2024ರ ದಿಕ್ಸೂಚಿಯಾಗಿ ಕರ್ನಾಟಕದ ಚುನಾವಣೆಗಳು

Update: 2023-05-22 06:22 GMT

ರೈತ ಆಂದೋಲನವು ಇಡೀ ಗ್ರಾಮೀಣ ಸಮಾಜದ ರಾಜಕೀಯ ಏಕೀಕರಣಕ್ಕೆ ನಾಂದಿ ಹಾಡಿದೆ. ಸಾರಾಯಿ ವಿರೋಧಿ ಆಂದೋಲನಗಳು ಅಥವಾ ಪಾನ ನಿಷೇಧ ನೀತಿಗಳು ಮಹಿಳಾ ಸಮುದಾಯದ ಹಕ್ಕೊತ್ತಾಯಗಳನ್ನು ರಾಷ್ಟ್ರೀಯ ಕಾರ್ಯಸೂಚಿಯ ಒಂದು ಭಾಗವನ್ನಾಗಿ ಮಾಡಿದೆ. ಈ ಎಲ್ಲ ಸಾಧ್ಯತೆ ಗಳನ್ನೂ 2024ರ ನಿಖರ ಕಾರ್ಯಸೂಚಿಯನ್ನಾಗಿ ಪರಿವರ್ತಿಸುವುದು ನಮ್ಮ ಮುಂದಿರುವ ಸವಾಲು. 

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಗಳು 2024ರ ಮಹಾ ಚುನಾವಣೆಗಳ ದಿಕ್ಸೂಚಿಯಾಗಿ ಕಾಣುತ್ತದೆ. ಇದನ್ನು ನಾವು ಪಿರಮಿಡ್ ರಾಜಕಾರಣದ ತಳಪಾಯ ಎಂದು ವ್ಯಾಖ್ಯಾನಿಸಬಹುದು. ನಮ್ಮ ಗಣತಂತ್ರವನ್ನು ಸಂರಕ್ಷಿಸುವ ಭರವಸೆಗಳನ್ನು ಸಾಕಾರಗೊಳಿಸುವ ಸಲುವಾಗಿ ನಾವು ಈ ಮಾರ್ಗವನ್ನೇ ಪುನರುಜ್ಜೀವನಗೊಳಿಸುವ ಮೂಲಕ ಮರುಕಲ್ಪಿಸಿಕೊಳ್ಳಬೇಕಿದೆ.

ಕರ್ನಾಟಕದ ಚುನಾವಣೆಗಳ ಈವರೆಗಿನ ಹಲವು ವಿಶ್ಲೇಷಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಲ್ಲಿ ನಾಲ್ಕು ಸಾಮಾಜಿಕ ಅಂಶಗಳನ್ನು ಪ್ರಧಾನವಾಗಿ ಗುರುತಿಸಬಹುದು. ನನ್ನ ವಿಶ್ಲೇಷಣೆಗಳಲ್ಲಿ ನಾನು ಈದಿನ.ಕಾಂ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ದತ್ತಾಂಶಗಳನ್ನೇ ಅವಲಂಬಿಸಿ, ಮತದಾರರ ಆದ್ಯತೆಗಳಲ್ಲಿ ತೀಕ್ಷ್ಣವಾದ ವರ್ಗದೆಡೆಗೆ ಜಾರುವ ಲಕ್ಷಣಗಳನ್ನು ಗುರುತಿಸಿದ್ದೆ. ಇಂಡಿಯಾ ಟುಡೇ, ಮೈ-ಆಕ್ಸಿಸ್ ಇಂಡಿಯಾ ಮುಂತಾದ ಮತದಾನೋತ್ತರ ಸಮೀಕ್ಷೆಗಳು ಇದನ್ನೇ ಪುಷ್ಟೀಕರಿಸಿದ್ದವು. ಹಿತವಲಯದ ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ಕಾಂಗ್ರೆಸ್ಗಿಂತಲೂ ಕೊಂಚ ಮುನ್ನಡೆ ಸಾಧಿಸಿದ್ದರೆ, ಬಹುಸಂಖ್ಯಾತ ಬಡವರು ಕಾಂಗ್ರೆಸ್ಗೆ ಹೆಚ್ಚಿನ ಬೆಂಬಲವನ್ನು ವ್ಯಕ್ತಪಡಿಸಿರುವುದನ್ನು ಗಮನಿಸಬಹುದು. ಇದು ಈ ಚುನಾವಣೆಗಳಿಗೆ ಸೀಮಿತವಾದ ತಾತ್ಕಾಲಿಕ ಬದಲಾವಣೆಯೋ ಅಥವಾ ಹಳೆಯ ವಿಧಾನದ ಮರುಕಳಿಕೆಯೋ ಎನ್ನುವುದನ್ನು ನಿಖರವಾಗಿ ಹೇಳಲು ಯಾವುದೇ ಸಾಕ್ಷಿ ಪುರಾವೆಗಳು ಇಲ್ಲ. 

