ಅಂಬೇಡ್ಕರ್ ಅವರನ್ನು ಶ್ಲಾಘಿಸುತ್ತಾ..

Update: 2023-06-30 05:54 GMT

ಪ್ರೊ. ಸಯೀದ್ ಅವರ ಕೃತಿಯ ಮಹತ್ವದ ಕೊಡುಗೆಯೆಂದರೆ, ಅದು ಅಂಬೇಡ್ಕರ್ ಅವರನ್ನು ಯಶಸ್ವಿಯಾಗಿ ಒಂದು ವರ್ಗದ ಸೀಮಿತತೆಯಾಚೆಗೆ ತಂದಿದೆ. ಅವರ ಅನೇಕ ಅನುಯಾಯಿಗಳಿಗೆ ಸಯೀದ್ ಬರೆಯುತ್ತಾರೆ: ''ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ಸ್ವೀಕರಿಸಬೇಕು. ಏಕೆಂದರೆ ಅವರು ಆಳವಾದ ಚಿಂತಕರಾಗಿದ್ದರಿಂದ ಅಲ್ಲ, ಆದರೆ ಅವರು ಒಂದು ನಿರ್ದಿಷ್ಟ ಜಾತಿಗೆ ಸೇರಿದವರು.'' ಅಂಬೇಡ್ಕರ್ ಅವರು ವಿಶಾಲವಾದ ಮಾನವ ಸಹಾನುಭೂತಿಯ ಸಾಮರ್ಥ್ಯವಿರುವ ಚೇತನ ಮತ್ತು ನ್ಯಾಯವನ್ನು ರೂಪಿಸುವ ಆಳವಾದ ಪ್ರಜ್ಞೆ ಎಂದು ಅವರು ಹೇಳುತ್ತಾರೆ.



ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ, ನನ್ನ ವೈಯಕ್ತಿಕ ಪುಸ್ತಕಗಳ ಪಟ್ಟಿಯಲ್ಲಿ ನಾಲ್ಕು ಪ್ರಮುಖವಾಗಿವೆ. ಪ್ರಕಟಣೆಯಾದ ವರ್ಷಗಳ ಕ್ರಮದಲ್ಲಿ ಅವುಗಳನ್ನು ಹೆಸರಿಸುವುದಾದರೆ, ಎಂ.ಕೆ. ಗಾಂಧಿಯವರ 'ಹಿಂದ್ ಸ್ವರಾಜ್' (1909), ರವೀಂದ್ರನಾಥ ಟಾಗೋರ್ ಅವರ 'ನ್ಯಾಷನಲಿಸಂ' (1917), ಬಿ.ಆರ್. ಅಂಬೇಡ್ಕರ್ ಅವರ 'ಅನಯಲೇಷನ್ ಆಫ್ ಕಾಸ್ಟ್' (1936) ಮತ್ತು ಜವಾಹರಲಾಲ್ ನೆಹರೂ ಅವರ 'ದಿ ಡಿಸ್ಕವರಿ ಆಫ್ ಇಂಡಿಯಾ' (1946). ಈ ಕೃತಿಗಳು ಸಮಯೋಚಿತ ಮತ್ತು ಸಮಯಾತೀತವಾಗಿವೆ. ಪ್ರಕಟವಾದ ಹೊತ್ತಿನ ಭಾರತದೊಂದಿಗೆ ಮಾತನಾಡುತ್ತವಾದರೂ, ಬರೆದವರು ಗತಿಸಿದ ಬಹುಕಾಲದ ನಂತರದ ಭಾರತದೊಂದಿಗೂ ಮಾತನಾಡುವುದನ್ನು ಮುಂದುವರಿಸಿವೆ.

