ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ನ ಕಾಯ್ದಿರಿಸಿದ ಕೋಚ್‌ಗಳಲ್ಲಿದ್ದ ಪ್ರಯಾಣಿಕರು ಸುರಕ್ಷಿತ

ಮಾಹಿತಿ ಹಂಚಿಕೊಂಡ ಬೆಂಗಳೂರಿನ ಅಧಿಕಾರಿಗಳು

Update: 2023-06-03 09:56 GMT

ಬೆಂಗಳೂರು: ಒಡಿಶಾದಲ್ಲಿ ಭೀಕರ ಅಪಘಾತಕ್ಕೊಳಗಾಗಿರುವ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ನ ಕಾಯ್ದಿರಿಸಿದ ಕೋಚ್‌ಗಳಲ್ಲಿದ್ದ ಪ್ರಯಾಣಿಕರು ಯಾರೂ ಗಾಯಗೊಂಡಿಲ್ಲ ಅಥವಾ ಸಾವನ್ನಪ್ಪಿಲ್ಲ, ಆದರೆ ಜನರಲ್ ಸೀಟಿಂಗ್‌ನಿಂದ ಕೆಲವು ಪ್ರಯಾಣಿಕರಿಗೆ ( ಜಿಎಸ್) ಸ್ವಲ್ಪ ಗಾಯಗಳಾಗಿವೆ ಎಂದು ಶನಿವಾರದಂದು ಲಭ್ಯವಾದ ಇತ್ತೀಚಿನ ಮಾಹಿತಿಯಿಂದ ತಿಳಿದುಬಂದಿದೆ ಎಂದು ಬೆಂಗಳೂರಿನ ಅಧಿಕಾರಿಗಳು ತಿಳಿಸಿದ್ದಾರೆ.

ಉರುಳಿದ ಜನರಲ್ ಸೀಟಿಂಗ್‌ ಹಾಗೂ  ಎಸ್‌ಎಲ್‌ಆರ್‌ಡಿ (ಬ್ರೇಕ್ ವ್ಯಾನ್) ಕೋಚ್‌ಗಳನ್ನು ಇನ್ನೂ ಪುನಃಸ್ಥಾಪಿಸಲಾಗುತ್ತಿದೆ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಹಾಗೂ  ಗೂಡ್ಸ್ ರೈಲನ್ನು ಒಳಗೊಂಡ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 260 ಜನರು ಸಾವನ್ನಪ್ಪಿದ್ದಾರೆ ಮತ್ತು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (ಎಸ್‌ಎಂವಿಬಿ) ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ಗೆ 994 ಕಾಯ್ದಿರಿಸಲಾಗಿದೆ ಹಾಗೂ  ಸುಮಾರು 300 ಕಾಯ್ದಿರಿಸದ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ನೈಋತ್ಯ ರೈಲ್ವೆ (ಎಸ್‌ಡಬ್ಲ್ಯೂಆರ್) ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಎಂವಿಬಿಯಿಂದ ಹೊರಟ ಎಕ್ಸ್‌ಪ್ರೆಸ್ ರೈಲಿನ 2 ಜಿಎಸ್ ಕೋಚ್‌ಗಳು ಮತ್ತು ಬ್ರೇಕ್ ವ್ಯಾನ್ ಹಳಿತಪ್ಪಿವೆ ಎಂದು ಅವರು ಹೇಳಿದರು,

“ಅವು ಕಾಯ್ದಿರಿಸದ ಬೋಗಿಗಳಾಗಿರುವುದರಿಂದ ಪ್ರಯಾಣಿಕರ ಗುರುತುಗಳನ್ನು ಖಚಿತಪಡಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಕಾಯ್ದಿರಿಸಿದ ಬೋಗಿಗಳಲ್ಲಿ, ಸಂಪರ್ಕ ಸೇರಿದಂತೆ ಪ್ರಯಾಣಿಕರ ವಿವರಗಳು ಟಿಕೆಟ್ ಕಾಯ್ದಿರಿಸುವಿಕೆಯ ಸಮಯದಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ ಡೇಟಾಬೇಸ್‌ನಲ್ಲಿ ಸಂಖ್ಯೆ ಲಭ್ಯವಿದೆ. ಹೊಸ ಮಾಹಿತಿ  ಸ್ವೀಕರಿಸಿದ ನಂತರ, ಹೆಚ್ಚಿನ ವಿವರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಾಗುವುದು'' ಎಂದು ಅಧಿಕಾರಿ ಹೇಳಿದರು.

Similar News