ಗೌತಮ್ ಅದಾನಿ ಕಠಿಣ ಪರಿಶ್ರಮಿ, ವಿಧೇಯ: ಜೀವನ ಚರಿತ್ರೆಯಲ್ಲಿ ಶರದ್ ಪವಾರ್

Update: 2023-04-09 08:21 GMT

ಹೊಸದಿಲ್ಲಿ: ಅದಾನಿ ವಿವಾದದ ಕುರಿತು NCP ಮುಖ್ಯಸ್ಥ ಶರದ್ ಪವಾರ್ ಅವರ ಹೇಳಿಕೆ ವಿರೋಧ ಪಕ್ಷಗಳ ವಲಯದಲ್ಲಿ ಗೊಂದಲ ಸೃಷ್ಟಿಸಿದ್ದರೂ, ಎರಡು ದಶಕಗಳ ಹಿಂದೆಯೇ ಗೌತಮ್ ಅದಾನಿ ತಮ್ಮ ಕಲ್ಲಿದ್ದಲು ಉದ್ಯಮವನ್ನು ವಿಸ್ತರಣೆ ಮಾಡುವ ಅವಕಾಶಗಳನ್ನು ಶೋಧಿಸುವಾಗಲೇ ಶರದ್ ಪವಾರ್‌ರೊಂದಿಗೆ ಗೆಳೆತನ ಹೊಂದಿದ್ದರು ಎಂಬ ಸಂಗತಿಯೀಗ ಮುನ್ನೆಲೆಗೆ ಬಂದಿದೆ.

2015ರಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟವಾಗಿರುವ ತಮ್ಮ ಜೀವನಚರಿತ್ರೆ 'ಲೋಕ್ ಮಝೆ ಸಂಗಾತಿ...' ಕೃತಿಯಲ್ಲಿ ಮೂಲಸೌಕರ್ಯ ವಲಯದಲ್ಲಿ ಅಗಾಧವಾದುದನ್ನು ಸಾಧಿಸುವ ಬಯಕೆ ಹೊಂದಿರುವ ಗೌತಮ್ ಅದಾನಿ, "ಕಠಿಣ ಪರಿಶ್ರಮಿ, ಸರಳ ಹಾಗೂ ವಿಧೇಯ" ಎಂದು ಶರದ್ ಪವಾರ್ ಶ್ಲಾಘಿಸಿದ್ದಾರೆ.

ಇದಲ್ಲದೆ ನನ್ನ ಒತ್ತಾಯದ ಕಾರಣಕ್ಕೆ ಅದಾನಿ ಉಷ್ಣ ವಿದ್ಯುತ್ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡಿದರು ಎಂದೂ ಹಿರಿಯ ನಾಯಕ ಪವಾರ್ ಉಲ್ಲೇಖಿಸಿದ್ದಾರೆ.

ಅದಾನಿ ಕಾರ್ಪೊರೇಟ್ ಸಾಮ್ರಾಜ್ಯವನ್ನು ಸ್ಥಾಪಿಸುವುದಕ್ಕೂ ಮುನ್ನ ಹೇಗೆ ಮುಂಬೈನಲ್ಲಿ ಸೇಲ್ಸ್‌ಮನ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು, ವಜ್ರೋದ್ಯಮದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುವ ಮುನ್ನ ಸಣ್ಣ ಉದ್ಯಮಗಳಲ್ಲಿ ಹೇಗೆ ಪ್ರಯತ್ನ ನಡೆಸಿದರು ಎಂದು ತಮ್ಮ ಕೃತಿಯಲ್ಲಿ ಪವಾರ್ ಸ್ಮರಿಸಿಕೊಂಡಿದ್ದಾರೆ.

"ಆತ ವಜ್ರೋದ್ಯಮದಲ್ಲಿ ಉತ್ತಮ ಸಂಪಾದನೆ ಮಾಡುತ್ತಿದ್ದರೂ, ಆತನಿಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಆತನಿಗೆ ಮೂಲಸೌಕರ್ಯ ವಲಯವನ್ನು ಪ್ರವೇಶಿಸುವ ಬಯಕೆ ಇತ್ತು. ಆತನಿಗೆ ಗುಜರಾತ್ ಮುಖ್ಯಮಂತ್ರಿ ಚಿಮಣ್ ಭಾಯಿ ಪಟೇಲ್ ಅವರೊಂದಿಗೆ ಉತ್ತಮ ಸಂಬಂಧವಿತ್ತು ಮತ್ತು ಮುಂದ್ರಾ ಬಂದರನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ಅವರಿಗೆ ಸಲ್ಲಿಸಿದ" ಎಂದು ಎನ್‌ಸಿಪಿ ಮುಖ್ಯಸ್ಥ ಬರೆದುಕೊಂಡಿದ್ದಾರೆ.