ಗಾಂಧಿಯವರ ಪುಸ್ತಕ ಬಹುಶಃ ಹಿಂದೂ-ಮುಸ್ಲಿಮ್ ಸಾಮರಸ್ಯದ ಭಾವಪೂರ್ಣ ಪ್ರತಿಪಾದನೆಗಾಗಿ ಮತ್ತು ರಾಜಕೀಯ ವಿವಾದಗಳನ್ನು ಬಗೆಹರಿಸುವ ಸಾಧನವಾಗಿ ಹಿಂಸೆಯ ಬಳಕೆಯ ತಾತ್ವಿಕ ವಿರೋಧಕ್ಕಾಗಿ ಹೆಚ್ಚು ಗಮನಾರ್ಹವಾಗಿದೆ. ಟಾಗೋರ್ ಅವರು ಜಪಾನ್ ಮತ್ತು ಅಮೆರಿಕದಲ್ಲಿನ ಯುದ್ಧದಾಹಿಗಳಿಗೆ ಅನ್ಯದ್ವೇಷಿ ರಾಷ್ಟ್ರೀಯತೆಯ ಅಪಾಯಗಳ ಕುರಿತು ಹೇಳುತ್ತಿದ್ದರು. ಅದಾಗಿ ನೂರಕ್ಕಿಂತ ಹೆಚ್ಚು ವರ್ಷಗಳ ನಂತರವೂ, ಅವರ ಮಾತುಗಳನ್ನು ಇಂದು ಯುವ ಭಾರತೀಯರು ತಮ್ಮ ದೇಶ ಈ ಜಗತ್ತನ್ನು ಮುನ್ನಡೆಸುವ ನೆಲೆಯಲ್ಲಿದೆ ಎಂಬ ನಂಬಿಕೆಯಿಂದ ಮರು ಓದುತ್ತಿದ್ದಾರೆ. ಅಂಬೇಡ್ಕರ್ ಅವರ ಕೃತಿ ಭಾರತೀಯ ವ್ಯವಸ್ಥೆಯಲ್ಲಿನ ಜಾತಿ ವ್ಯವಸ್ಥೆಯಂಥ ಅತ್ಯಂತ ತಾರತಮ್ಯ ಸ್ಥಿತಿಯ ಮೇಲೆ ಕೇಂದ್ರೀಕೃತವಾಗಿದೆ. ನಮ್ಮ ಸಮಾಜ ಹೆಚ್ಚು ಮಾನವೀಯ ನೆಲೆಯಲ್ಲಿ ಮರು ರೂಪುಗೊಳ್ಳಲು ಜಾತಿ ನಿರ್ಮೂಲನೆ ಎಷ್ಟು ಅಗತ್ಯವಾಗಿದೆ ಎಂಬುದನ್ನು ವಿವರಿಸುತ್ತದೆ. ನೆಹರೂ ನೋಟಗಳು, ಭಾರತೀಯ ಸಂಸ್ಕೃತಿಯ ಆಳವಾದ ಪದರ ಮತ್ತು ಅವಿಭಾಜ್ಯವಾದ ಬಹುತ್ವದ ವಿಕಸನದ ಬಗ್ಗೆ ಇವೆ. ರಾಷ್ಟ್ರೀಯ ಗುರುತನ್ನು ಒಂದೇ ಧರ್ಮದೊಂದಿಗೆ (ಮತ್ತು ಸಾಮಾನ್ಯವಾಗಿ ಒಂದು ಭಾಷೆಯೊಂದಿಗೆ) ಗುರುತಿಸುವ ಹಿಂದುತ್ವದ ಏಕೀಕರಣ, ಏಕರೂಪೀಕರಣ ಸಿದ್ಧಾಂತಕ್ಕೆ ನೇರ ಸವಾಲಾಗಿವೆ.

ಈ ನಾಲ್ಕು ಕೃತಿಗಳಲ್ಲಿ, ಅಂಬೇಡ್ಕರ್ ಕೃತಿ ಅದರ ಸಂಯೋಜನೆ ಮತ್ತು ಪ್ರಸ್ತುತಿಯಲ್ಲಿ ಅತ್ಯಂತ ಸುಸಂಬದ್ಧವಾಗಿದೆ. ಗಾಂಧಿಯವರ ಅಹಿಂಸೆ ಮತ್ತು ಧಾರ್ಮಿಕ ಸಾಮರಸ್ಯದ ಪ್ರತಿಪಾದನೆ ವೈದ್ಯರು, ವಕೀಲರು ಮತ್ತು ಸಾಮಾನ್ಯವಾಗಿ ಆಧುನಿಕ ನಾಗರಿಕತೆಯ ಮೇಲಿನ ಅನಿರ್ದಿಷ್ಟ ದಾಳಿಯಿಂದ ಹಾನಿಗೊಳಗಾಗುತ್ತದೆ. ನೆಹರೂ ಅವರ ಪುಸ್ತಕವು ಹಲವು ತಿರುವುಗಳಲ್ಲಿ ಹೊರಳುತ್ತದೆ, ವಿಷಯಾಂತರ ಮಾಡುತ್ತದೆ. ಬಹುಶಃ ಅದನ್ನು ಜೈಲಿನಲ್ಲಿ ಬರೆಯಲಾದ ಕಾರಣದಿಂದ ಲೇಖಕರ ಮನಸ್ಸು ಅತ್ತಿತ್ತ ಹೊರಳಿರಬಹುದು. ಟಾಗೋರ್ ಅವರ ಕೃತಿ ಉದ್ದೇಶದಲ್ಲಿ ಶಕ್ತಿಯುತವಾಗಿದೆಯಾದರೂ, ಸಾಂದರ್ಭಿಕವಾಗಿ (ಅಥವಾ ಬಹುಶಃ ಅದಕ್ಕಿಂತ ಆಚೆಗೂ) ಅಭಿವ್ಯಕ್ತಿಯಲ್ಲಿ ಬೃಹತ್ತಾಗಿದೆ. ಅದು ಬಹುಶಃ ಅವರು ತಮ್ಮ ಭಾಷೆಯಾದ ಬಂಗಾಳಿಯಲ್ಲಿ ಬರೆಯದ ಕಾರಣದಿಂದಿರಬಹುದು.

