ಕಲಬುರಗಿ | ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ : ಸೇತುವೆ ಕೆಳಗೆ ಜೋತು ಬಿದ್ದ ಇಂಜಿನ್, ಚಾಲಕನಿಗೆ ಗಂಭೀರ ಗಾಯ
ಅಫಜಲಪುರ : ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತಾಲೂಕಿನ ಘತ್ತರಗಾ ಗ್ರಾಮದ ಭೀಮಾನದಿಯ ಬ್ರಿಜ್ ಕಂ ಬ್ಯಾರೇಜ್ ಮೇಲೆ ಮಂಗಳವಾರ ಸಂಜೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಟ್ರಾಕ್ಟರ್ನ ಇಂಜಿನ್ ಸೇತುವೆಯ ಕೆಳಭಾಗಕ್ಕೆ ಜೋತು ಬಿದ್ದಿದ್ದು, ಚಾಲಕನ ಕೈ ಮತ್ತು ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳು ಚಾಲಕನನ್ನು ತಕ್ಷಣವೇ ಸ್ಥಳೀಯರ ಸಹಾಯದೊಂದಿಗೆ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಟ್ರಾಕ್ಟರ್ ಜೇವರ್ಗಿಯ ಬಗಲೂರು ಮಾರ್ಗವಾಗಿ ಅಫಜಲಪುರ ತಾಲೂಕಿನ ಹವಳಗಾ ಗ್ರಾಮದ ರೇಣುಕಾ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸಿದ ಸಮಯದಲ್ಲಿ ಸೇತುವೆಯ ಮೇಲೆ ಹಾಗೂ ಕೆಳಭಾಗದಲ್ಲಿ ಜನರ ಸಂಚಾರವಿಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಒಂದು ವೇಳೆ ಜನಸಂದಣಿ ಇದ್ದಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಘಟನೆ ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.