ಜಾತಿಯ ದೃಷ್ಟಿಯಿಂದ ನೋಡಿದರೆ, ಅಹಿಂದ ಸಾಮಾಜಿಕ ಗುಂಪು (ಹಿಂದುಳಿದ, ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರು- ಇವರ ಸಂಖ್ಯೆ ಒಟ್ಟು ಜನಸಂಖ್ಯೆಯ ಮೂರನೇ ಒಂದಕ್ಕಿಂತಲೂ ಹೆಚ್ಚಾಗಿದೆ) ಬಲವಾಗಿ ಕಾಂಗ್ರೆಸ್ ಪರವಾಗಿಯೇ ಇರುವುದನ್ನು ಗಮನಿಸಬಹುದು. ಚುನಾವಣೋತ್ತರ ಸಮೀಕ್ಷೆಗಳಲ್ಲಿ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಪಡೆದಿರುವ ಲೋಕನೀತಿ-ಸಿಎಸ್ಡಿಎಸ್ ಸಮೀಕ್ಷೆಗಳೂ ಇದನ್ನೇ ದೃಢೀಕರಿಸುತ್ತವೆ. ಹೆಚ್ಚು ಚರ್ಚೆಗೊಳಗಾಗಿರುವ ಲಿಂಗಾಯತರ ಮತಗಳಲ್ಲಿ ಹೆಚ್ಚಿನ ಪ್ರಮಾಣವು ಕಾಂಗ್ರೆಸ್ ಪರವಾಗಿ ವಾಲಿದೆಯೇ ಎಂದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಈ ಚುನಾವಣೆಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಮುಸ್ಲಿಮ್ ಮತದಾರರು ಕ್ರೋಡೀಕೃತವಾಗಿ ಕಾಂಗ್ರೆಸ್ಗೆ ಬೆಂಬಲಿಸಿರುವುದು ಸ್ಪಷ್ಟ. ಪ್ರತಿಯೊಂದು ಜಾತಿಯ ಅಥವಾ ಜಾತಿ ಗುಂಪಿನೊಳಗೂ ಸಹ ವರ್ಗದ ಪ್ರಭಾವ ಇರುವುದರ ಬಗ್ಗೆ ನಾನು ಈ ಮುಂಚೆಯೇ ವ್ಯಾಖ್ಯಾನಿಸಿದ್ದೆ. 

ಈ ಮುಂಚಿನ ವಿಶ್ಲೇಷಣೆಗಳಲ್ಲಿ ಅಲಕ್ಷಿಸಲ್ಪಟ್ಟ ಇನ್ನೆರಡು ಆಯಾಮಗಳತ್ತ ಈ ಚುನಾವಣಾ ಫಲಿತಾಂಶಗಳು ಗಮನ ಸೆಳೆಯುತ್ತವೆ. ಗ್ರಾಮೀಣ ಹಾಗೂ ನಗರ ಕ್ಷೇತ್ರಗಳ ಮತದಾನದ ಮಾದರಿಯು, ನೇರ ಚುನಾವಣೋತ್ತರ ಸಮೀಕ್ಷೆಗಳು ದೃಢೀಕರಿಸುವಂತೆ, ಕಾಂಗ್ರೆಸ್ ಬೃಹತ್ ಮುನ್ನಡೆ ಸಾಧಿಸಿರುವುದನ್ನು ಸೂಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.10 ಪ್ರತಿಶತ ಪಾಯಿಂಟ್ಗಳಿಗಿಂತಲೂ ಹೆಚ್ಚಿನ ಮುನ್ನಡೆಯನ್ನು ಕಾಂಗ್ರೆಸ್ ಸಾಧಿಸಿದ್ದರೆ ನಗರ ಪ್ರದೇಶಗಳಲ್ಲಿ ಬಿಜೆಪಿಯೊಡನೆ ಜಿದ್ದಾಜಿದ್ದಿ ಸೆಣಸಬೇಕಾಯಿತು. ಇದೇ ರೀತಿ ಇಂಡಿಯಾ ಟುಡೆ ಮತದಾನೋತ್ತರ ಸಮೀಕ್ಷೆಯಲ್ಲಿ ಲಿಂಗ ವಿಭಜನೆಯನ್ನು ದಾಖಲಿಸಲಾಗಿದೆ. ಕಾಂಗ್ರೆಸ್ ಪಕ್ಷವು ಪುರುಷರ ನಡುವೆ ಹೆಚ್ಚುವರಿಯಾಗಿ ಶೇ.5 ಪ್ರತಿಶತ ಮುನ್ನಡೆ ಸಾಧಿಸಿದ್ದರೆ ಮಹಿಳೆಯರ ಪೈಕಿ ಶೇ.11 ಪ್ರತಿಶತ ಹೆಚ್ಚುವರಿ ಮುನ್ನಡೆ ಸಾಧಿಸಿದೆ. ಚುನಾವಣಾ ಪೂರ್ವದಲ್ಲಿ ಬಿಂಬಿಸಲಾದ ಪ್ರಮಾಣಕ್ಕಿಂತಲೂ ಇದು ತುಸು ಹೆಚ್ಚಾಗಿಯೇ ಇದೆ. 

