ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ದ.ಕ. ಜಿಲ್ಲೆಗೆ ತಂಪೆರೆದ ಮಳೆ
Update: 2025-03-12 22:16 IST
ಮಂಗಳೂರು, ಮಾ.12: ಉರಿ ಬಿಸಿಲಿನ ತಾಪಮಾನ ಏರಿಕೆಯಿಂದ ಕಂಗೆಟ್ಟಿದ್ದ ನಗರ ಸಹಿತ ದ.ಕ. ಜಿಲ್ಲೆಯ ಬಹುತೇಕ ಕಡೆ ಬುಧವಾರ ಸಂಜೆಯ ಬಳಿಕ ಮಳೆಯ ಸಿಂಚನವಾಗಿದೆ.
ನಗರದಲ್ಲಿ ಬುಧವಾರ ರಾತ್ರಿ 9ರ ಬಳಿಕ ಮಳೆಯ ಸಿಂಚನವಾದರೆ ಪುತ್ತೂರು ತಾಲೂಕಿನ ಸವಣೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ನಾನಾ ಕಡೆ ಮಳೆಯಾಗಿದೆ. ಕೆಲವೆಡೆ ಸಾಧಾರಣ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ.
ಕಡಬ ತಾಲೂಕಿನ ಸವಣೂರು, ಚಾರ್ವಾಕದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ ಎಂದು ತಿಳಿದು ಬಂದಿದೆ. ಪುತ್ತೂರು ನಗರದಲ್ಲಿ ಸಾಧಾರಣ ಮಳೆಯಾದರೆ ಇನ್ನಿತರ ಕೆಲವು ಕಡೆ ಉತ್ತಮ ಮಳೆಯಾಗಿದೆ. ಇದರಿಂದ ಈ ಪರಿಸರದಲ್ಲಿ ತಣ್ಣಗಿನ ವಾತವರಣ ಕಂಡು ಬಂದಿದೆ. ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಎರಡು ದಿನ ದ.ಕ.ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.