×
Ad

ಕಲಬುರಗಿ | ಎಂ.ಪುಟ್ಟಮಾದಯ್ಯ ಸೇರಿ ಐವರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ

Update: 2026-01-25 20:29 IST

ಕಲಬುರಗಿ: ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರಾದ, ಮೂಲತಃ ಮೈಸೂರು ಜಿಲ್ಲೆಯವರಾಗಿರುವ ಮತ್ತು ಸದ್ಯ ಕಲಬುರಗಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಡಿ.ಐ.ಜಿ. ಪುಟ್ಟಮಾದಯ್ಯ ಎಂ. ಸೇರಿದಂತೆ ಐವರಿಗೆ ಭಾರತದ 77ನೇ ಗಣರಾಜ್ಯೋತ್ಸವದ ಅಂಗವಾಗಿ 2026ನೇ ಸಾಲಿನ ಪೊಲೀಸ್ ಉತ್ಕೃಷ್ಟ ಸೇವಾ ಪದಕವನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಅಸಾಧಾರಣ ಧೈರ್ಯ, ವಿಶಿಷ್ಟ ಹಾಗೂ ನಿಷ್ಠಾವಂತ ಸೇವೆ, ದೀರ್ಘಕಾಲದ ಶ್ರೇಷ್ಠ ಕಾರ್ಯನಿರ್ವಹಣೆ ಹಾಗೂ ಸಾರ್ವಜನಿಕ ಸೇವೆಗೆ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಪುಟ್ಟಮಾದಯ್ಯ ಎಂ ಅವರಿಗೆ ಈ ರಾಷ್ಟ್ರಪತಿ ಪೊಲೀಸ್ ಪದಕ ಪ್ರದಾನ ಮಾಡಲಾಗಿದೆ. ಈ ಪ್ರಶಸ್ತಿ ರಾಷ್ಟ್ರಪತಿಯವರಿಂದ ನೀಡಲಾಗುವ ಪೊಲೀಸ್ ಸೇವೆಯ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ.

ಪುಟ್ಟಮಾದಯ್ಯ ಎಂ. ಅವರು ಈ ಹಿಂದೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಯಾಗಿ ಸೇವೆ ಸಲ್ಲಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ನಿಯಂತ್ರಣದಲ್ಲಿ ಹಾಗೂ ಸಾರ್ವಜನಿಕ ಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಸೇವಾ ಅವಧಿಯಲ್ಲಿ ಹಲವು ಸವಾಲಿನ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಕಾರ್ಯಕ್ಷಮತೆ, ಮಾನವೀಯ ನಿಲುವು ಮತ್ತು ಜನಪರ ಸೇವೆಯಿಂದ ಗುರುತಿಸಿಕೊಂಡಿರುವ ಅವರು, ಪ್ರಸ್ತುತ ಡಿ.ಐ.ಜಿ. ಹುದ್ದೆಯಲ್ಲಿ ಕಲಬುರಗಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಹೊಸ ತಲೆಮಾರಿನ ಪೊಲೀಸ್ ಅಧಿಕಾರಿಗಳಿಗೆ ಶಿಸ್ತು, ಸೇವಾಭಾವನೆ ಹಾಗೂ ವೃತ್ತಿಪರ ನೈಪುಣ್ಯ ಬೆಳೆಸುವಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.

ರಾಷ್ಟ್ರಪತಿ ಪದಕ ಘೋಷಣೆಯ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯರು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು, ಸಿಬ್ಬಂದಿ, ಕುಟುಂಬದವರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಇದು ತಮ್ಮ ಮುಂದಿನ ಸೇವೆಗೆ ಮತ್ತಷ್ಟು ಪ್ರೇರಣೆಯಾಗಿದೆ ಎಂದು ಡಿ.ಐ.ಜಿ. ಪುಟ್ಟಮಾದಯ್ಯ ಎಂ ಸಂತಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News