ಒಟ್ಟಾರೆ ಹೇಳುವುದಾದರೆ ಜಾತಿ, ವರ್ಗ, ಲಿಂಗ ಮತ್ತು ಸ್ಥಳೀಯ ಕಾರಣಗಳೆಲ್ಲವೂ ಒಂದೇ ದಿಕ್ಕಿನಲ್ಲಿರುವುದನ್ನು ಕಾಣಬಹುದು. ಹಿತವಲಯದ ಮತದಾರರು ಬಿಜೆಪಿಗೆ ಹೆಚ್ಚಿನ ಬೆಂಬಲ ಸೂಚಿಸಿದರೆ, ದೀನದಲಿತರು, ಅವಕಾಶವಂಚಿತರು ಹೆಚ್ಚಿನದಾಗಿ ಕಾಂಗ್ರೆಸ್ ಪರ ಒಲವು ತೋರುತ್ತಾರೆ. ಈ ನಾಲ್ಕೂ ಆಯಾಮಗಳಿಂದ ನೋಡಿದಾಗ ಕರ್ನಾಟಕದ ಫಲಿತಾಂಶವು ಸಾಮಾಜಿಕ ಚೌಕಟ್ಟಿನ ತಳಸ್ತರದ ಗೆಲುವಿನಂತೆಯೇ ಕಾಣುತ್ತದೆ. ಇದೇ ಮಾದರಿಯನ್ನು ವಿರೋಧ ಪಕ್ಷಗಳು ಇತರ ರಾಜ್ಯಗಳಲ್ಲೂ ಅನುಸರಿಸಿದರೆ, ಬಹುಶಃ 2024ರ ಮಹಾಚುನಾವಣೆಗಳಲ್ಲಿ ಕೇಂದ್ರದಲ್ಲೂ ಬದಲಾವಣೆಗಳನ್ನು ನಿರೀಕ್ಷಿಸಬಹುದು. 

ಇದೇನೂ ಹೊಸ ವಿದ್ಯಮಾನವಾಗಿ ಕಾಣುವುದಿಲ್ಲ. ಮಹಿಳೆಯರು, ಗ್ರಾಮೀಣ ಜನತೆ, ದಲಿತರು, ಆದಿವಾಸಿಗಳು ಮತ್ತು ಬಡಜನತೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ನೀಡುವುದು ಹಳೆಯ ವಿಚಾರವೇ ಆಗಿದ್ದು ಇದು ಮತದಾನದ ಮೂಲಕವೂ ಸಾಬೀತಾಗಿದೆ. ಹಾಗೆಯೇ ಬಿಜೆಪಿ ಸಾಮಾಜಿಕ ಪಿರಮಿಡ್ಡಿನ ಮೇಲ್ ಪದರವನ್ನು ಬಲಪಡಿಸಿಕೊಂಡಿರುವುದೂ ಹೊಸತೇನಲ್ಲ. 1999ರಲ್ಲೇ ನಾನು ಬರೆದ ಲೇಖನವೊಂದರಲ್ಲಿ ಬಿಜೆಪಿಯ ಚುನಾವಣಾ ಗೆಲುವಿನ ಹಿಂದಿದ್ದ ರಾಜಕೀಯ ಸಮಾಜಶಾಸ್ತ್ರವನ್ನು ವಿಶ್ಲೇಷಣೆ ಮಾಡಿದ್ದೆ. ಜಾತಿ ಹಾಗೂ ವರ್ಗದ ನೆಲೆಯಲ್ಲಿ ಸಾಮಾಜಿಕ ಪಿರಮಿಡ್ಡಿನ ಮೇಲ್ಪದರ ಬಲವರ್ಧನೆ ಹಾಗೂ ಪಿರಮಿಡ್ಡಿನ ಕೆಳಸ್ತರದ ವಿಘಟಿತವಾಗಿರುವ ಜನತೆಯಿಂದ ಅಲ್ಪ ಭಾಗವನ್ನು ಸೆಳೆದುಕೊಳ್ಳುವ ಬಿಜೆಪಿಯ ತಂತ್ರಗಾರಿಕೆಯನ್ನು ಈ ಲೇಖನದಲ್ಲಿ ವಿಶ್ಲೇಷಣೆ ಮಾಡಿದ್ದೆ. 

