ಬಿಎಲ್ಡಿ ಸೌಹಾರ್ದ ಬ್ಯಾಂಕ್ : ಬೆಂಗಳೂರು ನಗರದಲ್ಲಿ ಶಾಖೆ ಉದ್ಘಾಟನೆ
ಬೆಂಗಳೂರು, ಆ. 24: ವಿಜಯಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಎಲ್ಡಿ ಸೌಹಾರ್ದ ಸಹಕಾರಿ ಬ್ಯಾಂಕ್ನ ಬೆಂಗಳೂರಿನ ಪ್ರಥಮ ಶಾಖೆಗೆ ತುಮಕೂರಿನ ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧ್ಯುಕ್ತ ಚಾಲನೆ ನೀಡಿದರು.
ಒಟ್ಟಾರೆಯಾಗಿ ಇದು 11ನೇ ಶಾಖೆಯಾಗಿದ್ದು, ಇಲ್ಲಿನ ಶಿವಾನಂದ ವೃತ್ತದ ಎಸ್ಎನ್ಎಸ್ ಪ್ಲಾಜಾದಲ್ಲಿ ಕಚೇರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಿದ್ಧಲಿಂಗ ಸ್ವಾಮಿ, ‘ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ, ಕೃಷಿ ಹಾಗೂ ಕೈಗಾರಿಕೆ ಇವೆಲ್ಲವೂ ಸಮಾಜದಲ್ಲಿ ಒಂದಕ್ಕೊಂದು ಪೂರಕವಾಗಿವೆ. ಬೆಂಗಳೂರಿನಲ್ಲಿ ತನ್ನ ಪ್ರಪ್ರಥಮ ಶಾಖೆ ತೆರೆದಿರುವ ಬಿಎಲ್ಡಿ ಬ್ಯಾಂಕ್ ಜನರಿಗೆ ನೆರವಿನ ಹಸ್ತ ಚಾಚಲಿ ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯದವರು ಹೀಗೆ ಸಮಾಜದ ಬಲವರ್ಧನೆಗೆ ರಚನಾತ್ಮಕ ಉಪಕ್ರಮಗಳನ್ನು ಮಾಡುವುದು ಶ್ಲಾಘನೀಯ ಸಂಗತಿಯಾಗಿದೆ. ಇವೆಲ್ಲವೂ ನಂಬಿಕೆ, ವಿಶ್ವಾಸ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗಳ ಮೂಲಕ ನೂರು ಶಾಖೆಗಳ ಮಟ್ಟಕ್ಕೆ ಬೆಳೆಯಲಿ ಎಂದು ಶ್ರೀಗಳು ಆಶಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಬ್ಯಾಂಕಿಂಗ್ ಕ್ಷೇತ್ರವು ಸರಿಯಾದ ಠೇವಣಿ, ಸಾಲ ನೀಡುವಿಕೆ ಮತ್ತು ಸಾಲ ವಸೂಲಾತಿಗಳ ಆಧಾರದ ಮೇಲೆ ನಡೆಯುತ್ತದೆ. ಬಿಎಲ್ಡಿ ಸೌಹಾರ್ದ ಬ್ಯಾಂಕ್ ಕೇವಲ ಮೂರು ವರ್ಷಗಳಲ್ಲಿ ತನ್ನ ಹನ್ನೊಂದನೆ ಶಾಖೆಯನ್ನು ತೆರೆಯುವ ಮಟ್ಟಕ್ಕೆ ಬೆಳೆದಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ‘ಫ.ಗು.ಹಳಕಟ್ಟಿಯವರು ಸ್ಥಾಪಿಸಿದ ಬಿಎಲ್ಡಿಇ ಸಂಸ್ಥೆಗೆ ಮೂವತ್ತು ವರ್ಷಗಳ ಹಿಂದೆಯೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾಲೂರಬೇಕೆಂಬ ಬಯಕೆ ಇತ್ತು. ನಂತರದ ದಿನಗಳಲ್ಲಿ ಸಹೋದರ ಸುನಿಲಗೌಡ ಪಾಟೀಲ್ ಆಸಕ್ತಿ ವಹಿಸಿದ್ದರಿಂದ ಅದು ಕಾರ್ಯರೂಪಕ್ಕೆ ಬಂದಿದೆ. ಎಚ್ಚರಿಕೆಯಿಂದ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಸುನಿಲಗೌಡ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೆಳಿದರು.
ಬೆಂಗಳೂರಿನ ರಾಜಾಜಿನಗರ, ಬಸವೇಶ್ವರ ನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಮುಂತಾದ ಭಾಗಗಳಲ್ಲಿ ಉತ್ತರ ಕರ್ನಾಟಕದ ಲಕ್ಷಾಂತರ ಮಂದಿ ಇದ್ದಾರೆ. ಇವರ ಹಣಕಾಸು ಅಗತ್ಯಗಳಿಗೆ ಬಿಎಲ್ಡಿ ಸೌಹಾರ್ದ ಬ್ಯಾಂಕ್ ಸ್ಪಂದಿಸಲಿ. ಮುಂದಿನ ದಿನಗಳಲ್ಲಿ ಆ ಭಾಗದಲ್ಲೂ ಶಾಖೆ ತೆರೆಯುವಂತಾಗಲಿ ಎಂದು ಅವರು ನುಡಿದಿದ್ದಾರೆ.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಿಂದ ಬೆಂಗಳೂರಿಗೆ ಬಂದು ಅಪಾರ ಸಾಧನೆ ಮಾಡಿರುವ ವಿದ್ಯಾನಂದ ದೇಸಾಯಿ, ಡಾ.ರವಿಕುಮಾರ ಮುಕಾರ್ತಿಹಾಳ, ನಾನಾಸಾಹೇಬ ಹುಗ್ಗಿ, ಗುರುಪ್ರಸಾದ ನಡಗಡ್ಡಿ ಮತ್ತು ಮೌಲಾಲಿ ಅಲಗೂರು ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ಸುನೀಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ಭಾಷಣ ಮಾಡಿ, ಮುಂದಿನ ದಿನಗಳಲ್ಲಿ ಸಾವಿರ ಕೋಟಿ ರೂ.ವಹಿವಾಟು ನಡೆಸುವ ಗುರಿ ಇದೆ ಎಂದರು. ಉಪಾಧ್ಯಕ್ಷ ಶರಣು ಗುಡ್ಡೊಡಗಿ, ಮಾಜಿ ಉಪಮೇಯರ್ ಪುಟ್ಟರಾಜು, ಡಿಎಸ್ ಮ್ಯಾಕ್ಸ್ನ ಎಸ್.ಪಿ.ದಯಾನಂದ, ನಾಗಭೂಷಣ ರೆಡ್ಡಿ, ಶ್ಯಾಮರಾಜ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.