ಬಳಂಜದಲ್ಲಿ 15ನೇ ಶತಮಾನದ ಶಾಸನ
ಉಡುಪಿ, ಮೇ 3: ಬೆಳ್ತಂಗಡಿ ತಾಲೂಕಿನ ಬಳಂಜದಲ್ಲಿರುವ ಶ್ರೀ ದುರ್ಗಾ ಪಂಚಲಿಂಗೇಶ್ವರ ದೇವಸ್ಥಾನದಲ್ಲಿರುವ ಶಾಸನವನ್ನು ದೇವಾಲಯದ ಆಡಳಿತ ಮಂಡಳಿಯ ಕೋರಿಕೆ ಮೇರೆಗೆ ಹೈದರಾಬಾದ್ನ ಪ್ಲೀಚ್ ಇಂಡಿಯಾ ಫೌಂಡೇಶನ್ನಲ್ಲಿ ಸಹಾಯಕ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅಧ್ಯಯನಕ್ಕೆ ಒಳಪಡಿಸಿದ್ದಾರೆ.
ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಲಿಟ್ಟಿರುವ ಈ ದಾನ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯ 17 ಸಾಲುಗಳನ್ನು ಒಳಗೊಂಡಿದ್ದು, ಮೇಲ್ಭಾಗದಲ್ಲಿ ಸೂರ್ಯ-ಚಂದ್ರ, ಶಿವಲಿಂಗ ಹಾಗೂ ನಂದಿಯ ರೇಖಾ ಚಿತ್ರವನ್ನು ಕೊರೆಯಲಾಗಿದೆ.
ಸ್ವಸ್ತಿ ಎಂಬ ಶುಭ ಸೂಚಕದಿಂದ ಪ್ರಾರಂಭವಾಗುವ ಈ ಶಾಸನವು 1411ನೆಯ ಸೌಮ್ಯ ಸಂವತ್ಸರದ ಮೀನ ಮಾಸ ಪ್ರಥಮ ರವಿವಾರ ಅಂದರೆ ಸಾಮಾನ್ಯ ವರ್ಷ 1489ಕ್ಕೆ ಸೇರುತ್ತದೆ. ಈ ಕಾಲಘಟ್ಟದಲ್ಲಿ ಅಜಿಲ ಮನೆತನದ ಮಾಂಡಳಿಕ ಸೋಮನಾಥ ಪೆರ್ನ್ನಂಣರಸ ಒಡೆಯ ತನ್ನ ತಾಯಿಯಾದ ರಾಮಾದೇವಿಯ ನಿರೂಪದಂತೆ ಬಳಂಜದ ಪಂಚಲಿಂಗ ದೇವರ ನೈವೇದ್ಯಕ್ಕೆ ಭೂದಾನವನ್ನು ನೀಡಿದ್ದು, ಈ ಭೂಮಿಯಿಂದ ಪ್ರತಿವರ್ಷ 1ಕ್ಕಂ ಭತ್ತವನ್ನು ಬಳ್ಳ 30 ರ ಲೆಕ್ಕದಲ್ಲಿ ಅಚಂದ್ರಾರ್ಕಸ್ಥಾಯಿಯಾಗಿ ನಡೆಸಿಕೊಂಡು ಬರಬೇಕೆಂದು ಶಾಸನವು ಉಲ್ಲೇಖಿಸುತ್ತದೆ. ಶಾಸನವು ಶಾಪಾಶಯ ವಾಕ್ಯದಿಂದ ಮುಕ್ತಾಯಗೊಂಡಿದೆ.
ಈ ಕ್ಷೇತ್ರಕಾರ್ಯ ಶೋಧನೆಗೆ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ ಉಡುಪಿ ಇದರ ಅಧ್ಯಯನ ನಿರ್ದೇಶಕ ಎಸ್.ಎ. ಕೃಷ್ಣಯ್ಯ, ದೇವಾಲಯದ ಅರ್ಚಕರಾದ ಮಂಜುನಾಥ ಭಟ್ ಹಾಗೂ ಆನಂದ ದೇವಾಡಿಗ ಮತ್ತು ರವಿ ಸಂತೋಷ ಆಳ್ವ ಸಹಕರಿಸಿದರು.