'ಹಿಂದ್ ಸ್ವರಾಜ್', 'ನ್ಯಾಷನಲಿಸಂ' ಅಥವಾ 'ದಿ ಡಿಸ್ಕವರಿ ಆಫ್ ಇಂಡಿಯಾ'ಕ್ಕಿಂತ 'ಅನಯಲೇಷನ್ ಆಫ್ ಕಾಸ್ಟ್' ಚಿಕ್ಕ ಕೃತಿ. ಆದರೆ, ಪುಸ್ತಕದ ನಿರೂಪಣೆಯಲ್ಲಿ ಹೆಚ್ಚು ಗಮನಹರಿಸಲು ಅದೇ ಪ್ರಮುಖ ಕಾರಣವಾಗದೆಯೂ ಇರಬಹುದು. ಜಾತಿ ತಾರತಮ್ಯವನ್ನು ಸ್ವತಃ ಅನುಭವಿಸಿದ ದಲಿತರಾಗಿ ಲೇಖಕರ ವೈಯಕ್ತಿಕ ಅನುಭವ ಇಲ್ಲಿ ಮಹತ್ವದ್ದಾಗಿದೆ. ಅವರ ಪಾಂಡಿತ್ಯಪೂರ್ಣ ಮನೋಧರ್ಮ ಇನ್ನೂ ಹೆಚ್ಚು ಪ್ರಸ್ತುತವಾಗಿದೆ. ಅಂಬೇಡ್ಕರ್ ಸ್ವಾಭಾವಿಕವಾಗಿ ಕುತೂಹಲಕಾರಿ ಮನಸ್ಸನ್ನು ಹೊಂದಿದ್ದರು ಮತ್ತು ಚಿಕ್ಕ ವಯಸ್ಸಿನಿಂದಲೂ ಓದಿನ ಹಸಿವುಳ್ಳವರಾಗಿದ್ದರು. ಕೊಲಂಬಿಯಾ ಮತ್ತು ಲಂಡನ್‌ನಲ್ಲಿ ಅವರ ಶಿಕ್ಷಣ ಮತ್ತು ಅಲ್ಲಿ ಅವರು ಪಡೆದ ಎರಡು ಡಾಕ್ಟರೇಟ್ ಪದವಿಗಳಿಂದ ಈ ಪ್ರವೃತ್ತಿ ಮತ್ತಷ್ಟು ಗಾಢವಾಯಿತು. ತರಗತಿಯ ಒಳಗೆ ಮತ್ತು ಹೊರಗೆ ಅಂಬೇಡ್ಕರ್ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ತತ್ವಶಾಸ್ತ್ರ ಮತ್ತು ಇತಿಹಾಸವನ್ನು ವ್ಯಾಪಕವಾಗಿ ಓದಿದ್ದರು. ಈ ವಿದ್ವತ್ಪೂರ್ಣ ಪಳಗುವಿಕೆಯಿಂದಾಗಿ ಅವರು ಟಾಗೋರ್, ಗಾಂಧಿ ಅಥವಾ ನೆಹರೂ ಅವರಂತಲ್ಲದೆ ತಮ್ಮ ಓದು ಮತ್ತು ಅನುಭವಗಳನ್ನು ಸಂಯೋಜಿತ ಮತ್ತು ಆಪ್ತ ನಿರೂಪಣೆಯಾಗಿ ಜೋಡಿಸಬಲ್ಲ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಹೊಂದಿದ್ದರು. ಅದೇ ವೇಳೆ, ಇಂದಿನ ಪರಿಭಾಷೆ ಪೀಡಿತ ಶಿಕ್ಷಣತಜ್ಞರಿಗಿಂತ ಬೇರೆಯಾಗಿ ಅಂಬೇಡ್ಕರ್ ದೈನಂದಿನ ಭಾಷೆಯಲ್ಲಿ ತಮ್ಮ ವಾದಗಳನ್ನು ಮಂಡಿಸುವ ಸಾಮರ್ಥ್ಯ ಮತ್ತು ಹಂಬಲವನ್ನು ಹೊಂದಿದ್ದರು. ಅವರು ಸಹ ವಿದ್ವಾಂಸರಿಗಾಗಿ ಬರೆಯಲಿಲ್ಲ, ಆದರೆ ಸಹ ನಾಗರಿಕರಿಗಾಗಿ ಬರೆದರು.

