ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವೆ ಶೋಭಾ ಚಾಲನೆ

'ಜನರಿಗೆ ಅನುಕೂಲವಾಗುವಂತೆ ಸಿಆರ್‌ಝೆಡ್ ಸಮಸ್ಯೆಗೆ ಪರಿಹಾರʼ

Update: 2023-06-05 12:39 GMT

ಕುಂದಾಪುರ, ಜೂ.5: ಕಾಡಿನ ವಿಸ್ತರಣೆ ಜೊತೆಗೆ ಕಾಂಡ್ಲಾ ವನಗಳನ್ನು ಹೆಚ್ಚಿಸಬೇಕಾಗಿದೆ. ದೇಶದಲ್ಲಿ ಶೇ.20 ಭಾಗ ಅರಣ್ಯ ಪ್ರದೇಶವಿದ್ದು ಕಾಡ್ಗಿಚ್ಚು ಮೊದಲಾದ ಸಮಸ್ಯೆಗಳಿಂದ ನಾಶವಾಗುತ್ತಿದೆ. ಇದನ್ನು ತಡೆಯಲು ಸರಕಾರ, ಇಲಾಖೆ, ಸಂಘಸಂಸ್ಥೆಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದೆ. ಜನರಿಗೆ ಅನುಕೂಲವಾಗುವಂತೆ ಸಿಆರ್‌ಝೆಡ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರ ಕ್ರಮ ವಹಿಸಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅರಣ್ಯ ಇಲಾಖೆ ಮಂಗಳೂರು ವೃತ್ತ, ಕುಂದಾಪುರ ವಿಭಾಗದಿಂದ ‘ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಕುಂದಾಪುರ-ಕೋಡಿ ಸೇತುವೆ ಬಳಿಯ ಶ್ರೀನಾಗ ಜಟ್ಟಿಗೇಶ್ವರ ದೇವಸ್ಥಾನದ ಎದುರು ಹಮ್ಮಿ ಕೊಂಡ ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಕಾಂಡ್ಲಾ ಗಿಡಗಳು ಸುನಾಮಿಯಂತಹ ಪರಿಸರದ ವ್ಯತ್ಯಯಗಳನ್ನು ತಡೆಯುತ್ತದೆ. ಕಾಂಡ್ಲಾ ವನದ ಹಸಿರು ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಪಕ್ಷಿ ಸಂಕುಲಕ್ಕೂ ಆಶ್ರಯ ನೀಡುವುದಲ್ಲದೆ ಜಲಚರಗಳಿಗೆ ಆವಾಸ ಸ್ಥಾನವಾಗಿದೆ. ವಿಶ್ವ ಪರಿಸರ ದಿನದ ಅಂಗವಾಗಿ ದೇಶದಲ್ಲಿ ಪರಿಸರ ಉಳಿಸುವ, ಅರಣ್ಯ ಬೆಳೆಸುವ ಹಾಗೂ ಸ್ವಚ್ಚತಾ ಕಾರ್ಯ ನಡೆಸುವ ಕಾರ್ಯವಾಗುತ್ತದೆ ಎಂದರು.

ಪರಿಸರ, ನೀರು, ಕಾಡಿನ ಸ್ವಚ್ಚತೆಯ ಜೊತೆಗೆ ಅರಣ್ಯ ಭಾಗ ಹೆಚ್ಚು ಬೆಳಸುವ ದೃಷ್ಟಿಯಿಂದ ಸಾವಿರಾರು ಕಾರ್ಯ ಕ್ರಮಗಳು ನಡೆಯುತ್ತಿದ್ದು ನೆಟ್ಟ ಸಸಿಗಳ ವರ್ಧನೆಯ ಬಗ್ಗೆ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರಕಾರ ಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಯುವ ಪೀಳಿಗೆ ಅರಣ್ಯ ವರ್ಧನೆ ಹಾಗೂ ಸ್ವಚ್ಚತೆ, ಪರಿಸರ ರಕ್ಷಣೆ ವಿಚಾರದಲ್ಲಿ ಮುತುವರ್ಜಿ ವಹಿಸ ಬೇಕು. ಪರಿಸರಕ್ಕೆ ಪೂರಕವಾದ ಗಿಡಗಳನ್ನು ಬೆಳೆಸುವಲ್ಲಿ ಕಠಿಬದ್ಧರಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸುಮಾರು 1.5ಲಕ್ಷ ಕಾಂಡ್ಲಾ ಗಿಡ ನೆಡುವ ಕಾರ್ಯ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿ ರುವುದು ಸಾಹಸದ ಕೆಲಸ. ಕಾಂಡ್ಲಾ ಗಿಡಗಳಿಂದ ಸಮುದ್ರ ಕೊರೆತ ನಿಯಂತ್ರಣ ಗೊಳ್ಳಲಿದ್ದು, ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಇದರೊಂದಿಗೆ ಸಮುದ್ರ, ನದಿ ತೀರಗಳ ಸ್ವಚ್ಚತೆಗೆ ಹೆಚ್ಚಿನ ಗಮನವನ್ನು ಸಾರ್ವಜನಿಕರು ನೀಡಬೇಕೆಂದರು.

ಇದೇ ಸಂದರ್ಭ ಮಾಲಾಡಿಯಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಸಹಕರಿಸುತ್ತಿರುವ ಸುರೇಶ್ ದೇವಾಡಿಗ ಹಾಗೂ ಕಡಲಾಮೆ ಸಂರಕ್ಷಣೆಯಲ್ಲಿ ಸಹಕಾರ ನೀಡುತ್ತಿರುವ ಬಾಬು ಮೊಗವೀರ ಅವರನ್ನು ಸನ್ಮಾನಿಸಲಾಯಿತು. ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಕರಾವಳಿ ನಿಯಂತ್ರಣಾ ವಲಯದ ಪ್ರಾದೇಶಿಕ ನಿರ್ದೇಶಕ ಶ್ರೀಪತಿ ಬಿ.ಎಸ್., ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ.ಕಿರಣ್ ಬಾಬು ಉಪಸ್ಥಿತರಿದ್ದರು.

ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ.ನಾಯಕ್ ಸ್ವಾಗತಿಸಿ, ಪ್ರಸ್ತಾವಿಕ ವಾಗಿ ಮಾತನಾಡಿದರು. ಭಂಡಾರ್‌ಕಾರ್ಸ್‌  ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ರಾಮಚಂದ್ರ ಸ್ವಾಗತಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೊಬೋ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಶೋಭಾ ಕರಂದ್ಲಾಜೆ ಬೋಟ್ ಮೂಲಕ ತೆರಳಿ ನದಿ ನಡುವೆ ಬೆಳೆಸಿದ ಕಾಂಡ್ಲಾ ವನಗಳ ವೀಕ್ಷಣೆ ಮಾಡಿದರು.

Similar News