×
Ad

ಸತ್ಯದ ಬಡತನದಿಂದ ಮಾಧ್ಯಮಗಳು ನೆಲಕಚ್ಚುತ್ತಿವೆ: ಕೆ.ವಿ.ಪ್ರಭಾಕರ್

Update: 2025-07-07 19:40 IST

ಬಳ್ಳಾರಿ : ನಮ್ಮ ಸಂವಿಧಾನ ಪ್ರತ್ಯೇಕವಾಗಿ ‘ಪತ್ರಿಕಾ ಸ್ವಾತಂತ್ರ್ಯ ಕೊಟ್ಟಿಲ್ಲ. ವಾಕ್ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವಾಗಿದೆ. ಹೀಗಾಗಿ ಸಂವಿಧಾನ ಉಳಿದರೆ ಮಾತ್ರ ಪತ್ರಿಕಾ ಸ್ವಾತಂತ್ರ್ಯವೂ ಉಳಿಯುತ್ತದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಪ್ರತಿಪಾದಿಸಿದ್ದಾರೆ.

ಸೋಮವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಹೊಸ್ತಿಲಿನ ಪತ್ರಿಕೋದ್ಯಮಕ್ಕೆ ‘ಆದಾಯದ ಬಡತನ’ ವಿತ್ತೇ ಹೊರತು ‘ಸತ್ಯದ ಬಡತನ’ ಇರಲಿಲ್ಲ ಎಂದು ಹೇಳಿದರು.

ಆದಾಯದ ಬಡತನದಲ್ಲಿದ್ದ ಪತ್ರಿಕೆಗಳು ಸತ್ಯದ ಶ್ರೀಮಂತಿಕೆ ಹೊಂದಿದ್ದ ಕಾರಣಕ್ಕೆ ದೇಶದ ಜನರೇ ಅಂತಹ ಪತ್ರಿಕೆಗಳನ್ನು ಉಳಿಸಿ-ಬೆಳೆಸಿದ್ದನ್ನು ಅಂಬೇಡ್ಕರ್ ಮತ್ತು ಗಾಂಧಿಯವರೂ ಹೇಳಿದ್ದಾರೆ. ಇವರ ಬಳಿ ಹಣಕ್ಕೆ ಬಡತನ ಇತ್ತು, ಸತ್ಯಕ್ಕೆ ಬಡತನ ಇರಲಿಲ್ಲ. ಆದರೆ, ಇಂದು ಆದಾಯದ ಬಡತನದಿಂದ ಮೇಲೆ ಬಂದಿರುವ ಮಾಧ್ಯಮ ಕ್ಷೇತ್ರ ಸತ್ಯದ ಬಡತನದ ಕಾರಣಕ್ಕೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ ಎಂದರು.

ನಾವು ಪತ್ರಿಕಾ ದಿನವನ್ನು ಸಂಭ್ರಮದಿಂದ ಆಚರಿಸುತ್ತಿರುವ ಹೊತ್ತಿನಲ್ಲೇ ನಮ್ಮ ಮಾಧ್ಯಮಗಳ ನೆತ್ತಿ ಮೇಲೆ ತೂಗುತ್ತಿರುವ ಕತ್ತಿಯ ಬಗ್ಗೆಯೂ ನಾವು ಗಂಭೀರವಾಗಿ ಯೋಚಿಸಬೇಕಿದೆ ಎಂದ ಅವರು, ಮಾಧ್ಯಮಗಳ ಅಸ್ತಿತ್ವ ಉಳಿದಿರುವುದೇ ಪತ್ರಿಕಾ ಸ್ವಾತಂತ್ರ್ಯದಿಂದ. ಈಗ ಪತ್ರಿಕಾ ಸ್ವಾತಂತ್ರ್ಯ ಅಪಾಯದಲ್ಲಿದೆ. ಜೊತೆಗೆ ವಾಕ್ ಸ್ವಾತಂತ್ರ್ಯದ ಸೂಚ್ಯಂಕದಲ್ಲೂ ಭಾರತ 109ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಈ ಕುಸಿತಗಳ ಬಗ್ಗೆ ನಾವು ಪತ್ರಕರ್ತರು ಗಂಭೀರವಾಗಿ ಯೋಚಿಸಬೇಕಿದೆ ಎಂದು ಹೇಳಿದರು.

