ಜನರ ಕನಸುಗಳು ನೂತನ ಸರಕಾರದಿಂದ ನನಸಾಗಲಿ

Update: 2023-05-22 18:41 GMT

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕರ್ನಾಟಕದ ಜನತೆ 135 ಸ್ಥಾನಗಳ ಭರ್ಜರಿ ಬಹುಮತ ನೀಡಿದೆೆ. ಇದರಿಂದಾಗಿ ಎರಡು ಪಕ್ಷಗಳ ಮೈತ್ರಿ, ಆಪರೇಷನ್ ಕಮಲ ಮುಂತಾದ ಚಿಂತೆಯಿಲ್ಲದೆ ರಾಜ್ಯದ ಆಡಳಿತ ನಡೆಸುವ ಅವಕಾಶ ಕಾಂಗ್ರೆಸ್‌ಗೆ ದೊರೆತಿದೆ. ಹಾಗಾಗಿ ಸರಕಾರದ ಮೇಲೆ ಜನರ ನಿರೀಕ್ಷೆ ಕೂಡ ಸಹಜವಾಗಿಯೇ ಹೆಚ್ಚಾಗಿದೆ. ಹಿಂದಿನ ಸರಕಾರ ಮಾಡಿದ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿ, ಚುನಾವಣೆ ವೇಳೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವುದರ ಜೊತೆಗೆ ರಾಜ್ಯದ ಹಾಗೂ ಜನತೆಯ ಸಮಸ್ಯೆಗಳನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಪರಿಹರಿಸಬೇಕಿದೆ.

1. ಶೈಕ್ಷಣಿಕ ಎಡವಟ್ಟುಗಳನ್ನು ಸರಿಪಡಿಸಿ
ಬಿಜೆಪಿ ಸರಕಾರವು ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಲವು ಎಡವಟ್ಟುಗಳನ್ನು ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ ಸೇರಿದಂತೆ ಅನೇಕರ ಪಠ್ಯಗಳನ್ನು ವಿವಾದಾತ್ಮಕವಾಗಿ ತಿದ್ದುಪಡಿ ಮಾಡಲಾಗಿತ್ತು. ಕೆಲವು ತಪ್ಪುಗಳನ್ನು ಸರಕಾರ ಹಿಂಪಡೆದಿದ್ದರೂ ಇನ್ನೂ ಅನೇಕ ವಿವಾದಾತ್ಮಕ ತಿದ್ದುಪಡಿಗಳು ಹಾಗೆಯೇ ಉಳಿದುಕೊಂಡಿವೆ. ಅದನ್ನು ಮತ್ತೆ ಮೊದಲಿದ್ದಂತೆ ಮಾಡಬೇಕಾದ ಜವಾಬ್ದಾರಿ ಕಾಂಗ್ರೆಸ್ ಸರಕಾರದ ಮೇಲಿದೆ. ಸಿಎಂ ಸಿದ್ದರಾಮಯ್ಯನವರ ಸರಕಾರವು ಶೀಘ್ರವೇ ಈ ಕುರಿತು ಕ್ರಮ ಕೈಗೊಳ್ಳಲಿ.

2. ಕನ್ನಡ, ಕನ್ನಡಿಗರ ರಕ್ಷಣೆ
ರಾಜ್ಯದೆಲ್ಲೆಡೆ ಸರಕಾರಿ ಕನ್ನಡ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ನಗರ ಪ್ರದೇಶಗಳಲ್ಲಂತೂ ಸರಕಾರಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವುದರಲ್ಲಿ ಸಂಪೂರ್ಣ ವಿಫಲವಾಗಿವೆ. ಇದನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ. ಕೇಂದ್ರ ಸರಕಾರದ ಎಲ್ಲ ಉದ್ಯೋಗ ನೇಮಕಾತಿಗಳ ಅಧಿಸೂಚನೆಗಳು ಕನ್ನಡದಲ್ಲೂ ಪ್ರಕಟವಾಗುವಂತೆ ಹಾಗೂ ಅವುಗಳ ಪರೀಕ್ಷೆಗಳು ಕನ್ನಡದಲ್ಲೂ ನಡೆಯುವಂತೆ ಕೇಂದ್ರ ಸರಕಾರದ ಮೇಲೆ ತೀವ್ರ ಒತ್ತಡ ಹೇರಬೇಕಾದ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕಿದೆ.

