ಒಟ್ಟಾರೆ ಸರಾಸರಿ. ಯಾವ ಜಾತಿಗಳ ಸರಾಸರಿ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದ ರಾಜ್ಯದ ಸರಾಸರಿಯನ್ನು ಮೀರಿರುತ್ತದೋ ಆ ಜಾತಿಗಳು ರಾಜ್ಯದ ಸರಾಸರಿಗಿಂತ ಕಡಿಮೆ ಪ್ರಮಾಣ ಇರುವ ಜಾತಿಗಳಿಗಿಂತ ಸಾಪೇಕ್ಷವಾಗಿ ಶೈಕ್ಷಣಿಕವಾಗಿ ಮುಂದುವರಿದ ಜಾತಿಗಳೆಂದು ಆಯೋಗವು ಪರಿಗಣಿಸಿತು.

ಅದರಂತೆ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸಿದವರಲ್ಲಿ ರಾಜ್ಯದ ಸರಾಸರಿ ಶೇ.0.77 ಇದ್ದರೆ ಬ್ರಾಹ್ಮಣರ ಜಾತಿಯ ಸರಾಸರಿ ಶೇ. 1.41 ಅಂದರೆ ರಾಜ್ಯದ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು. ಪರಿಶಿಷ್ಟ ಜಾತಿಗಳ ಸರಾಸರಿ 0.59. ಅಂದರೆ ರಾಜ್ಯದ ಸರಾಸರಿಗಿಂತ ಶೇ. 30ರಷ್ಟು ಕಡಿಮೆ. ಮುಸ್ಲಿಮರ ಸರಾಸರಿ ಶೇ. 0.48 ಮಾತ್ರ. ಅಂದರೆ ಶೈಕ್ಷಣಿಕವಾಗಿ ಮುಸ್ಲಿಮರ ಪರಿಸ್ಥಿತಿ ಪರಿಶಿಷ್ಟ ಜಾತಿಗಳಿಗಿಂತ ಹೀನಾಯ ಮತ್ತು ಬ್ರಾಹ್ಮಣರ ಸರಾಸರಿಗಿಂತ ನಾಲ್ಕುಪಟ್ಟು ಕಡಿಮೆ. ಅಂದರೆ ಮುಸ್ಲಿಮರಿಗಿಂತ ಬ್ರಾಹ್ಮಣರು ನಾಲ್ಕುಪಟ್ಟು ಶೈಕ್ಷಣಿಕವಾಗಿ ಮುಂದುವರಿದ ಜಾತಿಯಾಗಿದೆ. ಈಗ ಅವರೊಡನೆ ಸರಿಸಮವಾಗಿ ಪೈಪೋಟಿ ಮಾಡಲು ಮುಸ್ಲಿಮರನ್ನು ದೂಡಲಾಗಿದೆ. ಹಾಗೆಯೇ ರಾಜ್ಯದ ಜನಸಂಖ್ಯೆಗೆ ಹೋಲಿಸಿದಲ್ಲಿ ಬ್ರಾಹ್ಮಣರ ಜನಸಂಖ್ಯೆ ಕೇವಲ ಶೇ. 3.4 ಮಾತ್ರ ಇದ್ದರೂ, ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಪ್ರಮಾಣ ಶೇ. 6.37. ಆದರೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ರಾಜ್ಯದ ಜನಸಂಖ್ಯೆಯ ಶೇ. 16.7ರಷ್ಟಿದ್ದರೂ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರಲ್ಲಿ ಪರಿಶಿಷ್ಟ ಜಾತಿಗಳ ಪ್ರಮಾಣ ಕೇವಲ ಶೇ. 7.41ರಷ್ಟು. ಆದರೆ ಮುಸ್ಲಿಮರು ಜನಸಂಖ್ಯೆಯ ಶೇ. 11.6ರಷ್ಟಿದ್ದರೂ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡವರಲ್ಲಿ ಕೇವಲ ಶೇ. 7.41 ಮಾತ್ರ ಮುಸ್ಲಿಮರು.

ಹಾಗೆಯೇ ಮೆಡಿಕಲ್, ಇಂಜಿನಿಯಂರಿಂಗ್ ಹಾಗೂ ಸ್ನಾತಕೋತ್ತರ ಪದವಿಗಳನ್ನು ಅಧ್ಯಯನ ಮಾಡುತ್ತಿರುವವರ ಜಾತಿವಾರು ತಲಾವಾರು ಪ್ರಮಾಣವನ್ನು ಆಯೋಗವು ಪರಿಶೀಲಿಸಿತು. ಬ್ರಾಹ್ಮಣರ ಜನಸಂಖ್ಯೆ ಕೇವಲ ಶೇ. 3.4 ಇದ್ದರೂ ಈ ಒಟ್ಟಾರೆ ಉನ್ನತ ಶಿಕ್ಷಣದಲ್ಲಿ ಬ್ರಾಹ್ಮಣರ ಸಂಖ್ಯೆ ಶೇ. 21.46, ಲಿಂಗಾಯತರ ಜಾತಿವಾರು ಪ್ರಮಾಣ ಶೇ. 15.3 ಇದ್ದರೆ ಉನ್ನತ ಶಿಕ್ಷಣದಲ್ಲಿ ಶೇ. 15.68ರಷ್ಟು ವಿದ್ಯಾರ್ಥಿಗಳು ಆ ಸಮುದಾಯಕ್ಕೆ ಸೇರಿದವರು. ಒಕ್ಕಲಿಗರು ರಾಜ್ಯದ ಜನಸಂಖ್ಯೆಯ ಶೇ. 10.8ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಅವರ ಪಾಲು ಶೇ. 11.63. ಆದರೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಶೇ. 16.7ರಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟರ ಪ್ರಮಾಣ 14.44. ಅಂದರೆ ಅವರ ಜನಸಂಖೆಯ ಪ್ರಮಾಣಕ್ಕಿಂತ ಕಡಿಮೆ. ಆದರೆ ಇದರಲ್ಲೂ

Similar News