ಸಚಿವಾಲಯದ ಇಲಾಖೆಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಕರ್ತವ್ಯಲೋಪ

ಸರಕಾರಿ ಅಂಕಿ ಅಂಶದಿಂದ ಬಹಿರಂಗ

Update: 2023-04-06 02:57 GMT

ಬೆಂಗಳೂರು: ಸಚಿವಾಲಯದ ಇಲಾಖೆಗಳಲ್ಲಿ ಭ್ರಷ್ಟಾಚಾರ, ನಿಯಮ ಉಲ್ಲಂಘನೆ, ಕರ್ತವ್ಯಲೋಪ, ದುರುಪಯೋಗ ಸಹಿತ ಮತ್ತಿತರ ಗಂಭೀರ ಆರೋಪಗಳಿಗೆ ಗುರಿಯಾಗುತ್ತಿರುವ ಅಧಿಕಾರಿಗಳ ಸಂಖ್ಯೆ ಮತ್ತು 6 ತಿಂಗಳಿಗೂ ಮೇಲ್ಪಟ್ಟ ಅಮಾನತು ಪ್ರಕರಣಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಇಲಾಖಾ ಪ್ರಕರಣಗಳು, ಇಲಾಖಾ ವಿಚಾರಣೆ, ಲೋಕಾಯುಕ್ತ ಪ್ರಕರಣಗಳ ಸಂಖ್ಯೆಯೂ ಏರುಗತಿಯಲ್ಲಿವೆ. ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2023ರ ಮಾರ್ಚ್ 21ರಂದು  ನಡೆಯಲಿದ್ದ ಸಭೆಗೆ ಇಲಾಖಾ ಮುಖ್ಯಸ್ಥರು ಪ್ರಕರಣಗಳ ಕುರಿತು ಅಂಕಿ ಅಂಶಗಳನ್ನು ಮಂಡಿಸಿದ್ದಾರೆ. ಈ ಕುರಿತಾದ ಸಮಗ್ರ ವಿವರಗಳು  "the-file.in"ಗೆ ಲಭ್ಯವಾಗಿವೆ. ಇಲಾಖಾ ವಿಚಾರಣೆ ಮತ್ತು ಲೋಕಾಯುಕ್ತ ಪ್ರಕರಣಗಳ ಸಂಖ್ಯೆಯು ನಗರಾಭಿವೃದ್ದಿ, ಕಂದಾಯ ಇಲಾಖೆಯಲ್ಲಿಯೇ ಅತಿ ಹೆಚ್ಚಿವೆ.

ಸಚಿವಾಲಯದ ಇಲಾಖೆಗಳಲ್ಲಿ ಒಟ್ಟು 1,163 ಇಲಾಖಾ ಪ್ರಕರಣಗಳ ಪೈಕಿ ನಿಯಮ 11ರಡಿ 853 ಹಾಗೂ ನಿಯಮ 12ರ ಅಡಿ 96 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಜಾರಿ ಮಾಡಲಾಗಿದೆ. ದೋಷಾರೋಪ ಪಟ್ಟಿಗೆ ವಿವರಣೆ ಕೊಟ್ಟಿರುವ 706 ಪ್ರಕರಣಗಳಲ್ಲಿ 639 ಪ್ರಕರಣಗಳಿಗೆ ವಿಚಾರಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಪೈಕಿ 325 ಪ್ರಕರಣಗಳಲ್ಲಿ ಮಾತ್ರ ವಿಚಾರಣಾಧಿಕಾರಿಗಳಿಂದ ವರದಿ ಬಂದಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ 12, ಆಹಾರ ನಾಗರಿಕ ಸರಬರಾಜು ಇಲಾಖೆಯಲ್ಲಿ 39, ಆರ್ಥಿಕ ಇಲಾಖೆಯಲ್ಲಿ 42, ಜಲಸಂಪನ್ಮೂಲ ಇಲಾಖೆಯಲ್ಲಿ 19, ತೋಟಗಾರಿಕೆ ಇಲಾಖೆಯಲ್ಲಿ 17, ಉನ್ನತ ಶಿಕ್ಷಣದಲ್ಲಿ 20, ಕಂದಾಯ ಇಲಾಖೆಯಲ್ಲಿ 336, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ 30, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 15, ವಾಣಿಜ್ಯ ಕೈಗಾರಿಕೆ ಇಲಾಖೆಯಲ್ಲಿ 23, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯಲ್ಲಿ 149, ಸಹಕಾರ ಇಲಾಖೆಯಲ್ಲಿ 10, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 80, ನಗರಾಭಿವೃದ್ಧಿ ಇಲಾಖೆಯಲ್ಲಿ 109, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 25, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಲ್ಲಿ 22 ಪ್ರಕರಣಗಳು ನಿಯಮ 11ರಡಿ ದಾಖಲಾಗಿರುವುದು ಗೊತ್ತಾಗಿದೆ.