ಆಗಿನಿಂದಲೂ ಬಿಜೆಪಿ ಇದೇ ಧೋರಣೆಯನ್ನು ಅನುಸರಿಸಿಕೊಂಡು ಬಂದಿದೆ. ಲಿಂಗ ಮತ್ತು ಗ್ರಾಮೀಣ-ನಗರ ವಿಭಜನೆಯ ಬಗ್ಗೆ ಬಿಜೆಪಿ ಗಂಭೀರವಾಗಿ ಕಾರ್ಯಪ್ರವೃತ್ತವಾಗಿದ್ದು ಅದರ ಅನನುಕೂಲತೆಗಳೆಲ್ಲವನ್ನೂ ನಿವಾರಿಸಿಕೊಳ್ಳುವಲ್ಲಿ ಯಶಸ್ವಿಯೂ ಆಗಿದೆ. ಕೆಳಸ್ತರದ ಮತ್ತು ಸಣ್ಣ ಪ್ರಮಾಣದ ಒಬಿಸಿ ಗುಂಪುಗಳನ್ನು, ಆಯ್ದ ಪರಿಶಿಷ್ಟ ಜಾತಿಗಳನ್ನು,ಪ್ರಧಾನವಾಗಿ ಮಹಾದಲಿತ ಸಮುದಾಯಗಳನ್ನು, ಹಲವು ಆದಿವಾಸಿ ಸಮುದಾಯಗಳನ್ನು ಹಾಗೂ ಮುಸ್ಲಿಮರ ಪೈಕಿಯೂ ಬೊಹ್ರಾ, ಶಿಯಾ ಮತ್ತು ಈಗ ಪಾಸ್ಮಾಂಡ ಮುಸ್ಲಿಮರ ಗುಂಪುಗಳನ್ನು ತನ್ನೆಡೆಗೆ ಸೆಳೆಯುವ ಮೂಲಕ ತನ್ನ ಕೊರತೆಯನ್ನು ನೀಗಿಸಿಕೊಂಡಿದೆ. ಬಡಜನತೆಯ ಮಟ್ಟಿಗೆ ಹೇಳುವುದಾದರೆ, ನೇರ ನಗದು ಪಾವತಿ ಯೋಜನೆಯ ಫಲಾನುಭವಿಗಳನ್ನೇ ಕೇಂದ್ರೀಕರಿಸಿ ರಾಜಕೀಯ ಲಾಭ ಗಳಿಸುವುದರಲ್ಲಿ ಯಶಸ್ವಿಯಾಗಿದೆ. 