ಭಾರತೀಯ ಪತ್ರಿಕೋದ್ಯಮಕ್ಕೆ ಉನ್ನತವಾದ ಚರಿತ್ರೆ ಇದೆ. ಸ್ವಾತಂತ್ರ್ಯ ಹೋರಾಟದಿಂದ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವವರೆಗೂ ಮಹತ್ವದ ಪಾತ್ರ ನಿರ್ವಹಿಸಿರುವುದನ್ನು ಚರಿತ್ರೆಯುದ್ದಕ್ಕೂ ಕಾಣುತ್ತೇವೆ. ಸಾವಿರಾರು ವರ್ಷಗಳ ಭಾರತದ ಸಾಮಾಜಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ ಬೆಸುಗೆಯನ್ನು ಹರಿಯಲು ಬ್ರಿಟಿಷರು ಮುಂದಾದಾಗಲೆಲ್ಲಾ ಈ ಬೆಸುಗೆಯನ್ನು ಹೆಣೆಯುವ ಜವಾಬ್ದಾರಿ ಭಾರತೀಯ ಪತ್ರಿಕಾ ರಂಗ ನಿರಂತರವಾಗಿ ನಿರ್ವಹಿಸಿಕೊಂಡು ಬರುತ್ತಿದೆ ಎಂದರು.

ಭಾರತದ ಮೊದಲ ಪತ್ರಿಕೆ ಎಂದು ಹೇಳಲಾಗುವ ‘ಬೆಂಗಾಲ್ ಗೆಜೆಟ್ ಬ್ರಿಟಿಷರು ಹೇಗೆ ಭಾರತೀಯ ಸಮಾಜವನ್ನು ವಿಭಜಿಸುತ್ತಿದ್ದಾರೆ ಎನ್ನುವುದನ್ನು ಗಟ್ಟಿಧ್ವನಿಯಲ್ಲಿ ಹೇಳುವ ಮತ್ತು ಖಂಡಿಸುವ ಮೂಲಕವೇ ಹೆಚ್ಚು ಜನಪ್ರಿಯವಾಯಿತು. ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ, ಭಗತ್ ಸಿಂಗ್, ಅಂಬೇಡ್ಕರ್, ತಿಲಕ್ ಅವರೂ ಆರಂಭಿಸಿದ ಪತ್ರಿಕೆಗಳು ಬೇರೆ-ಬೇರೆ ಧ್ವನಿಯಲ್ಲಿ ಭಾರತವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿವೆ.

ನಮ್ಮ ಸಂವಿಧಾನದಿಂದ ‘ಜಾತ್ಯತೀತ ಮತ್ತು ಸಮಾಜವಾದ’ ಎನ್ನುವ ಮೌಲ್ಯಗಳನ್ನು ಕಿತ್ತು ಹಾಕಬೇಕು ಎನ್ನುವ ವ್ಯವಸ್ಥಿತ ಷಡ್ಯಂತ್ರ ಶುರುವಾಗಿದೆ. ಇವೆರಡೂ ಮೌಲ್ಯಗಳು ನಮ್ಮ ಸಂವಿಧಾನದ ಪ್ರಾಣವಾಯು. ಮಾಧ್ಯಮಗಳು ಈ ಪ್ರಾಣವಾಯುವನ್ನು ಉಳಿಸುವ ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲುವ ಮೂಲಕ ಭಾರತದ ಜಾತ್ಯತೀತ ಮತ್ತು ಸಮಾಜವಾದಿ ಬೆಸುಗೆ ಹರಿಯದಂತೆ ಕಾಪಾಡಿಕೊಳ್ಳುವ ನೇಕಾರರಾಗಬೇಕಿದೆ ಎಂದು ಕೆ.ವಿ.ಪ್ರಭಾಕರ್ ಕರೆ ನೀಡಿದರು.

‘ತಾವೇ ಮೊದಲು ಸುದ್ದಿ ಕೊಡಬೇಕು ಎನ್ನುವ ಧಾವಂತದಲ್ಲಿ ಪರಿಶೀಲನೆ ನಡೆಸದೆ ಕಾಲ್ಪನಿಕ ಬ್ರೇಕಿಂಗ್ ಸುದ್ದಿ ಕೊಟ್ಟು ಬಿಡುವುದು, ಬಳಿಕ ತಮ್ಮ ಕಲ್ಪನೆಯನ್ನು ಸತ್ಯ ಮಾಡಲು ಒದ್ದಾಡುವುದುದು ನನ್ನ ಅನುಭವಕ್ಕೆ ಬರುತ್ತಿದೆ. ಇದು ವೃತ್ತಿಪರತೆಯ ಘನತೆಯನ್ನು ಕುಂದಿಸುತ್ತದೆ. ಮುಂದಿನ ಅಧಿವೇಶನದಲ್ಲಿ ಸಮಾಜದ ನೆಮ್ಮದಿ ಹಾಳು ಗೆಡವುವ ‘ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣ’ ತಡೆಗೆ ಕಾಯ್ದೆ ತರುವ ಚರ್ಚೆ ನಡೆಯುತ್ತಿದೆ’

-ಕೆ.ವಿ.ಪ್ರಭಾಕರ್ ಸಿಎಂ ಮಾಧ್ಯಮ ಸಲಹೆಗಾರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News