ಸೋನಿಯಾ ಗಾಂಧಿ ಭೇಟಿಯ ವರದಿ ಬಗ್ಗೆ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಪ್ರತಿಕ್ರಿಯಿಸಿದ್ದು ಹೀಗೆ…
Photo: PTI
ಚಂಡೀಗಢ: ಬಿಜೆಪಿಯ ಹಿರಿಯ ನಾಯಕ ಹಾಗೂ ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿ ಆಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಶನಿವಾರ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿರುವುದನ್ನು ನಿರಾಕರಿಸಿದ್ದಾರೆ ಹಾಗೂ ಇದು "ಆಧಾರವಿಲ್ಲದ ವದಂತಿಗಳು" ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿ "ಆಧಾರರಹಿತ" ಹಾಗೂ ಅದರಲ್ಲಿ "ಸತ್ಯದ ಒಂದು ತುಣುಕು ಕೂಡ ಇಲ್ಲ’’ ಎಂದು ಸಿಂಗ್ ಹೇಳಿದರು.
ನಾನು ಭಾರತೀಯ ಜನತಾ ಪಕ್ಷ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬದ್ಧನಾಗಿದ್ದೇನೆ ಎಂದು ಅವರು ಪ್ರತಿಪಾದಿಸಿದರು.
"ನಾನು ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿದ್ದೇನೆ ಹಾಗೂ ಯಾವಾಗಲೂ ಬಿಜೆಪಿಗೆ ಬದ್ಧನಾಗಿರುತ್ತೇನೆ. ಅಂತಹ ಹಂತದಲ್ಲಿ ನೀವು ಹಿಂತಿರುಗಿ ನೋಡಬೇಡಿ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಮರಳಿ ಪಡೆಯದೇ ಇರುವುದು ನನ್ನ ಜೀವನದ ತತ್ವವಾಗಿದೆ’’ " ಎಂದು ಅವರು PRO ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಅಮರಿಂದರ್ ಸಿಂಗ್ ಒಂದು ವರ್ಷದ ಹಿಂದೆ ಕಾಂಗ್ರೆಸ್ ತೊರೆದು ಪಂಜಾಬ್ ಲೋಕ ಕಾಂಗ್ರೆಸ್ (PLC) ಎಂಬ ತಮ್ಮದೇ ಪಕ್ಷವನ್ನು ಸ್ಥಾಪಿಸಿದ್ದರು, ಅದು ನಂತರ ಬಿಜೆಪಿಯೊಂದಿಗೆ ವಿಲೀನಗೊಂಡಿತು.
ಸಿಂಗ್ ಅವರ ಪಕ್ಷವು 2022 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿತು ಆದರೆ ರಾಜ್ಯದಲ್ಲಿ ಯಾವುದೇ ಸ್ಥಾನವನ್ನು ಪಡೆಯಲು ವಿಫಲವಾಯಿತು.