ಕಲಬುರಗಿ ಸುಣ್ಣದ ಕಲ್ಲು ಗಣಿಗಾರಿಕೆ : 850.21 ಕೋಟಿ ರೂ. ದಂಡ ಪಾವತಿ ಬಾಕಿ ಉಳಿಸಿಕೊಂಡ ಎಸಿಸಿ ಸಿಮೆಂಟ್ಸ್
ಬೆಂಗಳೂರು : ಕಲಬುರಗಿಯ ವಾಡಿ ಪ್ರದೇಶದಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಎಸಿಸಿ ಸಿಮೆಂಟ್ಸ್ ಲಿಮಿಟೆಡ್ ಸರಕಾರಕ್ಕೆ 850.21 ಕೋಟಿ ರೂ. ದಂಡ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರೂ ಸಹ ಹೊಸದಾಗಿ ಗಣಿ ಹರಾಜಿನಲ್ಲಿ ಮತ್ತೊಂದು ಗಣಿ ಪ್ರದೇಶವನ್ನು ಪಡೆದುಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಹಾಗೆಯೇ 850.21 ಕೋಟಿ ರೂ.ಯಷ್ಟು ಬಾಕಿ ಮೊತ್ತವನ್ನು ಉಳಿಸಿಕೊಂಡಿದ್ದರೂ ಸಹ ಎಂಡಿಪಿಎ ಕಾಯ್ದೆಯಂತೆ ಗಣಿ ಗುತ್ತಿಗೆ ಕರಾರನ್ನು ಅನುಷ್ಠಾನ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸರಕಾರದ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವವನ್ನು ತಿರಸ್ಕರಿಸಬೇಕಿದ್ದ ಸರಕಾರವು, ಕಂಪೆನಿ ಪರ ವಕಾಲತ್ತು ವಹಿಸಿದೆ.
ಈ ಕಂಪೆನಿಯು 2021ರಲ್ಲೇ ಹರಾಜಿನಲ್ಲಿ ಯಶಸ್ವಿಯಾಗಿತ್ತು. 2021ರ ಜನವರಿ 4ರಂದೇ ಲೆಟರ್ ಆಫ್ ಇಂಟೆಂಟನ್ನು 5 ವರ್ಷಗಳ ಅವಧಿಗೆ ನೀಡಲಾಗಿತ್ತು. ಇದೀಗ ಇದರ ಅವಧಿಯು 2026ರ ಜನವರಿ 3ರವರೆಗೆ ಚಾಲ್ತಿಯಲ್ಲಿದೆ. ಹೀಗಾಗಿ ಗಣಿ ಗುತ್ತಿಗೆ ಕರಾರನ್ನು ಅನುಷ್ಠಾನಗೊಳಿಸದಿದ್ದಲ್ಲಿ ಹರಾಜು ಪ್ರಕ್ರಿಯೆಯು ರದ್ದಾಗಲಿದೆ. ಈ ಕಾರಣವನ್ನು ಮುಂದಿಟ್ಟುಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು, ಕಂಪೆನಿಗೆ ಮತ್ತಷ್ಟು ಷರತ್ತುಗಳನ್ನು ಒಳಪಡಿಸಿ ಗಣಿ ಗುತ್ತಿಗೆ ಕರಾರನ್ನು ಮಾಡಿಕೊಡಲು ಮುಂದಾಗಿದೆ.
ರಾಜಧನ ಬಾಕಿ ಮತ್ತು ವಿಧಿಸಿರುವ ದಂಡದ ಮೊತ್ತ ಪಾವತಿಗೆ ಸರಕಾರವು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿರುವ ಎಸಿಸಿ ಲಿಮಿಟೆಡ್, ಹೈಕೋರ್ಟ್ನಲ್ಲಿ 2 ರಿಟ್ ಅರ್ಜಿಗಳನ್ನು ಸಲ್ಲಿಸಿದೆ. ಮತ್ತೊಂದು ಅರ್ಜಿಯನ್ನು ಸರಕಾರವೇ ಹೈಕೋರ್ಟ್ನಲ್ಲಿ ಸಲ್ಲಿಸಿದೆ. ಈ ಮೂರು ರಿಟ್ ಅರ್ಜಿಗಳು 2026ರ ಫೆ.10ರಂದು ವಿಚಾರಣೆಗೆ ನಿಗದಿಯಾಗಿದೆ. ಹೀಗಿದ್ದರೂ ಸಹ ಉಚ್ಚ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಪ್ರಕರಣಗಳ ಆದೇಶವನ್ನು ಪಾಲಿಸುವ ಷರತ್ತಿಗೆ ಒಳಪಟ್ಟು ಕಂಪೆನಿಯಿಂದ ಪ್ರಮಾಣ ಪತ್ರ ಪಡೆಯಲು ಸರಕಾರವು ಮುಂದಾಗಿದೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘the-file.in’ಗೆ ಖಚಿತಪಡಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ಸಂಬಂಧ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಕುರಿತು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಅಧಿಕಾರಿಗಳೊಂದಿಗೆ ಹಲವು ಸುತ್ತಿನ (ಕಡತ ಸಂಖ್ಯೆ; ಸಿಐ 14/ಸಿಎಂಸಿ/2024) ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಈ ಪ್ರಕರಣವು ಅತೀ ಸೂಕ್ಷ್ಮ ಮತ್ತು ಪ್ರಮುಖ ವಿಷಯವಾಗಿದೆ. ಅಲ್ಲದೇ ಈ ಪ್ರಕರಣವು ಆರ್ಥಿಕ ಅಂಶಗಳನ್ನೂ ಒಳಗೊಂಡಿದೆ. ಹೀಗಿದ್ದರೂ ಸಹ ಈ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರವು ಅತ್ಯಾಸಕ್ತಿ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಗಣಿಗಾರಿಕೆ ಚಟುವಟಿಕೆಗಳಲ್ಲಿ ವಿವಿಧ ರೀತಿಯ ಉಲ್ಲಂಘನೆ ನಡೆಸಿರುವ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಎಸಿಸಿ ಲಿಮಿಟೆಡ್ ವಿರುದ್ಧ ಸರಕಾರವು 482.69 ಕೋಟಿಯಷ್ಟು ದಂಡ ವಿಧಿಸಿತ್ತು. ಈ ಕುರಿತು ಎಸಿಸಿ ಲಿಮಿಟೆಡ್, ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ (ಸಂಖ್ಯೆ; ಡಬ್ಲ್ಯೂ ಪಿ 18655/2025) ಸಲ್ಲಿಸಿತ್ತು.
