ಬಳ್ಳಾರಿ | ತಾಳೂರಿನಲ್ಲಿ ಅಡುಗೆ ಸಿಲಿಂಡರ್ ಸ್ಫೋಟ : ಮನೆಗಳಿಗೆ ಹಾನಿ
Update: 2026-03-02 19:42 IST
ಬಳ್ಳಾರಿ: ಸಂಡೂರು ತಾಲೂಕಿನ ತಾಳೂರು ಗ್ರಾಮದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಮನೆ ಹಾಗೂ ಅಕ್ಕಪಕ್ಕದ ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ.
ತಾಳೂರು ಗ್ರಾಮದ ನಿವಾಸಿ ಸುಭಾನ್ ಸಾಬ್ ಅವರು ಕೆಲಸಕ್ಕೆ ತೆರಳುವ ಮುನ್ನ ಖಾಲಿ ಸಿಲಿಂಡರ್ ತೆಗೆದು ಹೊಸ ಸಿಲಿಂಡರ್ ಅಳವಡಿಸುತ್ತಿದ್ದ ವೇಳೆ ಏಕಾಏಕಿ ಅನಿಲ ಸೋರಿಕೆ ಆಗಿರುವುದನ್ನು ಗಮನಿಸಿದ್ದಾರೆ. ಗಾಬರಿಗೊಂಡ ಅವರು ತಕ್ಷಣ ಮನೆಯಿಂದ ಹೊರಬಂದಿದ್ದಾರೆ. ಕ್ಷಣಾರ್ಧದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಸೇರಿದಂತೆ ಪಕ್ಕದ ಮನೆಗಳಿಗೂ ಹಾನಿ ಉಂಟಾಗಿದೆ.
ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ತೋರಣಗಲ್ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.