1990ರ ದಶಕದ ಆರಂಭದಲ್ಲಿ ದಿಲ್ಲಿಯ ಪ್ರಕಾಶಕರು ಹೊರತಂದ ಆವೃತ್ತಿಯಲ್ಲಿ ನಾನು 'ಅನಯಲೇಷನ್ ಆಫ್ ಕಾಸ್ಟ್' ಕೃತಿಯನ್ನು ಮೊದಲು ಓದಿದೆ. ಆಗ ನಾನು ಗಾಂಧಿಯನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ್ದೆ ಮತ್ತು ಅಂಬೇಡ್ಕರ್ ಅವರ ನೋಟದ ಶಕ್ತಿ ಮತ್ತು ಅದು ಕಾಣಿಸುವ ಹೊಳಹುಗಳಿಗೆ ಬೆರಗಾಗಿದ್ದೆ. ಏಕೆಂದರೆ, ಕೃತಿಯ ಮುಖ್ಯ ಪಠ್ಯದಲ್ಲಿ ಗಾಂಧೀಜಿಯನ್ನು ಕೇವಲ ಕಣ್ಣೋಟಕ್ಕೆ ಉಲ್ಲೇಖಿಸಲಾಗಿದೆ. ಆದರೆ, ಜಾತಿಯ ಬಗ್ಗೆ ಗಾಂಧಿ ದೃಷ್ಟಿಕೋನವನ್ನೇ ಅಲ್ಲಿ ಮುಖ್ಯವಾಗಿ ವಿಮರ್ಶೆಗೆ ಒಳಪಡಿಸಲಾಗಿದೆ. ವಿವಿಧ ಜಾತಿಗಳ ವ್ಯಕ್ತಿಗಳು ಒಟ್ಟಿಗೆ ಉಣ್ಣುವ ಮತ್ತು ಒಟ್ಟಿಗೆ ಬದುಕುವ ಮೂಲಕ ಹಿಂದೂ ಧರ್ಮ ತನ್ನನ್ನು ತಾನು ಸುಧಾರಿಸಿಕೊಳ್ಳಬಹುದೆಂದು ಮಹಾತ್ಮರು ಭಾವಿಸಿದರೆ, ಅಂಬೇಡ್ಕರ್ ಅವರಿಗೆ ಅದು ತಾತ್ಕಾಲಿಕ ಪರಿಹಾರದ ಹೊತ್ತಾಗಿರಲಿಲ್ಲ. ಹಿಂದೂ ಧರ್ಮದ ನೈತಿಕ ಮತ್ತು ದೈವಿಕ ಜಗತ್ತಿನಲ್ಲಿ ಜಾತಿ ಎಷ್ಟು ಕೇಂದ್ರಿತವಾಗಿದೆಯೆಂದರೆ, ಪವಿತ್ರೀಕರಿಸಿದ ಧರ್ಮಗ್ರಂಥಗಳ ನ್ಯಾಯಸಮ್ಮತತೆಯನ್ನು ಪ್ರಶ್ನಿಸುವ ನೇರ ದಾಳಿಯಿಂದ ಮಾತ್ರವೇ ಅದನ್ನು ನಿವಾರಿಸಲು ಸಾಧ್ಯ ಎಂದು ಅವರು, ನನ್ನ ಮನಸ್ಸಿಗೆ ಹೌದೆನ್ನಿಸುವ ರೀತಿಯಲ್ಲಿ ವಾದಿಸಿದ್ದಾರೆ.

