×
Ad

ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯ ವೇತನ ದುರ್ಬಳಕೆ ಆರೋಪ; ಕಾಂಗ್ರೆಸ್ ಮುಖಂಡನ 5.87 ಕೋಟಿ ರೂ. ಆಸ್ತಿ ಜಪ್ತಿ ಮಾಡಿಕೊಂಡ ಈಡಿ

Update: 2025-07-23 18:52 IST

ಕಲಬುರಗಿ: ಹೈದರಾಬಾದ್ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ (ಎಂಆರ್‌ಎಂಸಿ) ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯ ವೇತನವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಸಂಸ್ಥೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಭೀಮಾಶಂಕರ ಬಿಲಗುಂದಿ ಅವರ 5.87 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯವು (ಈಡಿ) ಪಿಎಂಎಲ್‌ಎ ನಿಬಂಧನೆಗಳ ಅಡಿಯಲ್ಲಿ ಜಪ್ತಿ ಮಾಡಿಕೊಂಡಿದೆ.

ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯ ವೇತನ ದುರ್ಬಳಕೆ ಆರೋಪದಡಿ ನಗರದ 'ಸೆನ್' ಠಾಣೆಯಲ್ಲಿ ಭೀಮಾಶಂಕರ ಬಿಲಗುಂದಿ, ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಂ.ಪಾಟೀಲ, ಕಾಲೇಜಿನ ಅಕೌಂಟೆಂಟ್ ಸುಭಾಷ ಜಗನ್ನಾಥ ಮತ್ತು ಕೆನರಾ ಬ್ಯಾಂಕ್ ಎಂಆರ್‌ಎಂಸಿ ಶಾಖೆಯ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 2025ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದಾಳಿ ಮಾಡಿದ್ದ ಈಡಿ ಅಧಿಕಾರಿಗಳು, ಹಲವೆಡೆ ಶೋಧಕಾರ್ಯ ನಡೆಸಿದ್ದರು. ಆರೋಪಿಗಳ ವಿಚಾರಣೆ ಸಹ ಮಾಡಿದ್ದರು. ಕರಣ ದಾಖಲಾದ ನಾಲ್ವರು ಆರೋಪಿಗಳು 2018ರಿಂದ 2024ರವರೆಗೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಖಾಲಿ ಚೆಕ್‌ಗಳಿಗೆ ಸಹಿ ಪಡೆದುಕೊಂಡು, ವಿದ್ಯಾರ್ಥಿಗಳಿಗೆ ಸೇರಬೇಕಿದ್ದ 33.34 ಕೋಟಿ ರೂ. ಶಿಷ್ಯ ವೇತನ ಹಣವನ್ನು ತಾವೇ ಪಡೆದು ವಂಚಿಸಿದ್ದಾರೆ ಎಂದು ಈಡಿ ಹೇಳಿದೆ.

ಅದೇ ಅವಧಿಯಲ್ಲಿ ಭೀಮಾಶಂಕರ ಅವರು ತಮ್ಮ ಪುತ್ರರಾದ ರಾಜಕುಮಾರ ಬಿಲಗುಂದಿ ಹಾಗೂ ಸಂತೋಷ ಅವರ ಹೆಸರಿನಲ್ಲಿ ಎರಡು ಸ್ಥಿರ ಆಸ್ತಿಗಳನ್ನು ಖರೀದಿಸಿದ್ದರು. ಶಾಂತಪ್ಪ ಪಾಟೀಲ ಎಂಬ ಮಧ್ಯವರ್ತಿಯ ಮೂಲಕ ಮಧುಸೂದನ್ ಮಾಲು ಅವರಿಗೆ ಯಾವುದೇ ಕಾನೂನುಬದ್ಧ ಆದಾಯದ ಮೂಲ ಇಲ್ಲದೆ 5.87 ಕೋಟಿ ರೂ. ನಗದು ಪಾವತಿ ಮಾಡಿದ್ದರು. ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಈಡಿ ತಿಳಿಸಿದೆ.

ಅವರ ಇಬ್ಬರು ಪುತ್ರರ ಹೆಸರಿನಲ್ಲಿನ ಎರಡು ಸ್ಥಿರ ಹಾಗೂ ಹಲವು ಚರ ಆಸ್ತಿಗಳನ್ನು ಈಡಿ ವಶಕ್ಕೆ ಪಡೆದಿದೆ ಎಂದು ಈಡಿ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News