ಬೀದರ್ | ಆಧಾರ್ ವಿವರ ದಾಖಲಿಸದೇ ಇರುವುದಕ್ಕೆ ವಿದ್ಯಾರ್ಥಿ ವೇತನ ವಿಳಂಬವಾಗುತ್ತಿದೆ : ಶಶಿಧರ್ ಕೋಸಂಬೆ
ಬೀದರ್ : ಜಿಲ್ಲೆಯಲ್ಲಿ 1 ಲಕ್ಷ ವಿದ್ಯಾರ್ಥಿಗಳ ಆಧಾರ ವಿವರವನ್ನು ಸಾಪ್ಟ್ ವೇರ್ನಲ್ಲಿ ದಾಖಲಿಸದೇ ಇರುವುದಕ್ಕೆ ಮಕ್ಕಳಿಗೆ ದೊರೆಯಬೇಕಾದ ವಿದ್ಯಾರ್ಥಿ ವೇತನ ವಿಳಂಭವಾಗುತ್ತಿದೆ. ಸಿಆರ್ಪಿ, ಬಿಆರ್ಪಿ ಹಾಗೂ ಬಿಇಓ ಅವರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ತಿಳಿಸಿದರು.
ಜಿಲ್ಲಾ ಪಂಚಾಯತಿಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಸಮರ್ಪಕ ಅನುಷ್ಠಾನದ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಾದ ಹಾಗೂ ಪುನಶ್ವೇತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 3.33 ಲಕ್ಷ ವಿದ್ಯಾರ್ಥಿಗಳು ಇದ್ದು, ಎಲ್ಲ ವಿದ್ಯಾರ್ಥಿಗಳ ಡಾಟಬೇಸ್ ವಿವರ ದಾಖಲಾಗಬೇಕಿದೆ. ಮಕ್ಕಳ ಶಿಕ್ಷಣಕ್ಕೆ ಹಲವಾರು ಯೋಜನೆಗಳು ಹಮ್ಮಿಕೊಂಡಿದ್ದು, ಅವು ವಿದ್ಯಾರ್ಥಿಗಳಿಗೆ ತಲುಪದೇ ಇದ್ದರೆ ಯೋಜನೆಗಳು ಸಾಕಾರಗೊಳ್ಳದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ, ಬೇಜಬ್ದಾರಿ ತೋರದೆ ಕ್ರೀಯಾಶೀಲ, ಪ್ರಾಮಾಣಿಕವಾಗಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಿಆರ್ಸಿ, ಬಿಆರ್ಸಿ ಅವರು ಪ್ರಯತ್ನ ಮಾಡಬೇಕಿದೆ. ಪ್ರತಿಯೊಂದು ಶಾಲೆಯಲ್ಲಿ ಮಕ್ಕಳ ರಕ್ಷಣಾ ನೀತಿ 2016 ರ ಅನ್ವಯ ಕಡ್ಡಾಯವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ ಅಂಟಿಸಬೇಕು. ದೂರು ಪೆಟ್ಟಿಗೆ, ಮಕ್ಕಳ ಸುರಕ್ಷತಾ ಸಮಿತಿ ರಚಿಸಬೇಕು. ಶಾಲೆಯಲ್ಲಿ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕ ಹಾಗೂ ತಾತ್ಕಾಲಿಕ ಸಿಬ್ಬಂದಿಗಳ ಬದ್ಧತಾ ಪ್ರಮಾಣ ಪತ್ರ ಹಾಗೂ ಪೊಲೀಸ್ ವಿಚಾರಣೆ ಸಹ ಆಗಬೇಕು ಎಂದರು.