ನಾನು ಈ ವರ್ಷಗಳಲ್ಲಿ ಹಲವಾರು ಬಾರಿ 'ಅನಯಲೇಷನ್ ಆಫ್ ಕಾಸ್ಟ್' ಕೃತಿ ಓದಿದ್ದೇನೆ. ಕೆಲವೊಮ್ಮೆ ನಾನು ಪಾಠ ಮಾಡಿದ ವಿಶ್ವವಿದ್ಯಾನಿಲಯದ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಓದಿದ್ದೇನೆ. ಅಂಬೇಡ್ಕರ್ ಮತ್ತು ಅವರ ಪರಂಪರೆಯಲ್ಲಿ ಆಸಕ್ತಿ ಹೊಂದಿರುವ ಸಮಾಜಶಾಸ್ತ್ರಜ್ಞರು, ಇತಿಹಾಸಕಾರರು, ಜೀವನಚರಿತ್ರೆಕಾರರು ಮತ್ತು ಜಾತಿ ವಿರೋಧಿ ಹೋರಾಟಗಾರರು ಒದಗಿಸಿದ ಕೃತಿಯ ವಿಮರ್ಶಾತ್ಮಕ ವ್ಯಾಖ್ಯಾನವನ್ನು ಗಮನಿಸಿದ್ದೇನೆ. ಹೈದರಾಬಾದಿನಲ್ಲಿ ನೆಲೆಸಿರುವ ತತ್ವಶಾಸ್ತ್ರ ಪರಿಣತ ಸೈಯದ್ ಸಯೀದ್ ಅವರು ಈ ಪಠ್ಯದ ಮೇಲೆ ಬರೆದ ಸುದೀರ್ಘ ವಿಮರ್ಶೆಯನ್ನು ಕರಡು ರೂಪದಲ್ಲಿ ನೋಡುವವರೆಗೂ ನಾನು ಅದರ ಹರಹು, ವಾದಗಳು ಮತ್ತು ಅದು ಸ್ವೀಕೃತಗೊಂಡಿರುವ ಬಗ್ಗೆ ಚೆನ್ನಾಗಿ ತಿಳಿದಿದ್ದೇನೆ ಎಂದೇ ಭಾವಿಸಿದ್ದೆ. ಅದು ಅಂಬೇಡ್ಕರ್ ಹೇಳಲು ಬಯಸಿದ್ದನ್ನು ಸಂಪೂರ್ಣವಾಗಿ ತಾಜಾ ಮತ್ತು ಆಳವಾಗಿ ಕಾಣಿಸುವ ಗ್ರಹಿಕೆಯನ್ನು ಒದಗಿಸಿತು.

'ಅನಯಲೇಷನ್ ಆಫ್ ಕಾಸ್ಟ್' ಕುರಿತು ಹಿಂದಿನ ವ್ಯಾಖ್ಯಾನಕಾರರು ವಿಶಾಲ ನೆಲೆಯಲ್ಲಿ ನಾಲ್ಕು ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಉತ್ತರಿಸಲು ಪ್ರಯತ್ನಿಸಿದ್ದಾರೆ. ಮೊದಲನೆಯದಾಗಿ, ಅಂಬೇಡ್ಕರ್ ಪಠ್ಯವನ್ನು ಏಕೆ ಬರೆದರು ಮತ್ತು ಅದನ್ನು ಭಾಷಣವಾಗಿ ನೀಡಲು ಸಾಧ್ಯವಾಗದ ನಂತರ, ಸ್ವಂತ ಖರ್ಚಿನಲ್ಲಿ ಪ್ರಕಟಿಸಲು ಏಕೆ ನಿರ್ಧರಿಸಿದರು? ಎರಡನೆಯದಾಗಿ, ಅಂಬೇಡ್ಕರ್ ತಮ್ಮ ಸಂಭಾವ್ಯ ಓದುಗರು ಯಾರೆಂದು ಭಾವಿಸಿದ್ದರು? ಮೂರನೆಯದಾಗಿ, ಸಾಮಾನ್ಯವಾಗಿ ಹಿಂದೂಗಳ ಹೊರತಾಗಿ, ಅಂಬೇಡ್ಕರ್ ಅವರು ಆ ಕಾಲದ ಅತ್ಯಂತ ಪ್ರಸಿದ್ಧ ಹಿಂದೂ, ಗಾಂಧಿಯನ್ನು ವಿಶೇಷವಾಗಿ ಈ ಕೃತಿ ಬರೆದು ಪ್ರಕಟಿಸಿದಾಗ ಮನಸ್ಸಿನಲ್ಲಿಟ್ಟುಕೊಂಡಿದ್ದರೆ? ನಾಲ್ಕನೆಯದಾಗಿ, ಅಂಬೇಡ್ಕರ್ ಜೀವನಚರಿತ್ರೆಯಲ್ಲಿ ಈ ಪಠ್ಯ ಮತ್ತು ಅದರ ಪರಿಣಾಮ ಯಾವ ನಿಖರ ಸ್ಥಾನವನ್ನು ಪಡೆದುಕೊಂಡಿದೆ?