ಹಾಗಾಗಿಯೇ ಬಿಜೆಪಿ ಅನುಸರಿಸುವ ಈ ಸಾಮಾಜಿಕ ಪಿರಮಿಡ್ ಕೇಂದ್ರಿತ ರಾಜಕೀಯ ಮಾದರಿಯನ್ನು ಸಮರ್ಪಕವಾಗಿ ಎದುರಿಸಲು ವಿರೋಧ ಪಕ್ಷಗಳಿಗೆ ಇದೇ ಪಿರಮಿಡ್ನ ತಳಹದಿಯನ್ನು ಕ್ರೋಡೀಕರಿಸುವುದು ಅತ್ಯವಶ್ಯವಾಗಿದೆ. ಸವಲತ್ತು ವಂಚಿತರಾಗಿರುವ ಸಮುದಾಯಗಳ ನಾಲ್ಕೂ ಆಯಾಮಗಳೊಡನೆ ಅನುಸಂಧಾನ ಮಾಡುತ್ತಿರುವುದರಿಂದ ಒಂದಲ್ಲಾ ಒಂದು ರೀತಿಯಲ್ಲಿ ಅಲ್ಪಪ್ರಮಾಣದ ಜನತೆಯನ್ನು ಬಿಟ್ಟರೆ, ಬಹುಸಂಖ್ಯೆಯ ಜನರು ನಮಗೆ ಪಿರಮಿಡ್ಡಿನ ತಳಹದಿಯಲ್ಲಿ ಕಂಡುಬರುತ್ತಾರೆ. ಇವರ ಪೈಕಿ ಶೇ.80ರಷ್ಟು ಮಂದಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರು ಕಂಡುಬರುತ್ತಾರೆ. ಶೇ.66ರಷ್ಟು ಮಾಸಿಕ ಪಡಿತರ ಪಡೆಯುವ ಬಡಜನತೆ ಕಾಣುತ್ತಾರೆ. ಶೇ.65ರಷ್ಟು ಜನರು ಇನ್ನೂ ಹಳ್ಳಿಗಳಲ್ಲೇ ವಾಸಿಸುತ್ತಾರೆ. ಈ ಆಯಾಮಗಳು ಕೊಂಚ ಮಟ್ಟಿಗೆ ಅದಲು ಬದಲಾಗಿ, ಅತ್ತಿತ್ತಲಾದರೂ ನಗರವಾಸಿ, ಮೇಲ್ಜಾತಿಯ ಮತ್ತು ಬಡತನದಿಂದ ಮುಕ್ತರಾದ ಹಿಂದೂ ಪುರುಷರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ.2ರಷ್ಟೂ ಆಗುವುದಿಲ್ಲ. ಹಾಗಾಗಿ ಪಿರಮಿಡ್ಡಿನ ತಳಹದಿಯಲ್ಲಿ ನಮಗೆ ಶೇ.98ರಷ್ಟು ಮತದಾರರು ಕಾಣಸಿಗುತ್ತಾರೆ.

ಈ ಮೂರು ಮಾದರಿಗಳನ್ನು ಅನುಸರಿಸಕೂಡದು

ನಮ್ಮ ಗಣತಂತ್ರವನ್ನು ಸಂರಕ್ಷಿಸಲು ಬಯಸುವವರು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಬಯಸುವವರು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಅಪೇಕ್ಷಿಸುವವರು ಪಿರಮಿಡ್ಡಿನ ತಳಹದಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಆದರೆ ಈ ಮಾರ್ಗದಲ್ಲಿ ಲಭ್ಯವಿರುವ ಮೂರು ಮಾದರಿಗಳಿಂದ ಜಾಗ್ರತೆ ವಹಿಸಿ ದೂರ ಇರುವುದು ಉಚಿತ. 

ಈ ಮಾದರಿಯು ಬಿಜೆಪಿ ಅನುಸರಿಸುತ್ತಿರುವ ಫಲಾನುಭವಿ ರಾಜಕಾರಣದ ಮತ್ತೊಂದು ಬಲಿಷ್ಠ ಆವೃತ್ತಿಯಾಗಕೂಡದು. ಈ ಫಲಾನುಭವಿ ಎನ್ನುವುದು ಯಜಮಾನ-ಪ್ರಜೆಯ ಸಂಬಂಧಗಳನ್ನು ಬಿಂಬಿಸುವಂತಹುದು. ಇದರಲ್ಲಿ ಫಲಾನುಭವಿಯನ್ನು ಸಕ್ರಿಯ ಹಕ್ಕುಗಳನ್ನು ಪಡೆದ ಪ್ರಜೆಯಾಗಿ ಪರಿಗಣಿಸುವುದಿಲ್ಲ. ಪಿರಮಿಡ್ ರಾಜಕಾರಣದ ತಳಹದಿಯಲ್ಲಿ ಈ ಜನತೆಯನ್ನು ಲಾಭಾರ್ಥಿ (ಫಲಾನುಭವಿ) ಎಂದು ಪರಿಗಣಿಸುವುದಕ್ಕಿಂತಲೂ ಪುರುಷಾರ್ಥಿ ( ಮೂಲ ಲಿಂಗ-ತಟಸ್ಥ ಅರ್ಥದಲ್ಲಿ ನೋಡಿದಾಗ) ಎಂದು ಪರಿಭಾವಿಸುವುದು ಒಳಿತು. ಈ ಜನತೆ ಘನತೆಯ ಜೀವನೋಪಾಯಕ್ಕಾಗಿ ಬೆವರು ಸುರಿಸಿ ದುಡಿಯುವವರೇ ಆಗಿರುತ್ತಾರೆ. ಸರಕು, ಸೇವೆ ಮತ್ತು ಜ್ಞಾನದ ಉತ್ಪಾದಕರೂ ಆಗಿರುತ್ತಾರೆ. 