ಆದರೆ, ಪಟೇಲ್ ಅವರು ಮುಂದ್ರಾ ಬಂದರು ಪಾಕಿಸ್ತಾನದ ಗಡಿಗೆ ಸಮೀಪವಿದೆ ಮತ್ತು ಶುಷ್ಕ ಪ್ರಾಂತ್ಯದಲ್ಲಿದೆ ಎಂದು ಅದಾನಿಗೆ ಎಚ್ಚರಿಕೆ ನೀಡಿದ್ದರು. ಪ್ರತಿಕೂಲ ವಾತಾವರಣವಿದ್ದರೂ ಆತ ಸವಾಲನ್ನು ಸ್ವೀಕರಿಸಿದ್ದ ಎಂದೂ ಅವರು ನೆನಪು ಮಾಡಿಕೊಂಡಿದ್ದಾರೆ.

ಅದಾನಿ ಕಲ್ಲಿದ್ದಲು ವಲಯದಲ್ಲಿ ಸೂರೆ ಮಾಡಿದರು ಮತ್ತು ನನ್ನ ಸಲಹೆಯಂತೆ ಅದಾನಿ ಉಷ್ಣ ವಿದ್ಯುತ್ ವಲಯಕ್ಕೆ ಪದಾರ್ಪಣೆ ಮಾಡಿದರು ಎಂದು ಬರೆದಿದ್ದಾರೆ.

ನಾನು ಅದಾನಿಗೆ ಈ ಸಲಹೆಯನ್ನು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್‌ರ ಪುಣ್ಯತಿಥಿಯ ಅಂಗವಾಗಿ ಮಹಾರಾಷ್ಟ್ರದ ಗೊಂಡಿಯಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೀಡಿದ್ದೆ ಎಂದು ಆಗ ಕೇಂದ್ರ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಹೇಳಿಕೊಂಡಿದ್ದಾರೆ.

ಅದಾನಿ ಸಮೂಹದ ವ್ಯವಹಾರಗಳ ಕುರಿತು ಜಂಟಿ ಸಂಸದೀಯ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷಗಳು ತೀವ್ರ ಅಭಿಯಾನ ನಡೆಸುತ್ತಿರುವಾಗಲೇ, ಗುಜರಾತ್ ಮೂಲದ ಅದಾನಿ ಉದ್ಯಮದ ವ್ಯವಹಾರಗಳ ಕುರಿತು ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಹೇಳುವ ಮೂಲಕ ಶರದ್ ಪವಾರ್ ತಮ್ಮ ಸಹ ವಿರೋಧ ಪಕ್ಷಗಳನ್ನು ಅಚ್ಚರಿಗೆ ದೂಡಿದ್ದಾರೆ.

ಇದಲ್ಲದೆ ಅದಾನಿ ಸಮೂಹದ ರಕ್ಷಣೆಗೆ ಧಾವಿಸಿರುವ ಪವಾರ್, ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯ ವರದಿ ಸುತ್ತ ಸೃಷ್ಟಿಯಾಗಿರುವ ವದಂತಿಗಳನ್ನು ಟೀಕಿಸಿದ್ದಾರೆ. ಅದಾನಿ ಉದ್ಯಮ ಸಮೂಹವನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ನನಗನ್ನಿಸುತ್ತಿದೆ ಎಂದು ಹೇಳಿರುವ ಅವರು, ಅಮೆರಿಕಾ ಮೂಲದ ಕಿರು ಅವಧಿ ಮಾರಾಟ ಸಂಸ್ಥೆಯ ಈ ಹಿಂದಿನ

ಇತಿಹಾಸದ ಬಗ್ಗೆ ನನಗೇನೂ ತಿಳಿದಿಲ್ಲ ಎಂದೂ ಸ್ಪಷ್ಟೀಕರಣ ನೀಡಿದ್ದಾರೆ. ವಿನಾಯಕ ದಾಮೋದರ ಸಾವರ್ಕರ್ ಹಾಗೂ ಅದಾನಿ ಸಮೂಹದ ಕುರಿತ ಕಾಂಗ್ರೆಸ್ ಟೀಕೆಗಿಂತ ಭಿನ್ನವಾಗಿ ಆ ವಿಷಯಗಳ ಕುರಿತು ಪವಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಡಿಜೆ ನಿಲ್ಲಿಸಿದ ಪೊಲೀಸರು: ಠಾಣೆ ಎದುರು ಕುಳಿತು ಪ್ರತಿಭಟಿಸಿದ ವಧು-ವರರು

Similar News