ಬೀದರ್ | ಜೂ.30 ರಂದು ಸದ್ಭಾವನಾ ನಡಿಗೆ ಕಾರ್ಯಕ್ರಮ
ಬೀದರ್: ಸದ್ಭಾವನಾ ಮಂಚ್ ವತಿಯಿಂದ ನಗರದಲ್ಲಿ ಜೂ.30 ರಂದು ಬಸದ್ಭಾವನಾ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸದ್ಭಾವನಾ ಮಂಚದ ಸಂಚಾಲಕ ಗುರುನಾಥ್ ಗಡ್ಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10:30 ಗಂಟೆಗೆ ನಗರದ ಮುಹಮ್ಮದ್ ಗವಾನ್ ಮದರಸಾದಿಂದ ನಡಿಗೆ ಆರಂಭಿಸಲಾಗುವುದು. ಈ ನಡಿಗೆಯೂ ಚೌಬಾರಾ, ನಯಾ ಕಮಾನ್, ಬಸವೇಶ್ವರ್ ವೃತ್ತ, ಮಹಾವೀರ್ ವೃತ್ತ, ಭಗತ್ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮೂಲಕ ಹಾಯ್ದು ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮುಕ್ತಾಯಗೊಳ್ಳಲಿದೆ. ನಂತರ, ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಗಾಗಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾರತವು ಶಾಂತಿಪ್ರಿಯ ದೇಶವಾಗಿದೆ. ಅನೇಕತೆಯಲ್ಲಿ ಏಕತೆ ಈ ದೇಶದ ವಿಶೇಷವಾಗಿದೆ. ವಿಶ್ವದಲ್ಲಿ ಕೋಮು ಸೌಹಾರ್ದಕ್ಕೆ ಪ್ರಸಿದ್ಧಿ ಪಡೆದಿದೆ. ಶಾಂತಿ, ಸಹಬಾಳ್ವೆ, ಸಹೋದರತ್ವ ಇಲ್ಲಿನ ಎಲ್ಲ ಧರ್ಮಗಳ ತಿರುಳಾಗಿದೆ. ಆದರೆ, ದೇಶ ಇತ್ತೀಚೆಗೆ ಕೋಮುವಾದ, ಕೊಲೆ, ಗುಂಪು ಕೊಲೆ, ದೊಂಬಿ, ದ್ವೇಷ, ಆರ್ಥಿಕ ಬಹಿಷ್ಕಾರದಂತಹ ಸಾಮಾಜಿಕ ಅನಿಷ್ಠಗಳಿಗೆ ಹೆಸರುವಾಸಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದಿದ್ದಾರೆ.
ಸಾಮಾಜಿಕ ಅನಿಷ್ಠಗಳಿಂದ ಮಕ್ಕಳು, ಯುವಕರು ಹಾಗೂ ನಾಗರಿಕರನ್ನು ರಕ್ಷಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೌಹಾರ್ದ ನಡಿಗೆ ಸಂಘಟಿಸಲಾಗಿದೆ. ಶಾಂತಿ, ಸಹಬಾಳ್ವೆ ಬಯಸುವ ನಾಗರಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಡಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.