Sakleshpura | 9 ರೂ. 34 ಪೈಸೆ ಸಾಲ ಕಟ್ಟುವಂತೆ ಬ್ಯಾಂಕ್ನಿಂದ ಕರೆ; ಹತ್ತು ರೂ. ಕಟ್ಟಿ 66 ಪೈಸೆ ವಾಪಸ್ ಕೊಡಿ ಎಂದು ಗ್ರಾಹಕ ಪಟ್ಟು
ಸಕಲೇಶಪುರ : ಪದೇ ಪದೇ 9 ರೂ. 34 ಪೈಸೆ ಸಾಲ ಕಟ್ಟುವಂತೆ ಬ್ಯಾಂಕ್ನಿಂದ ಕರೆ ಮಾಡಿದ್ದ ಹಿನ್ನಲೆಯಲ್ಲಿ ಹತ್ತು ರೂ. ಕಟ್ಟಿ 66 ಪೈಸೆ ವಾಪಸ್ ಕೊಡಿ ಎಂದು ಗ್ರಾಹಕ ಪಟ್ಟು ಹಿಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಕಾಫಿ ಬೆಳೆಗಾರ ಚೊಕ್ಕಣ್ಣಗೌಡ ಎಂಬುವವರು ಕೆಲವು ವರ್ಷಗಳ ಹಿಂದೆ ಕೆನರಾ ಬ್ಯಾಂಕ್ನಿಂದ 50 ಸಾವಿರ ರೂ. ಸಾಲ ಪಡೆದು ಸಂಪೂರ್ಣ ಹಣ ಬಡ್ಡಿ ಸಮೇತ ಕಟ್ಟಿದ್ದರು. ಕೆಲವು ದಿನಗಳಿಂದ ಏಕಾಏಕಿ ಕರೆ ಮಾಡಿ 9 ರೂ. 34 ಪೈಸೆ ಸಾಲ ಕ್ಲಿಯರ್ ಮಾಡಲು ಬ್ಯಾಂಕ್ ಸಿಬ್ಬಂದಿ ಸೂಚಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಕಲೇಶಪುರ ಪಟ್ಟಣದ ಬ್ಯಾಂಕ್ನ ಶಾಖೆಗೆ ಬಂದು 10 ರೂ. ಕೊಟ್ಟು ಸಾಲ ಕ್ಲಿಯರ್ ಮಾಡಿದ ಬೆಳೆಗಾರ ಚೊಕ್ಕಣ್ಣಗೌಡ, ʼರೆಸಿಪ್ಟ್ನಲ್ಲಿ 9 ರೂ. 34 ಪೈಸೆ ಉಲ್ಲೇಖಿಸಿದ್ದೀರಿ, ಉಳಿದ 66 ಪೈಸೆ ವಾಪಾಸ್ ಕೊಡಿʼ ಎಂದು ಪಟ್ಟು ಹಿಡಿದಿದ್ದಾರೆ.
ʼಸಾವಿರಾರು ಕೋಟಿ ಸಾಲ ಮಾಡಿ ಊರು ಬಿಟ್ಟವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಸಾಲ ಮಾಡಿ ವಾಪಸ್ ಕಟ್ಟುವ ಬಡ ರೈತರಿಗೆ ತೊಂದರೆ ಕೊಡುತ್ತಿದ್ದಾರೆʼ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʼಬ್ಯಾಂಕ್ ಸಿಬ್ಬಂದಿ ಪ್ರಶ್ನಿಸಿದರೆ ಸಾಲ ವಾಪಸ್ ಕೇಳಿ ನಾವು ಕರೆ ಮಾಡಿಲ್ಲ. ಇದು ಕಂಪ್ಯೂಟರೈಸ್ಡ್ ಟೆಲಿ ಕಾಲ್ನಿಂದ ಆಗಿದೆ ಎಂದು ಸಬೂಬು ಹೇಳಿ ಕಳುಹಿಸಿದ್ದಾರೆʼ ಎಂದು ಬ್ಯಾಂಕ್ ನಡೆಗೆ ಬೆಳೆಗಾರ ಚೊಕ್ಕಣ್ಣಗೌಡ ಅಸಮಾಧಾನ ವ್ಯಕ್ತಪಡಿಸಿದರು.