ಪಿರಮಿಡ್ ರಾಜಕಾರಣದ ತಳಹದಿಯು ಹಳೆಯ ಕಾಂಗ್ರೆಸ್ ಶೈಲಿಯ ಗರೀಬಿ ಹಠಾವೋ ರಾಜಕಾರಣ ಆಗಿರಲು ಸಾಧ್ಯವಿಲ್ಲ. ಇದು ಎಲ್ಲರ ಯೋಗಕ್ಷೇಮದ ರಾಜಕಾರಣ ಆಗಿರಬೇಕು. ಬಡಜನತೆಯ ನಡುವೆ ಬಹುಸಂಖ್ಯೆಯ ಜನತೆ ಅಂದರೆ ಸಣ್ಣ ರೈತರು ಮತ್ತು ಕಡಿಮೆ ಆದಾಯದ ನಗರವಾಸಿಗಳು ಅವರನ್ನು ಸ್ವತಃ ಬಡಜನರೆಂದು ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ. ಎರಡನೆಯದಾಗಿ ಈ ಘೋಷಣೆಯನ್ನು ಮುಂದಿಟ್ಟುಕೊಂಡು ಬಡಜನತೆಯನ್ನು ಕ್ರೋಡೀಕರಿಸುವ ದಿನಗಳು ಎಂದೋ ಕಳೆದುಹೋಗಿವೆ. ಈಗ ಬಡಜನತೆಯೂ ಸಹ ನಿಶ್ಚಿತವಾದ ಸೌಲಭ್ಯ ವಿತರಣೆಯನ್ನು ಬಯಸುತ್ತಾರೆ. ಮೂರನೆಯದಾಗಿ ನಾವು ಬಡಜನತೆಯನ್ನು ವ್ಯತ್ಯಾಸರಹಿತ ವರ್ಗ ಎಂದು ಪರಿಭಾವಿಸಲಾಗುವುದಿಲ್ಲ. ಭೂರಹಿತ ಕಾರ್ಮಿಕರಿಗೆ ಉಪಯುಕ್ತವಾಗಬಹುದಾದ ಭರವಸೆಗಳು ಭೂಮಿ ಹೊಂದಿರುವ ರೈತರ ದೃಷ್ಟಿಯಲ್ಲಿ ಉಪಯುಕ್ತವಾಗಲಾರದು. ಗ್ರಾಮೀಣ ಕುಶಲಕರ್ಮಿಗಳನ್ನು ನಗರದ ಸೇವಾ ವಲಯದ ವರ್ಗಗಳಿಂದ ಭಿನ್ನ ನೆಲೆಯಲ್ಲೇ ನೋಡಬೇಕಾಗುತ್ತದೆ. ಅಂತಿಮವಾಗಿ ಈ ಮಂಡಲ್ ನಂತರದ ಯುಗದಲ್ಲಿ ಜಾತಿ ಆಯಾಮಗಳನ್ನು ವರ್ಗದೊಂದಿಗೆ ಸಮೀಕರಿಸಿಯೇ ನೋಡಬೇಕಾಗುತ್ತದೆ. 

