ಕರ್ನಾಟಕ ಸಮುದಾಯ ಬಾನುಲಿಗಳ ವರ್ಚುವಲ್ ಮೀಟ್

Update: 2023-06-07 14:07 GMT

ಉಡುಪಿ, ಜೂ.6: ಸರಕಾರದ ಗಮನವನ್ನು ಸೆಳೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ಕಾರ್ಯಾಚರಿಸು ತ್ತಿರುವ ಸಮುದಾಯ ಬಾನುಲಿ ಕೇಂದ್ರಗಳ ಮುಖ್ಯಸ್ಥರು ಜೂ.2ರಂದು ನಡೆದ ಆನ್‌ಲೈನ್ ಮೀಟ್‌ನಲ್ಲಿ ಭಾಗವಹಿಸಿ ಕರ್ನಾಟಕ ಸಮುದಾಯ ಬಾನುಲಿಗಳ ಅಭಿವೃದ್ಧಿ, ಮುಂದಿನ ಯೋಜನೆಗಳ ಕುರಿತಾಗಿ ಚರ್ಚಿಸಿ ಸುದೀರ್ಘ ಸಭೆಯನ್ನು ನಡೆಸಿದರು.

ಸಮುದಾಯ ಬಾನುಲಿ ಕೇಂದ್ರಗಳು ಸಮುದಾಯದ ಅಭಿವೃದ್ಧಿಗಾಗಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. ಕರ್ನಾಟಕದಲ್ಲಿ ಸುಮಾರು 24 ಸಮುದಾಯ ಬಾನುಲಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಶಿಕ್ಷಣ ಸಂಸ್ಥೆಗಳಿಂದ, ಸರಕಾರೇತರ ಸಂಸ್ಥೆಗಳಿಂದ, ಕೃಷಿ ವಿಶ್ವ ವಿದ್ಯಾನಿಲಯಗಳಿಂದ ನಡೆಸಲ್ಪಡುತ್ತಿರುವ ಈ ಸಮುದಾಯ ಬಾನುಲಿ ವ್ಯವಸ್ಥೆ ಸುಸ್ಥಿರ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಮಾತ್ರವಲ್ಲದೆ ಇತರ ಸಮೂಹ ಮಾಧ್ಯಮಗಳಂತೆ ಸರಕಾರದ ವಿವಿಧ ಇಲಾಖೆಗಳ ಪ್ರಾಯೋಜಕತ್ವದ ಕಾರ್ಯಕ್ರಮಗಳನ್ನು ಪಡೆಯುವಲ್ಲಿ ವಿಫಲ ವಾಗಿವೆ ಎಂದು ಮುಖ್ಯಸ್ಥರು ತಿಳಿಸಿದರು.

ಕೊರೊನಾ ಕಾಲಘಟ್ಟದ ನಂತರ ರಾಜ್ಯದ ಎಲ್ಲಾ ಸಮುದಾಯ ಬಾನುಲಿಗಳ ಒಗ್ಗೂಡುವಿಕೆಯಲ್ಲಿ ನಡೆಸಿದ ಮೊದಲ ವರ್ಚುವಲ್ ಮೀಟ್ ಇದಾಗಿತ್ತು. ಸಂಘಟಿತರಾಗುವ ದೃಷ್ಟಿಯಿಂದ ಈ ಸಭೆಯಲ್ಲಿ ಸಮುದಾಯ ಬಾನುಲಿಗಳ ರಾಜ್ಯಮಟ್ಟದ ಸಂಘದ ಸ್ಥಾಪನೆ ಕುರಿತಾಗಿಯೂ ಚರ್ಚಿಸಲಾಯಿತು ಮತ್ತು ಮುಂದಿನ ಮುಖಾಮುಖಿಯಾಗಿ ನಡೆಸುವ ಸಭೆಯಲ್ಲಿ ಈ ಕುರಿತು ಕಾರ್ಯ ಪ್ರವೃತ್ತರಾಗಲು ನಿರ್ಣಯಿಸಲಾಯಿತು.

ಈ ವರ್ಚುವಲ್ ಮೀಟ್‌ನ್ನು ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರದ ಡಾ.ರಶ್ಮಿ ಅಮ್ಮೆಂಬಳ ಆಯೋಜಿಸಿದ್ದರು. ಬಾಗಲಕೋಟೆಯ ಬಿ.ಇ.ಸಿ ಧ್ವನಿಯ ಭರತ್ ಬಡಿಗೇರ್ ಸಹಕರಿಸಿದರು.

ಶಿವಶಂಕರ್, ಶಮಂತ ಡಿ.ಎಸ್., ಶಿವಾಜಿ ಗಣೇಶನ್, ಡಾ.ಶಿವರಾಜ್ ಶಾಸ್ತ್ರಿ, ಶಿವಕುಮಾರ್, ನಿಂಗರಾಜು ಅಭಿಷೇಕ್, ವಿಶ್ವನಾಥ್, ವರುಣ್ ಕಂಜರ್ಪಣೆ, ರವೀಂದ್ರ ಕವಟೇಕರ್, ವಿ.ಕೆ.ಕಡಬ, ಮಂಜುನಾಥ್, ಸುರೇಖಾ ಸಂಕನ ಗೌಡರ್, ಗುರುಪ್ರಸಾದ್, ಪಾಂಡುರಂಗ ವಿಠ್ಠಲ್, ಕಿರಣ್ ಚೌಗ್ಲಾ, ಸಾಯಿಬಾಬು, ರಮ್ಯ, ತೆಜಸ್ವಿನಿ, ಸುಲೋಚನ, ಲಲಿತ ಅಸೂತಿ, ದೇವೇಂದ್ರ, ಡಾ.ಶಿವಲಿಂಗಯ್ಯ, ಜನಾರ್ದನ್, ಅನಂತ್ ಮೊದಲಾದವರು ಉಪಸ್ಥಿತರಿದ್ದರು.

Similar News