ವಿಭಿನ್ನ, ಧೈರ್ಯಶಾಲಿ ನಡೆಯಲ್ಲಿ, ಪ್ರೊ. ಸಯೀದ್ ಈ ಯಾವುದೇ ಪ್ರಶ್ನೆಗಳನ್ನು ಉತ್ತರಿಸುವ ದಾರಿಯನ್ನು ಆರಿಸಿಕೊಳ್ಳುವುದಿಲ್ಲ. ಅವರು 'ಅನಯಲೇಷನ್ ಆಫ್ ಕಾಸ್ಟ್' ಕೃತಿಯ ವಿಶಾಲ ನೆಲೆಯ ಬಗ್ಗೆ ಆಸಕ್ತರಾಗಿಲ್ಲ. ಆದರೆ ಪಠ್ಯದ ನಿಕಟ, ಹೆಚ್ಚು ಸೂಕ್ಷ್ಮ ವಿಶ್ಲೇಷಣೆಯತ್ತ ಒಲವು ತೋರಿಸಿದ್ದಾರೆ. ಅವರ ಮಾತಿನಲ್ಲಿಯೇ ಹೇಳುವುದಾದರೆ ಅವರ ಪುಸ್ತಕವು, ಅಂಬೇಡ್ಕರರ ಪ್ರಬಂಧ ಏನು ಹೇಳುತ್ತಿದೆ ಎಂಬುದರ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಿದೆ. ಅವರು ತಮ್ಮ ನಿರೂಪಣೆಯ ತಂತ್ರವನ್ನು ವ್ಯಾಖ್ಯಾನಿಸಿರುವುದು ಹೀಗೆ: 'ಅಂಬೇಡ್ಕರ್ ಹೇಳುತ್ತಿರುವುದು ಇದನ್ನೇ ಮತ್ತು ಹಾಗಿದ್ದಲ್ಲಿ, ಇವೇ ಅವರ ನಿಲುವುಗಳು ಮತ್ತು ವಾದಗಳ ಪರಿಣಾಮಗಳು.' ಹೀಗೆ ಅವರು 'ಅನಯಲೇಷನ್ ಆಫ್ ಕಾಸ್ಟ್' ಕೃತಿ, ವಿಶಾಲವಾದ ರಾಜಕೀಯ ಮತ್ತು ಸಾಮಾಜಿಕ ಸುಧಾರಣೆ, ಆಧುನಿಕ ಭಾರತೀಯ ಇತಿಹಾಸದಲ್ಲಿನ ತಮ್ಮ ಸ್ಥಾನಮಾನದ ಇನ್ನೂ ವಿಶಾಲ ಪ್ರಶ್ನೆಯನ್ನು ಕುರಿತ ಅಂಬೇಡ್ಕರ್ ಅವರ ಇತರ ಕೃತಿಗಳೊಂದಿಗೆ ಹೊಂದಿರುವ ಸಂಬಂಧವನ್ನು ಗುರುತಿಸುತ್ತಾರೆ. ಪ್ರೊ. ಸಯೀದ್ ಹೇಳುವಂತೆ, ಮಹಾನ್ ಲೇಖಕನ ನೆರಳು ಅದರ ಮೇಲೆ ಬೀಳದಂತೆ ಪಠ್ಯವನ್ನು ಅಧ್ಯಯನ ಮಾಡುವುದು ಅವರ ಪ್ರಯತ್ನವಾಗಿದೆ.

ಈ ಕಾರ್ಯದಲ್ಲಿ ಅವರು ಬಹುಮಟ್ಟಿಗೆ ಯಶಸ್ವಿಯಾಗುತ್ತಾರೆ. ಅಂಬೇಡ್ಕರ್ ಉಪಸ್ಥಿತಿಯಿಂದ ನಾವು ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಆದರೆ ಪ್ರೊ. ಸಯೀದ್ ಅವರ ದೃಷ್ಟಿಯ ಮೂಲಕ ನಾವು ಪಠ್ಯದ ರಚನೆ ಮತ್ತು ಅದು ಏನು ಹೇಳುತ್ತದೆ ಎಂಬುದನ್ನು ಹೆಚ್ಚು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಹುದು. ಅಂಬೇಡ್ಕರ್ ಅವರ ಸಾಮಾಜಿಕ ಸಿದ್ಧಾಂತದ ಸ್ವಂತಿಕೆಯನ್ನು, ಅದು ಹೇಗೆ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕತೆಯನ್ನು ಸ್ವಾಯತ್ತ ನೆಲೆಗಳೆಂದು ಅವುಗಳದ್ದೇ ಅಧಿಕಾರ, ವ್ಯಾಪ್ತಿ ಮತ್ತು ತಾರತಮ್ಯದ ಅಸ್ತಿತ್ವದೊಂದಿಗೆ ನೋಡುತ್ತದೆ ಎಂಬುದನ್ನು ಗ್ರಹಿಸಲು ಅವರು ನಮಗೆ ಅವಕಾಶ ಮಾಡಿಕೊಡುತ್ತಾರೆ. ನಿಜ ಜೀವನದಲ್ಲಿ ಈ ನೆಲೆಗಳು ಅತಿಕ್ರಮಿಸಿದರೂ, ಅವು ಅಷ್ಟು ಸುಲಭವಾಗಿ ಒಂದನ್ನೊಂದು ಕಸಿಯಲು ಸಾಧ್ಯವಿಲ್ಲ ಅಥವಾ (ಆರ್ಥಿಕತೆಯಂತಹ) ಒಂದು ನೆಲೆ ನಿರ್ಣಾಯಕ ಎಂದು ನೋಡಲು ಸಹಾಯಕವಾಗುವುದಿಲ್ಲ. ಒಂದೆಡೆ, ಭಾರತದಲ್ಲಿನ ಸಾಮಾಜಿಕ ಅಸಮಾನತೆಯ ಬಗ್ಗೆ ಅಂಬೇಡ್ಕರ್ ಅವರ ವಿಶ್ಲೇಷಣೆ ಮಾರ್ಕ್ಸ್‌ವಾದಿಗಳು ನೀಡಿದ್ದಕ್ಕಿಂತಲೂ ಹೇಗೆ ಹೆಚ್ಚು ತೀಕ್ಷ್ಣವಾಗಿದೆ (ಮತ್ತು ವ್ಯಾಪಕವಾಗಿದೆ) ಮತ್ತು ಇನ್ನೊಂದೆಡೆ, ಹಿಂದೂ ಸಮಾಜವನ್ನು ಪರಿವರ್ತಿಸುವ ಅಂಬೇಡ್ಕರ್ ಅವರ ಉದ್ದೇಶವು ಹೇಗೆ ಗಾಂಧಿವಾದಿಗಳು ಪ್ರತಿಪಾದಿಸಿದ್ದಕ್ಕಿಂತ ಹೆಚ್ಚು ಕೂಲಂಕಷವಾಗಿದೆ ಎಂಬುದನ್ನು ಪ್ರೊ. ಸಯೀದ್ ಕಾಣಿಸುತ್ತಾರೆ.