ತೋರಣಾ ಹಾಗೂ ವಡಗಾಂವ್ ಶಾಲೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತೀವ್ರ ಖಂಡನೀಯ ಹಾಗೂ ವಿಷಾದಕರ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ರಕ್ಷಣೆಗೆ ಸಜ್ಜಾಗಿ ಶಿಕ್ಷಕ ವೃತ್ತಿಗೆ ಗೌರವ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ಹುಮನಾಬಾದನಲ್ಲಿ ಮೂವರು ಹಾಗೂ ಬೀದರ್ ತಾಲ್ಲೂಕಿನಲ್ಲಿ ಒಂದು ಸೇರಿ ಒಟ್ಟು ನಾಲ್ಕು ವಿದ್ಯಾರ್ಥಿಗಳು ಅಕಾಲಿಕ ಮರಣ ಹೊಂದಿದ್ದಾರೆ. ಅವರ ಕುಟುಂಬಕ್ಕೆ ಶಿಕ್ಷಣ ಇಲಾಖೆಯಿಂದ ದೊರೆಯಬೇಕಾದ 1 ಲಕ್ಷ ರೂ. ಸಹಾಯ ಧನ ಶೀಘ್ರವೇ ತಲುಪಿಸಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಬನಸೋಡೆ ಅವರು ಮಾತನಾಡಿ, ಶಿಕ್ಷಣ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿಷ್ಠೆ ಮಾಡದೇ ಇರುವುದು ತೀರ ಖಂಡನೀಯ ಹಾಗೂ ವಿಷಾದನೀಯವಾಗಿದೆ. ಸಭೆಗೆ ಸಂಪೂರ್ಣ ಮಾಹಿತಿ ತರದೇ ನಿಷ್ಕಾಳಜಿ, ನಿರಾಸಕ್ತಿ ವಹಿಸಕೂಡದು. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಮಕ್ಕಳ ದೌರ್ಜನ್ಯ ಹಕ್ಕುಗಳ ಶೋಷಣೆ ಬಗ್ಗೆ ಶಿಕ್ಷಕರು ಸದಾ ಜಾಗೃತರಾಗಿ ಶಿಕ್ಷಕ ವೃತ್ತಿಯ ಗೌರವ ಹೆಚ್ಚಿಸಬೇಕು ಎಂದು ನುಡಿದರು.
ಬಡವರ, ದೀನದಲಿತರ, ರೈತ, ಕೂಲಿಕಾರ್ಮಿಕರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಅವರ ಜೀವನ ಸಫಲವಾಗುತ್ತದೆ. ಶಿಕ್ಷಣ ಅಧಿಕಾರಿಗಳಿಗೆ ಕಾಲಕಾಲಕ್ಕೆ ತರಬೇತಿಯ ಅಗತ್ಯ ಕಾಣುತ್ತಿದೆ. ನಾವು ಜಿಲ್ಲೆಯ ವಿವಿಧ ಶಾಲೆಗಳಿಗೆ ಹಾಗೂ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಕೆಲ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯದ ಕೊರತೆ ಹಾಗೂ ಆಹಾರ ಧಾನ್ಯಗಳಲ್ಲಿ ಹುಳು ಕಂಡುಬಂದಿವೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮವಹಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಎಚ್ಚರಿಸಿದರು.
ಡಿಡಿಪಿಐ ಸಲೀಂ ಪಾಶಾ ಮಾತನಾಡಿ, ಜಿಲ್ಲಾದ್ಯಂತ ಬಾಕಿ ಉಳಿದಿರುವ ವಿದ್ಯಾರ್ಥಿಗಳ ಆಧಾರ ವಿವರ ದಾಖಲೀಕರಣ ಕಾರ್ಯ ಶೀಘ್ರವೇ ಪೂರ್ಣಗೊಳಿಸಲಾಗುವುದು. ಲಭ್ಯವಿರುವ ನಾಲ್ಕು ಕಿಟ್ಗಳು ಔರಾದ್ ತಾಲ್ಲೂಕಿನಲ್ಲಿ ಉಪಯೋಗಿಸಿ ಮಕ್ಕಳ ಆಧಾರ ವಿವರ ನಮೂದು ಮಾಡುವ ಕೆಲಸ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗುರುರಾಜ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.