ಕುಂಬಳೆ: ಮನೆ ಬಾಗಿಲು ಮುರಿದು ಕಳ್ಳತನ
Update: 2026-01-19 12:42 IST
ಕಾಸರಗೋಡು: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 29 ಪವನ್ ಚಿನ್ನಾಭರಣ, 25 ಸಾವಿರ ರೂ. ಮೌಲ್ಯದ ಬೆಳ್ಳಿ ಸಾಮಗ್ರಿಗಳು ಹಾಗೂ 5 ಸಾವಿರ ರೂ. ನಗದು ಕಳವುಗೈದ ಘಟನೆ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ರವಿವಾರ ನಡೆದಿದೆ.
ನ್ಯಾಯವಾದಿ ಚೈತ್ರ ಎಂಬವರ ಮನೆಯ ಹಿಂಭಾಗದ ಬಾಗಿಲು ಮುರಿದು ಕಳ್ಳತನ ನಡೆಸಲಾಗಿದೆ. ಕುಟುಂಬಸ್ಥರು ರವಿವಾರ ಸಂಜೆ ಕುಂಬಳೆಯ ದೇವಸ್ಥಾನಕ್ಕೆ ತೆರಳಿದ್ದು, ಸುಮಾರು ಒಂದೂವರೆ ಗಂಟೆ ಬಳಿಕ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸಂಜೆ 6.30 ರಿಂದ 8 ಗಂಟೆಯ ನಡುವಿನ ಅವಧಿಯಲ್ಲಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.