ಬಳ್ಳಾರಿ | ಸಕ್ಕರೆ ಕಾರ್ಖಾನೆ ಶಾಲಾ ಆವರಣದಲ್ಲಿ ಹೊಸ ಕಟ್ಟಡಕ್ಕೆ ವಿರೋಧ : ಶಾಲೆ ಸ್ಥಳಾಂತರಕ್ಕೆ ಆಗ್ರಹ
ಬಳ್ಳಾರಿ / ಕಂಪ್ಲಿ: ಸಕ್ಕರೆ ಕಾರ್ಖಾನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೌಲಾನಾ ಆಜಾದ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಶಾಲೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿ ಎಸ್ಡಿಎಂಸಿ ಅಧ್ಯಕ್ಷ ರಾಮಲಿಂಗ ಅವರ ನೇತೃತ್ವದಲ್ಲಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕುರುಗೋಡು ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮ್ಯಾನೇಜರ್ ಭುಜಂಗಯ್ಯ ಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಎನ್. ಮನೋಜಗೌಡ ಮಾತನಾಡಿ, ಇಲ್ಲಿನ ಶಾಲೆ ಹಳೆಯದಾಗಿದ್ದು ಅನೇಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಪ್ರಸ್ತುತವೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಶಾಲೆಗೆ ವಿಶಾಲವಾದ ಆಟದ ಮೈದಾನವೂ ಇದೆ ಎಂದು ಹೇಳಿದರು.
ಪಿಎಂಶ್ರೀ ಯೋಜನೆಗೆ ಈ ಶಾಲೆ ಒಳಪಟ್ಟಿದ್ದು, ಅದನ್ನು ಆಧುನಿಕ ಮಾದರಿ ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂತಹ ಸಂದರ್ಭದಲ್ಲಿ ಇದೇ ಆವರಣದಲ್ಲಿ ಮೌಲಾನಾ ಆಜಾದ್ ಶಾಲೆಯ ಕಟ್ಟಡ ನಿರ್ಮಿಸಿದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸುಂಕಣ್ಣ, ಪ್ರಕಾಶ, ರಿಸ್ವಾಮಿ, ಆದಿನಾರಾಯಣ, ಓಬಳೇಶ, ಕಾರ್ತಿಕ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಹಾಗೂ ಎಸ್ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.