ಅಥವಾ ಹಳೆಯ ಮಾದರಿಯ ಎಡಪಂಥೀಯ ವರ್ಗ ರಾಜಕಾರಣವನ್ನೂ ಅನುಸರಿಸಲಾಗುವುದಿಲ್ಲ. ಇದು ಬಹು-ಆಯಾಮವನ್ನು ಹೊಂದಿರುವುದೇ ಅಲ್ಲದೆ ಕೇವಲ ಸಂಘಟಿತ ಕಾರ್ಖಾನೆ ಕಾರ್ಮಿಕರಿಗೆ ಅಥವಾ ಸಾಮಾನ್ಯ ಆರ್ಥಿಕ ವರ್ಗಗಳಿಗೆ ಸೀಮಿತವಾಗಿರಕೂಡದು. ವರ್ಗ ವೈರುಧ್ಯಗಳು ಮತ್ತು ವರ್ಗ ಸಂಘರ್ಷ ಎಂಬ ಪರಿಭಾಷೆಯನ್ನು ಬಳಸುವುದು ಸಾಮಾನ್ಯವಾಗಿ ಅನಗತ್ಯವಾದರೂ, ಉತ್ಪಾದಕರು ಮತ್ತು ಗೇಣಿದಾರರಿಗೆ ಸಂಬಂಧಪಟ್ಟಂತೆ ಮಾತ್ರ ಬಳಸಬಹುದು. ಶ್ರಮಿಕರ ಮತ್ತು ರೈತಾಪಿಯ ಅಥವಾ ಸಮಸ್ತ ಗ್ರಾಮೀಣ ಕೃಷಿಕ ವಲಯದ ನಡುವೆ ವರ್ಗಾಧಾರಿತ ಮೈತ್ರಿ ಸಾಧಿಸುವುದೇ ಪಿರಮಿಡ್ ರಾಜಕಾರಣದ ತಳಹದಿಯಾಗಿರುತ್ತದೆ.. ಈ ರಾಜಕಾರಣವನ್ನು ಸಾರ್ವಜನಿಕ ಉದ್ದಿಮೆಯನ್ನು ಸಮರ್ಥಿಸುವ ಮಾದರಿ ಎಂದೂ ಘೋಷಿಸಬೇಕಿಲ್ಲ. ಮೇಲಾಗಿ ಪಿರಮಿಡ್ ರಾಜಕಾರಣದ ತಳಸ್ತರವು ಬ್ಯಾರಲ್ ಅರ್ಥಶಾಸ್ತ್ರದ ತಳಸ್ತರವೇ ಆಗಬಾರದು. ಸಂಪತ್ತನ್ನು ಹೇಗೆ ಉತ್ಪಾದಿಸುವುದು ಎನ್ನುವಂತೆಯೇ ಸಂಪತ್ತಿನ ವಿತರಣೆಯ ಮಾದರಿಯ ಬಗ್ಗೆಯೂ ಯೋಚಿಸುವಂತಿರಬೇಕು. 

ಪಿರಮಿಡ್ ರಾಜಕಾರಣದ ಹೊಸ ತಳಹದಿಯಲ್ಲಿ ಹೊಸ ಒಕ್ಕೂಟ, ಹೊಸ ಕಾರ್ಯತಂತ್ರ ಹಾಗೂ ಹೊಸ ಪರಿಭಾಷೆಯನ್ನು ಹೊಂದಿರಬೇಕು. ಇದು ಪಿರಮಿಡ್ಡಿನ ತಳಮಟ್ಟವಲ್ಲ ಅದರ ತಳಹದಿಯಾಗಿರುತ್ತದೆ, ಭಾರತದ ಆಧಾರವಾಗಿರುತ್ತದೆ. ತಳಹದಿ ಯಲ್ಲಿರುವ ಜನರು ಕೇವಲ ಉಡುಗೊರೆಗಳನ್ನು ಸ್ವೀಕರಿಸುವವರಾಗಿರುವುದಿಲ್ಲ ಬದಲಾಗಿ ಸರಕು, ಸೇವೆ ಮತ್ತು ಜ್ಞಾನದ ಉತ್ಪಾದಕರಾಗಿರುತ್ತಾರೆ. ಇವರು ಉದ್ಯಮಿ ಗಳಾಗಿರುತ್ತಾರೆ, ಸಂಪತ್ತು ಸೃಷ್ಟಿಸುವವರಾಗಿರುತ್ತಾರೆ, ರಾಷ್ಟ್ರ ನಿರ್ಮಾತೃಗಳಾಗಿರುತ್ತಾರೆ. ಆದ್ದರಿಂದ ಈ ರಾಜಕಾರಣದ ಕಾರ್ಯಸೂಚಿಯು ಅವರಲ್ಲಿರುವ ಕೊರತೆಯನ್ನಷ್ಟೇ ಪ್ರತಿಬಿಂಬಿಸುವುದರ ಬದಲಾಗಿ ಅವರಲ್ಲಿರುವ ಕೌಶಲ, ವಿವೇಕ ಮತ್ತು ಅವರು ಹೊಂದಿರಬಹುದಾದ ಆಕಾಂಕ್ಷೆಗಳನ್ನು ಬಿಂಬಿಸುವಂತಿರಬೇಕು. ಮೂಲಭೂತ ಜೀವನೋಪಾಯದ ವಿಚಾರಗಳು ಮತ್ತು ಅವಶ್ಯಕತೆಗಳ ಬಗ್ಗೆ ಗಮನ ನೀಡುವುದೇ ಅಲ್ಲದೆ, ಶಿಕ್ಷಣ, ಘನತೆಯ ಜೀವನೋಪಾಯ ಹಾಗೂ ಗುಣಮಟ್ಟದ ಬದುಕಿನ ಅಗತ್ಯತೆಗಳಾದ ಆರೋಗ್ಯ ಮತ್ತು ಪರಿಸರ ರಕ್ಷಣೆಯ ಬಗ್ಗೆ ಈ ಜನತೆಯಲ್ಲಿರುವ ಭವಿಷ್ಯದ ಆಕಾಂಕ್ಷೆಗಳತ್ತ ಗಮನಹರಿಸಬೇಕು. 

