ಕುಂದಾಪುರ: ತೆಂಗಿನ ಮರಕ್ಕೆ ಢಿಕ್ಕಿ ಹೊಡೆದ ಆಟೋ; ಹಿಂಬದಿ ಸವಾರ ಮೃತ್ಯು

Update: 2023-05-29 08:52 GMT

ಕುಂದಾಪುರ: ಆಟೋ ರಿಕ್ಷಾ ಚಾಲಕನ ಅಜಾಗೂರಕತೆಯ ಚಾಲನೆಯಿಂದಾಗಿ ಹಿಂಬದಿ ಸವಾರ ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಗ್ರಾಮದ ಆನಗೋಡು ಸಮೀಪದ ತ್ರಾಸಿ-ಮೊವಾಡಿ ರಸ್ತೆಯಲ್ಲಿ  ನಡೆದಿದೆ.

ಅತೀ ವೇಗವಾಗಿ ಬಂದು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದೆ.

ಕುಂದಾಪುರದ ನಿವಾಸಿ ಭಾಸ್ಕರ (33) ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟ ದುರ್ದೈವಿ. ಭಾನುವಾರ ತಡರಾತ್ರಿ ವೇಳೆಗೆ ತ್ರಾಸಿ ಸಮೀಪದ ಮೊವಾಡಿ-ತ್ರಾಸಿ ರಸ್ತೆಯಲ್ಲಿ ಗುರುರಾಜ ಪೂಜಾರಿ ಎಂಬವರ ಆಟೋದಲ್ಲಿ ಸಂಚರಿಸುವ ವೇಳೆ ಘಟನೆ ಸಂಭವಿಸಿದೆ.

ಸ್ಥಳೀಯರ ಸಹಕಾರದೊಂದಿಗೆ ಗಂಗೊಳ್ಳಿ ಆಪತ್ಬಾಂಧವ 24*7 ಅಂಬುಲೆನ್ಸ್ ಮೂಲಕ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಅವರು ಮೃತಪಟ್ಡಿದ್ದಾರೆ ಎಂದು ತಿಳಿದುಬಂದಿದೆ.

ರಿಕ್ಷಾ ಚಾಲಕ ಗುರುರಾಜ ಪೂಜಾರಿ  ಅವರಿಗೂ ಗಾಯಗಳಾಗಿದ್ದು, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News