ಕಲಬುರಗಿಯಲ್ಲಿ ಫೆ.21ರಿಂದ 28ರವರೆಗೆ ರಾಷ್ಟ್ರೀಯ ನಾಟಕೋತ್ಸವ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ,ಜ.25: ಕಲಬುರಗಿಯನ್ನು ರಾಜ್ಯದ ಸೃಜನಶೀಲ ನಗರವನ್ನಾಗಿ ರೂಪಿಸುವ ಗುರಿಯೊಂದಿಗೆ ಕಲಬುರಗಿಯಲ್ಲಿ ಮೊದಲ ಬಾರಿಗೆ ಜಿಲ್ಲಾಡಳಿತ ಮತ್ತು ಬೆಂಗಳೂರಿನ ರಂಗಶಂಕರ ಸಹಯೋಗದಲ್ಲಿ ಫೆಬ್ರವರಿ 21ರಿಂದ 28ರವರೆಗೆ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಕಲಬುರಗಿಯ ಸಮಸ್ತ ಕಲಾಭಿಮಾನಿಗಳು ಈ ನಾಟಕೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ನಾಟಕೋತ್ಸವ-26ರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಬೆಂಗಳೂರಿನ ಪ್ರಸಿದ್ಧ ರಂಗಶಂಕರ ಸಹಭಾಗಿತ್ವದಲ್ಲಿ ಮುಂದಿನ ಐದು ವರ್ಷಗಳ ಕಾಲ ನಿರಂತರ ನಾಟಕೋತ್ಸವ ಆಯೋಜಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ನಾಟಕೋತ್ಸವದಲ್ಲಿ ನಗರದ ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಕನ್ನಡದ ಪ್ರಸಿದ್ಧ ನಾಟಕಗಳು ಸೇರಿದಂತೆ ವಿವಿಧ ರಾಜ್ಯಗಳ ಬೇರೆ ಭಾಷೆಯ ನಾಟಕಗಳನ್ನು, ಕಲಬುರಗಿ ರಂಗಾಯಣದಲ್ಲಿ ವಿಶೇಷವಾಗಿ ಮಕ್ಕಳಿಗಾಗಿ ನಾಟಕಗಳು ಮತ್ತು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ರಂಗಭೂಮಿ ಕುರಿತಂತೆ ಹೆಸರಾಂತ ರಂಗಕರ್ಮಿಗಳೊಂದಿಗೆ ಪ್ರತಿದಿನ ವಿವಿಧ ವಿಷಯಗಳ ಕುರಿತು ಸಂವಾದಗಳನ್ನು ಸಹ ಹಮ್ಮಿಕೊಳ್ಳಲಾಗಿದೆ.
ಕಲಬುರಗಿಯನ್ನು ಕರ್ನಾಟಕದ ಒಂದು ಕ್ರಿಯಾಶೀಲ ಸಾಂಸ್ಕೃತಿಕ ಹೆಗ್ಗುರುತನ್ನಾಗಿ ರೂಪಿಸುವ ಆಶಯವನ್ನು ‘ಕಲಬುರಗಿ ನಾಟಕೋತ್ಸವ’ ಹೊಂದಿದೆ. ಇದು ಕೇವಲ ತನ್ನ ಐತಿಹಾಸಿಕ ಪರಂಪರೆಗೆ ಮಾತ್ರವಲ್ಲದೆ, ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜೀವಂತ ಕಲಾ ಕ್ಷೇತ್ರಕ್ಕೂ ಹೆಸರುವಾಸಿಯಾಗಬೇಕು ಎಂಬುದು ಈ ನಾಟಕೋತ್ಸವದ ಪರಿಕಲ್ಪನೆಯಾಗಿದೆ.
ಇಲ್ಲಿನ ಸಾಂಸ್ಕೃತಿಕ ಅನನ್ಯತೆಗೆ ರಾಷ್ಟ್ರೀಯ ಮಟ್ಟದ ಮಾನ್ಯತೆ ತಂದುಕೊಡುವ ಮೂಲಕ ಹಾಗೂ ರಂಗಭೂಮಿ, ಸಂಗೀತ ಮತ್ತು ಪೂರಕ ಕಲೆಗಳ ಮೂಲಕ ಪ್ರವಾಸೋದ್ಯಮದ ಆಕರ್ಷಣೆಗಳನ್ನು ವೈವಿಧ್ಯಗೊಳಿಸುವ ಮೂಲಕ, ಸಾಂಸ್ಕೃತಿಕ ಆಸಕ್ತರು ಭೇಟಿ ನೀಡಲೇಬೇಕಾದ ತಾಣವಾಗಿ ಕಲಬುರಗಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್ಸಿ ಜಗದೇವ ಗುತ್ತೇದಾರ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಡಿಸಿಎಫ್ ಸುಮಿತ್ ಪಾಟೀಲ್, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ, ಕುಡಾ ಅಧ್ಯಕ್ಷ ಮಝಹರ್ ಖಾನ್ ಆಲಂ ಸೇರಿದಂತೆ ಹಲವರು ಇದ್ದರು.