ಇತ್ತೀಚಿನ ಬೆಳವಣಿಗೆಗಳನ್ನೇ ಬುನಾದಿಯನ್ನಾಗಿಟ್ಟುಕೊಂಡು 2024ರ ಮಹಾ ಚುನಾವಣೆಗಳತ್ತ ಸಾಗುವ ಅಲ್ಪಕಾಲಿಕ ಕಾರ್ಯತಂತ್ರದ ರೂಪದಲ್ಲಿ ಈ ಪ್ರಕ್ರಿಯೆ ಯನ್ನು ಆರಂಭಿಸಬೇಕಿದೆ. ಈ ಹೊಸ ರಾಜಕಾರಣಕ್ಕೆ ಅದಾನಿ ಸಮೂಹದ ಬಗ್ಗೆ ಬಯಲಾಗಿರುವ ವಾಸ್ತವಗಳು ಈಗಾಗಲೇ ಒಂದು ಹಿನ್ನೆಲೆಯನ್ನು ಒದಗಿಸಿವೆ. ಮಾಧ್ಯಮಗಳು ಇದನ್ನು ಮರೆಮಾಚಿರಬಹುದು ಆದರೆ ಇದು ಜನಸಾಮಾನ್ಯರ ನಡುವೆ ತಳಮಟ್ಟದವರೆಗೂ ಪ್ರವಹಿಸುತ್ತಿದೆ. ರಫೇಲ್ ಒಪ್ಪಂದದಂತೆ ಮರೆಯಾಗಿಲ್ಲ. ಜಾತಿ ಗಣತಿಯ ಬೇಡಿಕೆಯೂ ಸಹ ವಿತರಣಾ ನ್ಯಾಯದ ಸಮಸ್ಯೆಯನ್ನು ಮುನ್ನೆಲೆಗೆ ತರಲು ಸಹಾಯಕವಾಗಿದೆ. ರೈತ ಆಂದೋಲನವು ಇಡೀ ಗ್ರಾಮೀಣ ಸಮಾಜದ ರಾಜಕೀಯ ಏಕೀಕರಣಕ್ಕೆ ನಾಂದಿ ಹಾಡಿದೆ. ಸಾರಾಯಿ ವಿರೋಧಿ ಆಂದೋಲನಗಳು ಅಥವಾ ಪಾನ ನಿಷೇಧ ನೀತಿಗಳು ಮಹಿಳಾ ಸಮುದಾಯದ ಹಕ್ಕೊತ್ತಾಯಗಳನ್ನು ರಾಷ್ಟ್ರೀಯ ಕಾರ್ಯಸೂಚಿಯ ಒಂದು ಭಾಗವನ್ನಾಗಿ ಮಾಡಿದೆ. ಈ ಎಲ್ಲ ಸಾಧ್ಯತೆ ಗಳನ್ನೂ 2024ರ ನಿಖರ ಕಾರ್ಯಸೂಚಿಯನ್ನಾಗಿ ಪರಿವರ್ತಿಸುವುದು ನಮ್ಮ ಮುಂದಿರುವ ಸವಾಲು. 

ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ರಕ್ಷಿಸುವ ರಾಜಕಾರಣವು ರಕ್ಷಣಾತ್ಮಕವಾಗಿ ಇರಬೇಕಿಲ್ಲ. ಪಿರಮಿಡ್ ರಾಜಕಾರಣದ ತಳಹದಿ ಯು ಈ ರಾಜಕಾರಣಕ್ಕೆ ಆಮೂಲಾಗ್ರವಾದ, ಕ್ರಿಯಾಶೀಲ ತಿರುವು ನೀಡುವುದಕ್ಕೆ ಅವಕಾಶವನ್ನು ಕಲ್ಪಿಸುತ್ತದೆ.

ಕೃಪೆ: ದ ಪ್ರಿಂಟ್ 

Similar News