ತಮ್ಮ ಬರಹದಲ್ಲಿ, ಪ್ರೊ. ಸಯೀದ್ ಇಂದಿನ ಅಸ್ಮಿತೆಯ ರಾಜಕೀಯದ ಬಗ್ಗೆ ಸೂಕ್ಷ್ಮ ವಿಮರ್ಶೆಯನ್ನು ಒದಗಿಸಿದ್ದಾರೆ. ಹೀಗಾಗಿ, ಅವರು ಬರೆದಂತೆ, ಅಂಬೇಡ್ಕರ್ ಬಯಸಿದ್ದು ಜಾತಿಯ ಎಲ್ಲಾ ಗುರುತುಗಳ ಅಳಿಸುವಿಕೆ. ಆದರೆ ಇಂದು ನಾವು ಕಾಣುತ್ತಿರುವುದು ಆ ಗುರುತುಗಳ ಎದ್ದುಕಾಣುವ ಲಕ್ಷಣ. ಅಂಬೇಡ್ಕರ್ ಅವರು 'ಅಸ್ಮಿತೆಯ ರಾಜಕೀಯವು ಅನಿವಾರ್ಯವಾಗಿ ಬಹುಸಂಖ್ಯಾತ ರಾಜಕೀಯದ ಹೊರಹೊಮ್ಮುವಿಕೆಯ (ಇಪ್ಪತ್ತೊಂದನೇ ಶತಮಾನದಲ್ಲಿ ಇದು ಭಾರತದಲ್ಲಿ ಮತ್ತು ಜಾಗತಿಕವಾಗಿ ಸ್ಪಷ್ಟವಾಗಿದೆ) ಫಲಿತಾಂಶವಾಗಿ ಉಂಟಾಗುತ್ತದೆ ಮತ್ತು ಬಹುಸಂಖ್ಯಾತತ್ವವು ಪ್ರಜಾಪ್ರಭುತ್ವದ ರಾಜಕೀಯವನ್ನು ಮತ್ತು ದೇಶದ ನೈತಿಕ ಅಥವಾ ಸಡಿಲ ನಾಗರಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಊಹಿಸಿದ್ದರು' ಎನ್ನುತ್ತಾರೆ ಸಯೀದ್.