ನಿಯಮ 12 ರಡಿಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯಲ್ಲಿ 10, ಕಂದಾಯ ಇಲಾಖೆಯಲ್ಲಿ 10, ನಗರಾಭಿವೃದ್ಧಿ ಇಲಾಖೆಯಲ್ಲಿ 23 ಪ್ರಕರಣಗಳು ದಾಖಲಾಗಿವೆ. 2ನೇ ಕಾರಣ ಕೇಳುವ  ನೋಟಿಸ್‌ಗೆ ಆರೋಪಿತ ಅಧಿಕಾರಿ, ನೌಕರರಿಂದ ವಿವರಣೆ ಪಡೆದ 161 ಪ್ರಕರಣಗಳಲ್ಲಿ 72 ಪ್ರಕರಣಗಳಿಗೆ ಮಾತ್ರ ಅಂತಿಮ ಆದೇಶ ಹೊರಡಿಸಲಾಗಿದೆ.  ಡಿಸೆಂಬರ್ 2022ರಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,312, 2023 ಫೆಬ್ರವರಿಯಲ್ಲಿ  1,163 ಪ್ರಕರಣಗಳಿವೆ.

6 ತಿಂಗಳಿಗೂ ಮೇಲ್ಪಟ್ಟ ಅಮಾನತು ಪ್ರಕರಣಗಳು 2023ರ ಫೆಬ್ರವರಿ ಅಂತ್ಯದವರೆಗೆ ಒಟ್ಟು 84 ಪ್ರಕರಣಗಳಿವೆ. ಕಂದಾಯ ಇಲಾಖೆಯಲ್ಲಿಯೇ 66, ಇಲಾಖಾ ಅಮಾನತು ಪ್ರಕರಣಗಳಲ್ಲಿ ಒಳಾಡಳಿತ ಇಲಾಖೆ ಯೊಂದರಲ್ಲೇ 65 ಅಮಾನತು ಪ್ರಕರಣಗಳು 6 ತಿಂಗಳಿಗೂ ಮೇಲ್ಪಟ್ಟಿವೆ.

ಒಳಾಡಳಿತ ಇಲಾಖೆಯ 60 ಪ್ರಕರಣಗಳಲ್ಲಿ ಅಧಿಕಾರಿಗಳನ್ನು 2020ರ ಮಾರ್ಚ್ 20ರಂದು ಅಮಾನತಿನಲ್ಲಿಟ್ಟು ಆದೇಶಿಸಲಾಗಿತ್ತು. ಇವರ ಅಮಾನತು ಆದೇಶವನ್ನು ಮುಂದಿನ 3 ತಿಂಗಳ ಅವಧಿಗೆ ಮುಂದುವರೆಸಿ 2023ರ ಫೆ.21ರಂದು ಆದೇಶ ಹೊರಡಿಸಲಾಗಿದೆ.

ಲೋಕಾಯುಕ್ತ ನಿಯಮ  12(1) ಅಡಿಯಲ್ಲಿ ಒಟ್ಟು 473 ಪ್ರಕರಣಗಳ ಪೈಕಿ  223 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವಹಿಸಲಾಗಿದೆ.  ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಲ್ಲಿ 95, ಕಂದಾಯ ಇಲಾಖೆಯಲ್ಲಿ 87, ನಗರಾಭಿವೃದ್ಧಿ ಇಲಾಖೆಯಲ್ಲಿ 123, ಪ್ರಕರಣಗಳಿವೆ.

ಸಚಿವಾಲಯದ ಇಲಾಖೆಗಳಿಗೆ ಲೋಕಾಯುಕ್ತದಿಂದ ಬಂದಿರುವ ಒಟ್ಟು 1,846 ಪ್ರಕರಣಗಳ ಪೈಕಿ ನಿಯಮ 14(ಎ) ಅಡಿಯಲ್ಲಿ 1,538 ಪ್ರಕರಣಗಳನ್ನು ವಹಿಸಲಾಗಿದೆ. ನಿಯಮ 14(ಎ) ಅಡಿಯಲ್ಲಿ ವರದಿ ಸ್ವೀಕೃತವಾದ ಪ್ರಕರಣಗಳ ಪೈಕಿ 368 ಮತ್ತು 34 ಪ್ರಕರಣಗಳಿಗೆ ಅಂತಿಮ ಆದೇಶ ಹೊರಡಿಸಲಾಗಿದೆ.

ಕೃಷಿ ಇಲಾಖೆಯಲ್ಲಿ 81, ಆರ್ಥಿಕ ಇಲಾಖೆಯಲ್ಲಿ 78, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 90, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ 50, ಗ್ರಾಮಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯಲ್ಲಿ 20, ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯಲ್ಲಿ 42, ಸಣ್ಣ ನೀರಾವರಿಯಲ್ಲಿ 25,ಕಂದಾಯ ಇಲಾಖೆಯಲ್ಲಿ 492, ಒಳಾಡಳಿತ ಇಲಾಖೆಯಲ್ಲಿ 74,ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯಲ್ಲಿ 108, ಲೋಕೋಪಯೋಗಿ ಇಲಾಖೆಯಲ್ಲಿ 141, ನಗರಾಭಿವೃದ್ಧಿ ಇಲಾಖೆಯಲ್ಲಿ 289, ವಾಣಿಜ್ಯ ಕೈಗಾರಿಕೆಯಲ್ಲಿ 49 ಪ್ರಕರಣಗಳಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

Similar News