ಬೀದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯ ಲಾಭ ಪಡೆದುಕೊಳ್ಳಿ: ರಾಜಕುಮಾರ
ಶಹಾಬಾದ: ನಗರದ ಬೀದಿ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ಸ್ವನಿಧಿ ಯೋಜನೆಯ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿ ರಾಜಕುಮಾರ ಗುತ್ತೆದಾರ ಹೇಳಿದರು.
ಅವರು ಶನಿವಾರ ನಗರಸಭೆಯ ಸಭಾಂಗಣದಲ್ಲಿ ಪಿಎಂ ಸ್ವನಿಧಿ ಯೋಜನೆಯ ಕುರಿತು ಬೀದಿ ವ್ಯಾಪಾರಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಬೀದಿ ಬದಿ ವ್ಯಾಪಾರಿಗಳಿಗಾಗಿ ‘ಪಿಎಂ ಸ್ವನಿಧಿ’ ಎಂಬ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಇದು ಬಡ್ಡಿರಹಿತ ಸಾಲ ಸೌಲಭ್ಯವನ್ನು ಹೊಂದಿದೆ. ಈ ಯೋಜನೆಯ ಮೂಲಕ ಶ್ರೀಮಂತರಷ್ಟೇ ಅಲ್ಲ, ಬಡವರೂ ಸಹ ಕ್ರೆಡಿಟ್ ಕಾರ್ಡ್ ಬಳಸಿ ತಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಪರಿಷ್ಕೃತ ಯೋಜನೆಯಂತೆ, ಮೊದಲ ಕಂತಿನಲ್ಲಿ ₹15,000, ಎರಡನೇ ಕಂತಿನಲ್ಲಿ ₹25,000 ಹಾಗೂ ಮೂರನೇ ಕಂತಿನಲ್ಲಿ ₹50,000 ವರೆಗೆ ಸಾಲವನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ನಾಗತಾರಕೇಶ್ವರ, ನಗರಸಭೆಯ ವ್ಯವಸ್ಥಾಪಕರಾದ ಶರಣಗೌಡ ಪಾಟೀಲ ಹಾಗೂ ಸಮುದಾಯ ಸಂಘಟನಾ ಅಧಿಕಾರಿ ರಘುನಾಥ ನರಸಾಳೆ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಶಂಕರ, ಶಾಂತಪ್ಪ ಹಡಪದ, ಸಿಆರ್ಪಿಗಳಾದ ಅಂಬಿಕಾ ರಾಯಪ್ಪ, ವಿಠ್ಠಲ ಜಂಬಗಿ ಸೇರಿದಂತೆ ಅನೇಕ ಬೀದಿ ವ್ಯಾಪಾರಿಗಳು ಹಾಜರಿದ್ದರು.