ರೈಲ್ವೆಯಲ್ಲಿ3 ಲಕ್ಷ ಖಾಲಿ ಹುದ್ದೆಗಳಿವೆ: ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ ಮಲ್ಲಿಕಾರ್ಜುನ ಖರ್ಗೆ

Update: 2023-06-05 12:11 GMT

ಹೊಸದಿಲ್ಲಿ: ಇನ್ನೂರಕ್ಕೂ ಹೆಚ್ಚು ಜನರನ್ನು ಬಲಿಪಡೆದ ಒಡಿಶಾ ರೈಲು ದುರಂತದ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೈಲ್ವೆಇಲಾಖೆಯಲ್ಲಿ 3 ಲಕ್ಷ ಖಾಲಿ ಹುದ್ದೆಗಳಿವೆ ಎಂದು ಆರೋಪಿಸಿದರು.

ಈ ಅಪಘಾತ ನಡೆದ ವಲಯವಾದ ಈಸ್ಟ್‌ ಕೋಸ್ಟ್‌ ರೈಲ್ವೇಯಲ್ಲಿ ಸುಮಾರು 8,278 ಹುದ್ದೆಗಳು ಖಾಲಿಯಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಖರ್ಗೆ ಹೇಳಿದ್ದಾರೆ.

ಪ್ರಧಾನಿ ಕಾರ್ಯಾಲಯ ಮತ್ತು ಕ್ಯಾಬಿನೆಟ್‌ ಸಮಿತಿ ಮಹತ್ವದ ಪಾತ್ರ ವಹಿಸುವ ಉನ್ನತ ರೈಲ್ವೆಯಲ್ಲಿನ ಹುದ್ದೆಗಳಿಗೆ ಸಂಬಂಧಿಸಿದಂತೆಯೂ ಇದೇ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

1990ರ ದಶಕದಲ್ಲಿ ರೈಲ್ವೆಯಲ್ಲಿ 18 ಲಕ್ಷ  ಉದ್ಯೋಗಿಗಳಿದ್ದರೆ ಈಗ ಈ ಸಂಖ್ಯೆ 12 ಲಕ್ಷಕ್ಕೆ ಇಳಿದಿದೆ ಹಾಗೂ ಇವರಲ್ಲಿ 3.18 ಲಕ್ಷ ಮಂದಿ ಗುತ್ತಿಗೆ ಆಧಾರಿತ ಉದ್ಯೋಗಿಗಳು ಎಂದು ಖರ್ಗೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

“ಖಾಲಿ ಹುದ್ದಗಳು  ಪರಿಶಿಷ್ಟ ಜಾತಿ, ವರ್ಗಗಳು, ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಭರವಸೆ ನೀಡಲಾದ ಉದ್ಯೋಗಗಳಿಗೆ ಅಪಾಯವೊಡ್ಡುತ್ತವೆ,” ಎಂದು ಖರ್ಗೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರಲ್ಲದೆ ಇಷ್ಟೊಂದು ದೊಡ್ಡ ಸಂಖ್ಯೆಯ ಹುದ್ದೆಗಳನ್ನು ಕಳೆದ ಒಂಬತ್ತು ವರ್ಷಗಳಲ್ಲಿ ಏಕೆ ಭರ್ತಿಗೊಳಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

2017-18 ಹಾಗೂ 2020-21 ನಡುವೆ ನಡೆದ ನಾಲ್ಕು ರೈಲು ಅಪಘಾತಗಳು ಹಳಿ ತಪ್ಪಿದ ಕಾರಣ ನಡೆದಿದ್ದವು ಎಂಬ ಸಿಎಜಿ ಆಡಿಟ್‌ ವರದಿಯನ್ನು ಉಲ್ಲೇಖಿಸಿದ ಖರ್ಗೆ “2017-18ರಲ್ಲಿ ಈಸ್ಟ್‌ ಕೋಸ್ಟ್‌ ರೈಲ್ವೆಯಲ್ಲಿ ರೈಲು ಮತ್ತು ವೆಲ್ಡ್‌ (ಟ್ರ್ಯಾಕ್‌ ನಿರ್ವಹಣೆ) ಕುರಿತಂತೆ ಯಾವುದೇ ತಪಾಸಣೆಯನ್ನು ನಡೆಸಲಾಗಿಲ್ಲ, ಇವುಗಳನ್ನೇಕೆ ನಿರ್ಲಕ್ಷಿಸಲಾಗಿದೆ, ಎಂದು ಕೇಳಿದ್ದಾರೆ.

ಬಾಲಾಸೋರ್‌ ಅಪಘಾತ ಕುರಿತಂತೆ ಸಿಬಿಐ ತನಿಖೆಗೆ ಕೇಂದ್ರ ಶಿಫಾರಸು ಮಾಡಿದ ಹಿಂದಿನ ಕಾರಣ ಪ್ರಶ್ನಿಸಿದ ಖರ್ಗೆ, ಕಾನೂನು ಜಾರಿ ಏಜನ್ಸಿಗಳು ತಾಂತ್ರಿಕ, ಸಾಂಸ್ಥಿಕ ಮತ್ತು ರಾಜಕೀಯ ವೈಫಲ್ಯಗಳಿಗೆ ಹೊಣೆಗಾರಿಕೆಯನ್ನು ಬೊಟ್ಟು  ಮಾಡಲು ಸಾಧ್ಯವಾಗುವುದಿಲ್ಲ ಎಂದರು, ಸಿಬಿಐ ಇರುವುದು ಅಪರಾಧಗಳ ತನಿಖೆಗೆ ರೈಲು ಅಪಘಾತಗಳ ತನಿಖೆಗಲ್ಲ ಎಂದರು.

ಸಿಬಿಐ ಅಧಿಕಾರಿಗಳಿಗೆ ರೈಲ್ವೆ ಸುರಕ್ಷತೆ, ಸಿಗ್ನಲಿಂಗ್‌, ನಿರ್ವಹಣಾ ಕ್ರಿಯೆಗಳ ಬಗ್ಗೆ ತಾಂತ್ರಿಕ ಪರಿಣತಿಯಿಲ್ಲ ಎಂದು ಅವರು ಹೇಳಿದರು.

2016ರಲ್ಲಿ 150 ಜನರ ಸಾವಿಗೆ ಕಾರಣವಾದ ಕಾನ್ಪುರ ರೈಲು ದುರಂತದ ತನಿಖೆಯನ್ನು ಕೇಂದ್ರ ಸರ್ಕಾರ ಎನ್‌ಐಎಗೆ ವಹಿಸಿದ್ದನ್ನೂ ಉಲ್ಲೇಖಿಸಿದ ಖರ್ಗೆ, ಮುಂದೆ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಈ  ಅಪಘಾತದ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದ್ದರು, ಕಠಿಣ ಶಿಕ್ಷೆ ವಿಧಿಸುವ ಭರವಸೆಯನ್ನೂ ನೀಡಲಾಗಿತ್ತು. ಆದರೆ 2018ರಲ್ಲಿ ಎನ್‌ಐಎ ತನಿಖೆ ಪೂರ್ಣಗೊಳಿಸಿ ಚಾರ್ಚ್‌ಶೀಟ್‌ ಸಲ್ಲಿಸಲು ನಿರಾಕರಿಸಿತ್ತು. ಈ 150 ಸಾವಿಗೆ ಯಾರು ಕಾರಣರು ಎಂಬ ಬಗ್ಗೆ ದೇಶ ಇನ್ನೂ ಕತ್ತಲೆಯಲ್ಲಿದೆ,” ಎಂದು ಹೇಳಿದರು.

Similar News