ನಾಟಕ ಪ್ರದರ್ಶನಗಳು :
ಎಸ್.ಎಮ್. ಪಂಡಿತ್ ರಂಗಮಂದಿರದಲ್ಲಿ ಪ್ರತಿದಿನ ಸಂಜೆ 7:00ಗಂಟೆಗೆ ದೇಶದ ವಿವಿಧ ಭಾಗಗಳ ಶ್ರೇಷ್ಠ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಫೆ.21ರಂದು ಸ್ಪಂದನ ಬೆಂಗಳೂರು ತಂಡದ ಬಿ.ಜಯಶ್ರೀ ನಿರ್ದೇಶನದ ‘ಕರಿಮಾಯಿ’, ಫೆ.22ರಂದು ಮುಂಬೈ ಅರಣ್ಯ ಥಿಯೇಟರ್ ತಂಡದ ಅಜಿತೇಶ್ ಗುಪ್ತಾ ನಿರ್ದೇಶನದ ‘ಜೋ ಡೂಬಾ ಸೋ ಪಾರ್’, ಫೆ.23ರಂದು ಕಲಾಗಂಗೋತ್ರಿ ಬೆಂಗಳೂರು ತಂಡದ ಬಿ.ವಿ.ರಾಜಾರಾಂ ನಿರ್ದೇಶನದ ‘ಮುಖ್ಯಮಂತ್ರಿ’, ಫೆ.24ರಂದು
ಡಿ ಫಾರ್ ಡ್ರಾಮಾ ತಂಡದ ಮುಂಬೈ ಸುಮೀತ್ ವ್ಯಾಸ್ ನಿರ್ದೇಶನದ ‘ಪುರಾನಾ ಚಾವಲ್’
ಫೆ.25ರಂದು ಸಂಚಯ ಬೆಂಗಳೂರು ತಂಡದ ಗಣೇಶ್ ಮಂದಾರ್ತಿ ಅವರ ‘ಕಾಮರೂಪಿಗಳು’ ಫೆ.26ರಂದು ಪಪೆಟ್ ಪ್ರದರ್ಶನ ನವದೆಹಲಿ ತಂಡದ ಅನುರೂಪ ರಾಯ್ ನಿರ್ದೇಶನದ ‘ಎಬೌಟ್ ರಾಮ್’, ಫೆ.27ರಂದು ರಂಗಾಯಣ, ಕಲಬುರಗಿ ತಂಡದ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ‘ಕಾಲಚಕ್ರ’, ಫೆ.28ರಂದು ಜಂಗಮ ಕಲೆಕ್ಟಿವ್ ತಂಡದ ಲಕ್ಷ್ಮಣ.ಕೆ.ಪಿ ನಿರ್ದೇಶನದ ‘ಬಾಬ್ ಮಾರ್ಲೆ ಪ್ರಮ್ ಕೋಡಿಹಳ್ಳಿ’ ನಾಟಕಗಳು ಪ್ರದರ್ಶನಗೊಳ್ಳಲಿದೆ.
ಮಕ್ಕಳಿಗಾಗಿ ನಾಟಕ ಪ್ರದರ್ಶನ: ಶಾಲಾ ಮಕ್ಕಳಿಗಾಗಿ ವಿಶೇಷ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು, ಕಲಬುರಗಿಯ ಕರ್ನಾಟಕ ರಂಗಾಯಣದಲ್ಲಿ ಬೆಳಿಗ್ಗೆ 11:00 ಗಂಟೆಯಿಂದ ನಡೆಯಲಿದೆ. ಫೆ.22 ಮತ್ತು 23ರಂದು ರಂಗ ಶಂಕರದ ‘ಸರ್ಕಲ್ ಆಫ್ ಲೈಫ್’, ಫೆ.24 ಮತ್ತು 25ರಂದು ಮುಂಬೈನ ರೆಡ್ ಎಂಟರ್ಟೈನ್ಮೆಂಟ್ನ ‘ಜಾಬ್ ಲೆಸ್ ಜಾಬ್’. ಫೆ.26 ಮತ್ತು 27ರಂದು ರಂಗ ಶಂಕರದ ‘ಚಿಪ್ಪಿ, ದಿ ಚಿಕ್ಕಲಿ’. ನಾಟಕಗಳ ಪ್ರದರ್ಶನ ನಡೆಯಲಿದೆ.
ನಾಟಕ ಸಂವಾದಗಳು: ಜಿಲ್ಲಾ ಕಸಾಪ ಸಭಾಂಗಣದಲ್ಲಿ ಪ್ರತಿದಿನ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00ರವರೆಗೆ ನಾಟಕ ಸಂವಾದಗಳು ನಡೆಯಲಿದೆ.
ಫೆ.22ರಂದು ಬಿ. ಜಯಶ್ರೀಯವರಿಂದ ಕರ್ನಾಟಕದ ಕಂಪನಿ ನಾಟಕಗಳು, ಫೆ. 23ರಂದು ಎಚ್. ಕೆ. ಶ್ವೇತಾರಾಣಿಯವರಿಂದ ರಂಗಾಭಿನಯದ ಸೂಕ್ಷ್ಮತೆಗಳು, ಫೆ. 24ರಂದು ಕೃಷ್ಣಮೂರ್ತಿ ಹನೂರುರವರಿಂದ ನಾಟಕ ಮತ್ತು ಜಾನಪದ ಕಲೆಗಳು, ಫೆ.25ರಂದು ನಟರಾಜ್ ಹೊನ್ನವಳ್ಳಿರವರಿಂದ ನಿರ್ದೇಶನದ ಟಿಪ್ಪಣಿಗಳು, ಫೆ. 26ರಂದು ಜೆ. ಶ್ರೀನಿವಾಸಮೂರ್ತಿರವರಿಂದ ಭಾರತದ ಅಭಿಜಾತ ರಂಗಭೂಮಿ, ಫೆ. 27ರಂದು ಲಕ್ಷ್ಮಣ ಕೆ.ಪಿ.ಯವರಿಂದ ರಂಗ ಪಠ್ಯವನ್ನು ತಯಾರಿಸಿಕೊಳ್ಳುವುದು ಎಂಬ ವಿಷಯಗಳ ಬಗ್ಗೆ ನಾಟಕ ಸಂವಾದಗಳು ನಡೆಯಲಿದೆ.