ಅಲ್ಲದೇ ರಾಜಧನ ರೂಪದಲ್ಲಿ 492.51 ಕೋಟಿ ರೂ. ಪಾವತಿಸಬೇಕಿತ್ತು. ಒಟ್ಟಾರೆ ಸರಕಾರಕ್ಕೆ 850.21 ಕೋಟಿ ರೂ.ಯಷ್ಟು ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.
ಈ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ (ಗಣಿ ಗುತ್ತಿಗೆ ಸಂಖ್ಯೆ 2641) ಸರಕಾರದ ಹಂತದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು 2023ರ ಮಾರ್ಚ್ 31ರಂದು ಸರಕಾರಕ್ಕೆ ವರದಿ ನೀಡಿತ್ತು. ಇದರ ಪ್ರಕಾರ ಎಸಿಸಿ ಲಿಮಿಟೆಡ್, 492.51 ಕೋಟಿ ರೂ. ಮತ್ತು ಉಚ್ಛ ನ್ಯಾಯಾಲಯವು 2024ರ ಅಕ್ಟೋಬರ್ 29ರಂತೆ ಎಸಿಸಿ ಲಿಮಿಟೆಡ್ ರಾಜಧನ ರೂಪದಲ್ಲಿ 125.00 ಕೋಟಿ ರೂ. ಪಾವತಿಸಿದೆ. ಸರಕಾರಕ್ಕೆ ಇನ್ನೂ 367.51 ಕೋಟಿ ರು ರಾಜಧನ ಪಾವತಿಸಲು ಬಾಕಿ ಇದೆ.
ಹಾಗೆಯೇ ಪ್ರಶ್ನಿತ ಈ ಕಂಪೆನಿಯು ರಾಜಧನ ಮೊತ್ತದಲ್ಲಿ ಇನ್ನೂ 367.51 ಕೋಟಿ ರೂ. ಪಾವತಿಸುವುದಕ್ಕೆ ಬಾಕಿ ಉಳಿಸಿಕೊಂಡಿದೆ. ಇದನ್ನು ಎಸ್ಕ್ರೋ ಖಾತೆಗೆ ಪಾವತಿಸಿಲ್ಲ. ಬದಲಿಗೆ ಕೇಂದ್ರದ ಗಣಿ ಸಚಿವಾಲಯದಲ್ಲಿ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಪರಿಷ್ಕರಣೆ ಪ್ರಾಧಿಕಾರವು ಈ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು ರಾಜ್ಯ ಸರಕಾರಕ್ಕೆ ಹಿಂದಿರುಗಿಸಿತ್ತು.
ಕಲಬುರಗಿಯ ವಾಡಿ ಪ್ರದೇಶವು ಪ್ರಮುಖವಾಗಿ ಸುಣ್ಣದ ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಈ ಪ್ರದೇಶದಲ್ಲಿ ಎಸಿಸಿ ಸಿಮೆಂಟ್ ಕಂಪನಿ ಮತ್ತು ಗಣಿಗಳಿವೆ. ಇಲ್ಲಿ ಉತ್ಪಾದನೆಯಾಗುವ ಸುಣ್ಣದ ಕಲ್ಲು ಮತ್ತು ಶಹಬಾದಿ ಕಲ್ಲುಗಳು ರಾಜ್ಯಾದ್ಯಂತ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುತ್ತವೆ. ಆದರೆ, ಈ ಕಂಪನಿಯ ಗಣಿಗಾರಿಕೆಯಿಂದಾಗಿ ರೈತರ ಭೂಮಿ ಫಲವತ್ತತೆ ಕಣ್ಮರೆಯಾಗುತ್ತಿದೆ ಮತ್ತು ಪರಿಸರ ಸಮಸ್ಯೆಗಳು ಉಂಟಾಗುತ್ತಿದೆ. ಈ ಕಂಪೆನಿಯ ಗಣಿ ಚಟುವಟಿಕೆಗೆ ಸ್ಥಳೀಯ ವಿರೋಧವೂ ಇದೆ.