ಉತ್ತಮ, ಆರೋಗ್ಯಕರ ಸಮಾಜ ನಿರ್ಮಾಣ ರೆಡ್ ಕ್ರಾಸ್ ಗುರಿ: ಗೋಪಾಲ ಹೊಸೂರು

ವಿಶ್ವ ರೆಡ್ ಕ್ರಾಸ್ ದಿನಾಚರಣೆ, ಪ್ರಶಸ್ತಿ ಪ್ರದಾನ ಮತ್ತು ಪ್ರಮಾಣ ಪತ್ರ ವಿತರಣೆ

Update: 2023-06-01 10:40 GMT

ಮಂಗಳೂರು: ಜಗತ್ತಿನ ಎಲ್ಲರನ್ನೊಳಗೊಂಡ  ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ರೆಡ್ ಕ್ರಾಸ್ ಸಂಸ್ಥೆಯ ಗುರಿಯಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಕರ್ನಾಟಕ ಶಾಖೆಯ ಉಪಾಧ್ಯಕ್ಷ ಗೋಪಾಲ ಬಿ.ಹೊಸೂರು ತಿಳಿಸಿದ್ದಾರೆ.

ಭಾರತೀಯ ರೆಡ್ ಕ್ರಾಸ್ ದಕ್ಷಿಣ ಕನ್ನಡ ಘಟಕ,ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು, ಯುವ ರೆಡ್ ಕ್ರಾಸ್ ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಯವ ರೆಡ್ ಕ್ರಾಸ್, ಯೆನೆಪೋಯ ವಿಶ್ವ ವಿದ್ಯಾನಿಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಹಂಪನಕಟ್ಟೆ ಮಂಗಳೂರು ವಿಶ್ವವಿದ್ಯಾನಿಲಯದ  ರವೀಂದ್ರ ನಾಥ ಕಲಾಭವನದಲ್ಲಿ ಗುರುವಾರ ವಿಶ್ವ ರೆಡ್ ಕ್ರಾಸ್ ದಿನದ ಅಂಗವಾಗಿ  ಸಮಾರಂಭದಲ್ಲಿ ಯುವ ರೆಡ್ ಕ್ರಾಸ್ ಘಟಕದ ಸ್ವಯಂ ಸೇವಕರಿಗೆ ಪ್ರಶಸ್ತಿ ಪ್ರದಾನ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.

ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ರೆಡ್ ಕ್ರಾಸ್, ಎಲ್ಲರನ್ನೂ ಒಳಗೊಂಡ ಜಾತ್ಯತೀತ ನೆಲೆಯ ಸಂಸ್ಥೆ ಯಾಗಿದೆ. ಜಗತ್ತಿನ 200ಕ್ಕೂ ಅಧಿಕ ರಾಷ್ಟ್ರಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಘಟಕಗಳಿವೆ.ಉತ್ತಮ ನಾಯಕತ್ವ ಗುಣ,ಸಂಘಟನಾತ್ಮಕವಾಗಿ ಸಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರೆಡ್ ಕ್ರಾಸ್ ನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ. ಮಂಗಳೂರು ನನಗೆ ಇಷ್ಟ ವಾದ ಪ್ರದೇಶ. ಇಲ್ಲಿನ ಜನರಲ್ಲಿ ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಸೇವಾ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳುವ ಗುಣ, ಉತ್ಕೃಷ್ಟ ನಾಗರಿಕ ಮೌಲ್ಯಗಳನ್ನು ನಾನು ಇಲ್ಲಿನ ಜನರಲ್ಲಿ ಗುರುತಿಸಿದ್ದೇನೆ. ವೀರಪ್ಪನ್ ವಿರುದ್ಧ ದ ಕಾರ್ಯಾಚರಣೆ ಯಲ್ಲಿ ಗುಂಡು ತಾಗಿ ಮಾರಣಾಂತಿಕವಾಗಿ ಗಾಯಗೊಂಡ ಸಂದರ್ಭದಲ್ಲಿ ಮಂಗಳೂರು ಮೂಲದ ವೈದ್ಯರಾದ ಡಾ.ನಿತ್ಯಾನಂದ ಶೆಟ್ಟಿ ಚಿಕಿತ್ಸೆ ನೀಡಿ ನನ್ನ ಜೀವ ಉಳಿಸಿರುವುದನ್ನು ಮರೆಯಲು ಸಾಧ್ಯವಿಲ್ಲ ಎಂದು ಗೋಪಾಲ ಹೊಸೂರು ತಿಳಿಸಿದ್ದಾರೆ.

ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಾ, ರೆಡ್ ಕ್ರಾಸ್ ಸಂಸ್ಥೆ ಮಾನವೀಯತೆಯ ಮನೆ. ವಿದ್ಯಾರ್ಥಿಗಳ ಬದುಕಿನಲ್ಲಿ ಸೇವಾ ಮನೋಭಾವ, ನೈತಿಕ ಮೌಲ್ಯಗಳು, ಮಾನವೀಯತೆಯ ಜೊತೆ ಆತ್ಮ ಸಂತೋಷ ಮೈಗೂಡಿಸಿಕೊಳ್ಳಲು ಯೂತ್ ರೆಡ್ ಕ್ರಾಸ್ ಒಂದು ಮಾದರಿ ಸಂಸ್ಥೆ ಯಾಗಿದೆ ಎಂದು ತಿಳಿಸಿದರು.

ಮಂಗಳೂರು ವಿ.ವಿ.ಯ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಯೂತ್ ರೆಡ್ ಕ್ರಾಸ್ ಘಟಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸಲು ಅತ್ಯುತ್ತಮ ಸಂಸ್ಥೆಯಾಗಿ ಕಾರ್ಯ ನಿರ್ವಹಿ ಸುತ್ತಾ ಬಂದಿದೆ ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಯೆನೆಪೋಯ ವಿ.ವಿ.ಯ ಕುಲಪತಿ ಪ್ರೊ.ವಿಜಯ ಕುಮಾರ್, ಮಂಗಳೂರು ವಿ.ವಿ.ಕಾಲೇಜಿನ ಪ್ರಾಂಶು ಪಾಲರಾದ  ಡಾ.ಅನಸೂಯ ರೈ,ದ.ಕ ಜಿಲ್ಲಾ ರೆಡ್ ಕ್ರಾಸ್ ವಿಶೇಷ ಚೇತನ ಘಟಕದ ಮುಖ್ಯ ಸ್ಥ ಹಾಗೂ ವೆನ್ಲಾಕ್ ವೈದ್ಯರಾದ ಡಾ.ಕೆ.ಆರ್. ಕಾಮತ್,ದ.ಕ.ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ,ರೆಡ್ ಕ್ರಾಸ್ ರಾಜ್ಯ ಘಟಕದ  ಪ್ರತಿನಿಧಿ ಯತೀಶ್ ಬೈಕಂಪಾಡಿ,  ದ.ಕ ಜಿಲ್ಲಾ ಘಟಕದ ಖಜಾಂಚಿ ಮೋಹನ್ ಶೆಟ್ಟಿ,ಮಂಗಳೂರು ವಿ.ವಿ. ಯೂತ್ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ.ಗಣಪತಿ ಗೌಡ ಉಪ ಸ್ಥಿತರಿದ್ದರು.

ದ.ಕ ಜಿಲ್ಲಾ ಘಟಕದ ಸಭಾಪತಿ ಸಿ.ಎ ಶಾಂತಾರಾಮ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸಂಜಯ ಶೆಟ್ಟಿ ವಂದಿಸಿದರು. ಸಚೇತ ಸುವರ್ಣ ,ನಿತ್ಯಶ್ರೀ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಿರೂಪಿಸಿದರು.ಅದ್ರಿಜಾ ಮತ್ತು ಜ್ಯೋತಿ ಸಭಾ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

Similar News