ಛತ್ತೀಸ್ಗಢದ ಬುಡಕಟ್ಟು ಜನಾಂಗದ ಹಿರಿಯ ನಾಯಕ ನಂದಕುಮಾರ್ ಸಾಯಿ ಕಾಂಗ್ರೆಸ್ ಗೆ ಸೇರ್ಪಡೆ
ರಾಯ್ಪುರ: ಒಂದು ದಿನದ ಹಿಂದೆ ಬಿಜೆಪಿ ತೊರೆದಿದ್ದ ಛತ್ತೀಸ್ಗಢದ ಬುಡಕಟ್ಟು ಜನಾಂಗದ ಹಿರಿಯ ನಾಯಕ ಹಾಗೂ ಮಾಜಿ ಸಂಸದ ನಂದಕುಮಾರ್ ಸಾಯಿ (77 ವರ್ಷ) ಸೋಮವಾರ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ರಾಜ್ಯ ಬಿಜೆಪಿಯ ಮಾಜಿ ವಿರೋಧ ಪಕ್ಷದ ನಾಯಕರಾಗಿದ್ದ ಸಾಯಿ ಅವರು ಛತ್ತೀಸ್ಗಢದಲ್ಲಿ ಆದಿವಾಸಿಗಳ ಮತಾಂತರದ ವಿರುದ್ಧ ಸಕ್ರಿಯವಾಗಿ ಧ್ವನಿ ಎತ್ತಿದ್ದರು. ಅವರು ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ ರಮಣ್ ಸಿಂಗ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು.
ಬುಡಕಟ್ಟು ಪ್ರದೇಶಗಳಲ್ಲಿ ಶಿಕ್ಷಣ ಪಸರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಾಯಿ ಅವರು ಆದಿವಾಸಿಗಳ ಮೇಲಿನ ಶೋಷಣೆ ಹಾಗೂ ಅವರ ಮೇಲಿನ ದೌರ್ಜನ್ಯವನ್ನು ವಿರೋಧಿಸುವ ವಿವಿಧ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
ಮಾಜಿ ಸಂಸದ ಕುಮಾರ್ ರವಿವಾರ ಬಿಜೆಪಿಗೆ ಸಲ್ಲಿಸಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ತಮ್ಮ ಸಾರ್ವಜನಿಕ ಪ್ರತಿಷ್ಠೆಗೆ ಕಳಂಕ ತರುತ್ತಿರುವ ಕೆಲವು ಪಕ್ಷದ ನಾಯಕರಿಂದ ನೋವಾಗಿದೆ ಎಂದು ಹೇಳಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಈ ವಿಷಯದ ತಕ್ಷಣವೇ ಪ್ರತಿಕ್ರಿಯಿಸಿ ಹಿರಿಯ ನಾಯಕರೊಬ್ಬರಿಗೆ ಪಕ್ಷಕ್ಕೆ ಸ್ವಾಗತ ಎಂದು ಹೇಳಿತ್ತು.
“ದೀರ್ಘ ಸಮಯದಿಂದ ಬಿಜೆಪಿಯು ತನ್ನ ಬುಡಕಟ್ಟು ನಾಯಕರನ್ನು ಅವಮಾನಿಸುತ್ತಿದೆ ಹಾಗೂ ನೋಯಿಸುತ್ತಿದೆ. ಸಾಯಿ ಬಿಜೆಪಿಗಾಗಿ ಸಾಕಷ್ಟು ಕಲಸ ಮಾಡಿದ್ದಾರೆ. ಆದರೆ ಅವರು ಕೂಡ ಪಕ್ಷದಲ್ಲಿ ಸಾಕಷ್ಟು ಅವಮಾನವನ್ನು ಎದುರಿಸಿದ್ದರು ಮತ್ತು ಬಲವಂತವಾಗಿ ಪಕ್ಷ ತ್ಯಜಿಸಬೇಕಾಯಿತು'' ಎಂದು ಕಾಂಗ್ರೆಸ್ ಮಾಧ್ಯಮ ಸೆಲ್ ಮುಖ್ಯಸ್ಥ ಸುಶೀಲ್ ಕುಮಾರ್ ಶುಕ್ಲಾ ಹೇಳಿದ್ದಾರೆ.
ನಂದ್ ಕುಮಾರ್ ಸಾಯಿ ಅವರು 1977, 1985 ಹಾಗೂ 1998 ರಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ಚುನಾಯಿತರಾಗಿದ್ದರು. ಛತ್ತೀಸ್ಗಢದ ರಚನೆಯ ನಂತರ ಅವರು 2000 ರಲ್ಲಿ ಮತ್ತೆ ಆಯ್ಕೆಯಾದರು ರಾಜ್ಯ ವಿಧಾನಸಭೆಯಲ್ಲಿ ಮೊದಲ ವಿರೋಧ ಪಕ್ಷದ ನಾಯಕರಾಗಿದ್ದರು. ಸಾಯಿ 1989, 1996 ಹಾಗೂ 2004 ರಲ್ಲಿ ಲೋಕಸಭೆಗೆ ಚುನಾವಣೆಯಲ್ಲಿ ಗೆದ್ದಿದ್ದರು.
#WATCH | Chhattisgarh: Dr Nand Kumar Sai joins Congress in the presence of Chhattisgarh CM Bhupesh Baghel, in Raipur.
— ANI MP/CG/Rajasthan (@ANI_MP_CG_RJ) May 1, 2023
Nand Kumar Sai tendered his resignation from BJP yesterday. pic.twitter.com/bUL2ILHeBY