ಇವತ್ತಿನ ಭವ್ಯ ಹಿಂದೂ ಭೂತಕಾಲದ ಆವಾಹನೆ ಮತ್ತು ಅಂಬೇಡ್ಕರ್ ಅದನ್ನು ಹೇಗೆ ನೋಡಿರಬಹುದು ಎಂಬುದರ ಕುರಿತು ಪ್ರೊ. ಸಯೀದ್ ಬರೆಯುತ್ತಾರೆ: 'ದಬ್ಬಾಳಿಕೆ, ದಾಸ್ಯ ಮತ್ತು ತಮ್ಮವರೇ ಆದ ದೊಡ್ಡ ವರ್ಗವನ್ನು ಮೇಲ್ಜಾತಿ ಹಿಂದೂಗಳು ಅಮಾನುಷವಾಗಿ ಕೀಳಾಗಿ ನಡೆಸಿಕೊಳ್ಳುವುದು ಅದರ ತಳಹದಿಯಾಗಿರುವಾಗ ಕಲೆ ಮತ್ತು ಸಂಸ್ಕೃತಿಯ ಶ್ರೇಷ್ಠ ನಾಗರಿಕ ಪರಂಪರೆಯಿಂದ ಏನು ಪ್ರಯೋಜನ?'
ಪ್ರೊ. ಸಯೀದ್ ಅವರ ಕೃತಿಯ ಮಹತ್ವದ ಕೊಡುಗೆಯೆಂದರೆ, ಅದು ಅಂಬೇಡ್ಕರ್ ಅವರನ್ನು ಯಶಸ್ವಿಯಾಗಿ ಒಂದು ವರ್ಗದ ಸೀಮಿತತೆಯಾಚೆಗೆ ತಂದಿದೆ. ಅವರ ಅನೇಕ ಅನುಯಾಯಿಗಳಿಗೆ ಸಯೀದ್ ಬರೆಯುತ್ತಾರೆ: ''ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ಸ್ವೀಕರಿಸಬೇಕು. ಏಕೆಂದರೆ ಅವರು ಆಳವಾದ ಚಿಂತಕರಾಗಿದ್ದರಿಂದ ಅಲ್ಲ, ಆದರೆ ಅವರು ಒಂದು ನಿರ್ದಿಷ್ಟ ಜಾತಿಗೆ ಸೇರಿದವರು.'' ಅಂಬೇಡ್ಕರ್ ಅವರು ವಿಶಾಲವಾದ ಮಾನವ ಸಹಾನುಭೂತಿಯ ಸಾಮರ್ಥ್ಯವಿರುವ ಚೇತನ ಮತ್ತು ನ್ಯಾಯವನ್ನು ರೂಪಿಸುವ ಆಳವಾದ ಪ್ರಜ್ಞೆ ಎಂದು ಅವರು ಹೇಳುತ್ತಾರೆ.

ಈ ತಿಂಗಳ ಕೊನೆಯಲ್ಲಿ ಪ್ರಕಟಗೊಳ್ಳಲಿರುವ ತಮ್ಮ ಪುಸ್ತಕದಲ್ಲಿ ಸೈಯದ್ ಸಯೀದ್ ನಮಗೆ 'ಅನಯಲೇಷನ್ ಆಫ್ ಕಾಸ್ಟ್' ಕೃತಿಯ ನಿಕಟ ಓದನ್ನು ಒದಗಿಸುತ್ತಾರೆ. ಅದು ಸ್ವತಃ ಬಹಳ ನಿಕಟವಾದ ಓದನ್ನು ಸಮರ್ಥಿಸುತ್ತದೆ. ಇದು ಭಾರತೀಯನೊಬ್ಬ ಬರೆದ ಅತ್ಯಂತ ಗಮನಾರ್ಹವಾದ ಮತ್ತು ನಿರಂತರ ಸಂಬಂಧಿತ ಪಠ್ಯಗಳಲ್ಲಿ ಒಂದಾದ ಆಳವಾದ ಪಾಂಡಿತ್ಯಪೂರ್ಣ ಕೃತಿಯಾಗಿದೆ. ನೀವು ನನ್ನಂತೆಯೇ 'ಅನಯಲೇಷನ್ ಆಫ್ ಕಾಸ್ಟ್' ಕೃತಿಯನ್ನು ಮೊದಲೇ ಓದಿದ್ದರೆ ಅಥವಾ ಈಗಾಗಲೇ ಹಲವಾರು ಬಾರಿ ಓದಿದ್ದರೆ, ಅದರ ಆಲೋಚನೆಗಳು ಮತ್ತು ವಾದಗಳು ಪ್ರೊ. ಸಯೀದ್ ಅವರ ವಾದಗಳಿಂದ ಸಮೃದ್ಧವಾಗಿ ಬೆಳಗುವುದನ್ನು ಕಾಣಬಹುದು. ಮತ್ತೊಂದೆಡೆ, ನೀವು ಇನ್ನೂ ಅಂಬೇಡ್ಕರ್ ಅವರ ಈ ಕೃತಿಯನ್ನು ಓದಿಲ್ಲದಿದ್ದರೆ, ಈ ಅದ್ಭುತ ವ್ಯಾಖ್ಯಾನವು ತಾಜಾ ದೃಷ್ಟಿ ಮತ್ತು ಮುಕ್ತ ಮನಸ್ಸಿನಿಂದ ಅದನ್ನು ಸಮೀಪಿಸಲು ಉತ್ತಮ ಮಾರ್ಗವಾಗಿ ಒದಗುತ್ತದೆ.

Similar News