3. ಮಹಿಳೆಯರ ಭಾವನೆಗೆ ಸ್ಪಂದನೆ
ರಾಜ್ಯದ ಕೆಲವೇ ಕೆಲವು ತಾಲೂಕು ಕೇಂದ್ರಗಳಲ್ಲಿ ಮಾತ್ರ ಮಹಿಳಾ ಪೊಲೀಸ್ ಠಾಣೆಗಳಿವೆ. ಎಲ್ಲ ತಾಲೂಕುಗಳಿಗೂ ಇದನ್ನು ವಿಸ್ತರಿಸಬೇಕಿರುವುದು ಈಗಿನ ಕಾಲದ ಅಗತ್ಯ. ಮಹಿಳೆಯರು ಉದ್ಯೋಗ ಮಾಡುವ ಸ್ಥಳಗಳಲ್ಲಿ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಕಾನೂನು ಬರಬೇಕಿದೆ. ಬಾಲ್ಯವಿವಾಹ ನಿಷೇಧವಾಗಿದ್ದರೂ ಅಲ್ಲಲ್ಲಿ ಈ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲು ಜನಜಾಗೃತಿ ಹಾಗೂ ಕಠಿಣ ಕ್ರಮಕ್ಕೆ ಸರಕಾರ ಆದ್ಯತೆ ನೀಡಲಿ. ಮಹಿಳೆಯರ ರಕ್ಷಣೆಗಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಪೊಲೀಸರು ಗಸ್ತು ತಿರುಗುವುದನ್ನು ಹೆಚ್ಚಿಸಲಿ.

4. ಭ್ರಷ್ಟಾಚಾರಕ್ಕೆ ಕಡಿವಾಣ
ಈ ಹಿಂದೆ ಇದೇ ಸಿದ್ದರಾಮಯ್ಯನವರ ಸರಕಾರವೇ ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿ, ಎಸಿಬಿ ಎಂಬ ಹೊಸ ತನಿಖಾ ಸಂಸ್ಥೆಯನ್ನು ರಚಿಸಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕೂಡ ಲೋಕಾಯುಕ್ತ ಬಲಪಡಿಸಲು ನಿರ್ಲಕ್ಷ್ಯ ತೋರಿತು. ಕೊನೆಗೆ, ಹೈಕೋರ್ಟ್ ಆದೇಶದಂತೆ ಎಸಿಬಿ ರದ್ದುಗೊಂಡು, ಅಲ್ಲಿನ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾದವು. ನೂತನ ಸರಕಾರವು ಲೋಕಾಯುಕ್ತ ಸಂಸ್ಥೆಯ ಪರಮಾಧಿಕಾರವನ್ನು ಗೌರವಿಸಿ, ನಿಷ್ಪಕ್ಷಪಾತ ತನಿಖೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲಿ.

5. ಮೂಲ ಸೌಕರ್ಯಗಳ ಅಭಿವೃದ್ಧಿ
ಜನರ ಆಕ್ರೋಶ ಸ್ಫೋಟಗೊಂಡರೆ ಮಾತ್ರ ರಸ್ತೆಗುಂಡಿಗಳನ್ನು ಮುಚ್ಚುವ ಕೆಟ್ಟ ಚಾಳಿಗೆ ಈಗಿನ ರಾಜ್ಯ ಸರಕಾರವಾದರೂ ಇತಿಶ್ರೀ ಹೇಳಬೇಕಿದೆ. ಚುನಾವಣೆ ದೂರವಿದ್ದರೂ ಕೂಡ ಕಾಲಕಾಲಕ್ಕೆ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚುವ ವ್ಯವಸ್ಥೆ ಬರಲಿ. ರಾಜಕಾಲುವೆ ಒತ್ತುವರಿ ತೆರವು, ಕಾಲಕಾಲಕ್ಕೆ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಪಾದಚಾರಿ ಮಾರ್ಗಗಳ ನಿರ್ವಹಣೆ, ಪ್ರತಿಮನೆಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಮುಂತಾದ ಅನೇಕ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕಿದೆ.

Similar News