ಮೇ 5ರಂದು ಅರೆನೆರಳಿನ ಚಂದ್ರಗ್ರಹಣ; ಭಾರತದಾದ್ಯಂತ ಗೋಚರ
ಉಡುಪಿ, ಮೇ 4: ನಾಳೆಯ ಹುಣ್ಣಿಮೆಯ ಚಂದ್ರನು ಭೂಮಿಯ ಅರೆನೆರಳಲ್ಲಿ ಹಾದು ಹೋಗಲಿದ್ದಾನೆ. ಇದರಿಂದ ಮೇ 5 ರಂದು ಅರೆನೆರಳಿನ ಚಂದ್ರಗ್ರಹಣ (ಪಾರ್ಶ್ವ ಚಂದ್ರಗ್ರಹಣ) ಗೋಚರಿಸಲಿದೆ.
ಈ ಗ್ರಹಣವು ಭಾರತದ ಎಲ್ಲ ಪ್ರದೇಶಗಳಲ್ಲಿ ರಾತ್ರಿ 8.44ರಿಂದ ಮರುದಿನ (ಮಧ್ಯರಾತ್ರಿ) 1:01 ಗಂಟೆಯವರೆಗೆ ಕಂಡುಬರಲಿದೆ. ಆದರೆ ಗರಿಷ್ಠ ಪ್ರಮಾಣದ ಗ್ರಹಣವು ರಾತ್ರಿ 10:52ಕ್ಕೆ ಗೋಚರಿಸುತ್ತದೆ.
ಈ ಗ್ರಹಣವು ಭೂಮಿಯ ಅರೆನೆರಳಿನಲ್ಲಿ ಚಂದ್ರನು ಬಂದಾಗ ಸಂಭವಿಸುತ್ತದೆ. ಯಾವುದೇ ವಸ್ತುವಿನ ನೆರಳಿನಲ್ಲಿ ಗರಿಷ್ಠ ಕತ್ತಲೆಯ ಭಾಗವನ್ನು ನೆರಳು ಹಾಗೂ ಆ ನೆರಳಿನ ಹೊರತುದಿಯಲ್ಲಿರುವ ಮಸುಕಾದ ನೆರಳನ್ನು ಅರೆನೆರಳು ಎಂದು ಗುರುತಿಸುತ್ತಾರೆ. ಚಂದ್ರನು ಭೂಮಿಯ ಅರೆನೆರಳಲ್ಲಿ ಹಾದು ಹೋಗುವಾಗ ಅರೆನೆರಳಿನ ಚಂದ್ರಗ್ರಹಣ ಎನ್ನುತ್ತಾರೆ. ಇದೇ ರೀತಿ ಚಂದ್ರನು ಭೂಮಿಯ ನೆರಳಿನಿಂದ ಹಾದುಹೋಗುವಾಗ ಅದು ಪಾರ್ಶ್ವ ಗ್ರಹಣ ಅಥಲಾ ಖಗ್ರಾಸ ಚಂದ್ರಗ್ರಹಣವಾಗಿರುತ್ತದೆ.
ಅರೆನೆರಳಿನ ಚಂದ್ರಗ್ರಹಣವನ್ನು ವೀಕ್ಷಿಸುವುದು ಕಷ್ಟ. ಭೂಮಿಯ ಅರೆನೆರಳು ಮಸುಕಾಗಿರುವುದರಿಂದ ಚಂದ್ರನ ಮೇಲೆ ಈನೆರಳನ್ನು ಗಮನಿಸುವುದು ಸುಲಭವಲ್ಲ. ಬರಿಗಣ್ಣಿನಲ್ಲಿ ನೋಡುವಾಗ ಗರಿಷ್ಠ ಗ್ರಹಣದ ಸಮಯ ಚಂದ್ರ, ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ ಸ್ವಲ್ಪ ಕಡಿಮೆ ಪ್ರಕಾಶಮಾನದಿಂದ ಗೋಚರಿಸುತ್ತದೆ.
ಭಾರತದ ಎಲ್ಲ ಪ್ರದೇಶಗಳಿಂದ ಈ ಗ್ರಹಣವನ್ನು ನೋಡಬಹುದು. ಭಾರತದೊಂದಿಗೆ, ದಕ್ಷಿಣ ಏಷಿಯಾದ ಎಲ್ಲ ದೇಶಗಳಲ್ಲಿ, ರಷ್ಯಾ, ಹಾಗೂ ಆಸ್ಟ್ರೇಲಿಯಾದಲ್ಲಿ ಈ ಗ್ರಹಣವು ಗೋಚರಿಸುತ್ತದೆ. ಈ ಗ್ರಹಣವನ್ನು ಬರಿಗಣ್ಣಿನಿಂದ ಸುರಕ್ಷಿತವಾಗಿ ವೀಕ್ಷಿಸಬಹುದು ಎಂದು ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಚಾಲಕ ಅತುಲ್ ಭಟ್ ತಿಳಿಸಿದ್ದಾರೆ.