ಕುಸ್ತಿಪಟುಗಳ ಪ್ರತಿಭಟನೆ: ಸಚಿವೆ ಕಾಣೆಯಾಗಿದ್ದಾರೆ ಎಂಬ ಕಾಂಗ್ರೆಸ್‌ ಪೋಸ್ಟರ್‌ಗೆ ಸ್ಮೃತಿ ಇರಾನಿ ತಿರುಗೇಟು

Update: 2023-06-01 08:45 GMT

ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪದ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮೌನವಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮಗಳಲ್ಲಿ 'ಕಾಣೆಯಾಗಿದ್ದಾರೆ' ಎಂಬ ಚಿತ್ರವನ್ನು ವೈರಲ್ ಮಾಡಿದೆ. 

ಇದಕ್ಕೆ ತಿರುಗೇಟು ನೀಡಿರುವ ಸಚಿವೆ ಸ್ಮೃತಿ ಇರಾನಿ, "ಒಂದು ವೇಳೆ ಮಾಜಿ ಸಂಸದರನ್ನು ಹುಡುಕುತ್ತಿದ್ದರೆ ನಮ್ಮನ್ನು ಸಂಪರ್ಕಿಸಿ" ಎಂದು ಮೋದಿ ಉಪನಾಮ ಪ್ರಕರಣದಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಈ ನಡುವೆ, ಸಚಿವೆ ಸ್ಮೃತಿ ವಿರುದ್ಧದ ತನ್ನ ದಾಳಿಯನ್ನು ಮತ್ತಷ್ಟು ತೀಕ್ಷ್ಣಗೊಳಿಸಿರುವ ಕಾಂಗ್ರೆಸ್, ಮತ್ತೊಂದು ಟ್ವೀಟ್‌ನಲ್ಲಿ, "ಸಚಿವೆಯು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳ ವಿರುದ್ಧ ಕೇಳಿ ಬರುವ ಪ್ರಶ್ನೆಗಳು ಹಾಗೂ ಪ್ರತಿಕ್ರಿಯೆಗಳನ್ನು ಬಚ್ಚಿಡುತ್ತಾರೆ ಹಾಗೂ ಅಂಥವರಿಗೆ ಪೊಲೀಸ್ ಆತಿಥ್ಯ ನೀಡುತ್ತಾರೆ" ಎಂದು ಟೀಕಿಸಿದೆ.

ಕಾಂಗ್ರೆಸ್ ಪಕ್ಷವು ಸ್ಮೃತಿ ಇರಾನಿಯ ಒಂದು ಭಾವಚಿತ್ರ ಹಾಗೂ ಮೀನಾಕ್ಷಿ ಲೇಖಿಯ ಮತ್ತೊಂದು ಭಾವಚಿತ್ರವನ್ನು ಪೋಸ್ಟ್ ಮಾಡಿ, ಒಬ್ಬರು ಟ್ವೀಟ್ ಅನ್ನು ಬಚ್ಚಿಡುತ್ತಾರೆ, ಮತ್ತೊಬ್ಬರು ಮಹಿಳಾ ಕುಸ್ತಿ ಪಟುಗಳ ಕುರಿತ ಪ್ರಶ್ನೆಗಳಿಂದ ಓಡಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದು, ತನ್ನ ಮಾತಿಗೆ ಪೂರಕವಾಗಿ ಈ ವಿಷಯದ ಕುರಿತು ಪ್ರಶ್ನೆ ಕೇಳಿದಾಗ ಲೇಖಿ ತಮ್ಮ ಕಾರಿನತ್ತ ಓಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದೆ.

'ಕಾಣೆಯಾಗಿದ್ದಾರೆ' ಎಂಬ ಕಾಂಗ್ರೆಸ್ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ಸಚಿವೆ ಸ್ಮೃತಿ ಇರಾನಿ, "ಓ ದೈವಿಕ ರಾಜಕೀಯ ಜೀವಿಯೇ, ನಾನೀವಾಗಲಷ್ಟೇ ಸಿರಿಸಾ ಗ್ರಾಮ, ವಿಧಾನಸಭಾ ಕ್ಷೌರಾಲಯ, ಲೋಕಸಭಾ ಕ್ಷೇತ್ರ ಅಮೇಠಿಯನ್ನು ತೊರೆದು ಧುರಾಂಪುರ್ ಕಡೆ ಬರುತ್ತಿದ್ದೇನೆ" ಎಂದು ಹಿಂದಿಯಲ್ಲಿ ಕಾಲೆಳೆದಿದ್ದಾರೆ.

Similar News