×
Ad

ಅರ್ಚಕರಿಗೂ ದೈವಪಾತ್ರಿಗಳಿಗೂ ವ್ಯತ್ಯಾಸವೇನು? : ನವೀನ್ ಸೂರಿಂಜೆ ಪ್ರಶ್ನೆ

Update: 2026-02-02 12:10 IST

ಕುಂಬಳೆ: ಸಂಸ್ಕೃತಿ ರಕ್ಷಣೆಗಾಗಿ ಜೀವತೇಯುವ ದೈವಪಾತ್ರಿ ಸಮುದಾಯಗಳ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿ ಅತ್ಯಂತ ಹೀನವಾಗಿದೆ. ರಾತ್ರಿ ದೈವ ಆವಾಹನೆ ಮಾಡಿಕೊಳ್ಳುವ ಪಾತ್ರಿ ಹಗಲಲ್ಲಿ ದಲಿತರಾಗಿರುತ್ತಾರೆ. ದೇವಸ್ಥಾನದ ಬ್ರಾಹ್ಮಣ ಅರ್ಚಕ ಜೀವಮಾನ ಪೂರ್ತಿ ಸಾಮಾಜಿಕ ಗೌರವವನ್ನು ಪಡೆಯುತ್ತಾರೆ. ಹಾಗಿದ್ದರೆ ಅರ್ಚಕರಿಗೂ ದೈವಪಾತ್ರಿಗೂ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ದೈವಪಾತ್ರಿ ಸಮುದಾಯ ಉತ್ತರ ಕಂಡುಕೊಳ್ಳಬೇಕಿದೆ ಎಂದು ಪತ್ರಕರ್ತ ನವೀನ್ ಸೂರಿಂಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಂಬಳೆ ಅರಿಕ್ಕಾಡಿ ಜುಮಾದಿ ದೈವಸ್ಥಾನದಲ್ಲಿ ಪಚ್ಲಿಂಪಾರೆ, ಉಪ್ಪಾರ, ಕಾಸರಗೋಡು, ಮಂಗಳೂರು ವ್ಯಾಪ್ತಿಯ ಬಾಕುಡ ಸಮುದಾಯದ ‘ಉಳ್ಳಾಲ್ತಿ ನಾಗಬೆರ್ಮೆರೆ ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿ ಮತ್ತು ಕಾರ್ನವರ ಒಕ್ಕೂಟ (ರಿ)’ ಇದರ ದ್ವಿತೀಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ನವೀನ್ ಸೂರಿಂಜೆ ಧಾರ್ಮಿಕ ಉಪನ್ಯಾಸ ನೀಡಿದರು.

“ಬಾಕುಡ ಸಮುದಾಯ ತುಳುನಾಡಿನ ಮೂಲನಿವಾಸಿ ಸಮುದಾಯವಾಗಿದೆ. ಕರಾವಳಿಯ ಎಲ್ಲಾ ನಾಗಬನಗಳಲ್ಲಿ ಬಾಕುಡರು ಧಾರ್ಮಿಕ ಕಾರ್ಯಗಳನ್ನು ಮಾಡಬೇಕಿತ್ತು. ಆದರೆ ಆ ವೃತ್ತಿ ಈಗ ಬ್ರಾಹ್ಮಣರ ಪಾಲಾಗಿದೆ. ಕೋಟ್ಯಾಂತರ ಆದಾಯ ಬರುವ ನಾಗಾರಾಧನೆಯನ್ನು ಬಾಕುಡರು ಬಿಟ್ಟುಕೊಟ್ಟಿದ್ದಾರೆ. ದಲಿತರು ಪಾತ್ರಿಗಳಾಗಿ ಇರಬೇಕಿದ್ದ ನಾಗಕೋಲ, ಸರ್ಪಕೋಲ ಎನ್ನುವುದು ಬ್ರಾಹ್ಮಣರ ನಾಗಮಂಡಲ, ನಾಗದರ್ಶನವಾಗಿ ಮಾರ್ಪಾಟಾಗಿದೆ. ನಾಗಮಂಡಲಗಳು ಇಂದು ಕೋಟ್ಯಾಂತರ ರೂಪಾಯಿ ವಹಿವಾಟಿನ ಧಾರ್ಮಿಕ ಪ್ರಕ್ರಿಯೆಯಾಗಿದ್ದು, ಅದರ ಸಂಪೂರ್ಣ ಲಾಭ ಬ್ರಾಹ್ಮಣರ ಪಾಲಾಗಿದೆ. ನಾಗಕೋಲ, ಸರ್ಪಕೋಲಗಳು ಬ್ರಾಹ್ಮಣರ ಪಾಲಾದಂತೆ ಮುಂದೊಂದು ದಿನ ದೈವದ ಕೋಲ/ನೇಮಗಳು ಬ್ರಾಹ್ಮಣರ ಪಾಲಾಗುವ ಅಪಾಯ ಇದೆ” ಎಂದು ನವೀನ್ ಸೂರಿಂಜೆ ಆತಂಕ ವ್ಯಕ್ತಪಡಿಸಿದರು.

“ದೈವಪಾತ್ರಿಗಳಿಗೂ ಅರ್ಚಕರಿಗೂ ವ್ಯತ್ಯಾಸ ಇಲ್ಲವೆಂದಾದರೆ, ಬ್ರಾಹ್ಮಣ ಸಮುದಾಯದ ಅರ್ಚಕತನ ಕಲಿಯುವ ವೇದ ವಿದ್ಯಾರ್ಥಿಗಳಿಗೆ, ಆಗಮ ವಿದ್ಯಾರ್ಥಿಗಳಿಗೆ, ಆಗಮಿಕರಿಗೆ ಮತ್ತು ಸಂಸ್ಕೃತ ವಿದ್ಯಾರ್ಥಿಗಳಿಗೆ ಆಚಾರ್ಯತ್ರಯ ವೇದ ಶಿಷ್ಯವೇತನ ಯೋಜನೆಯಲ್ಲಿ ಹಣ ನೀಡಿದಂತೆ ದೈವಪಾತ್ರಿ ವೃತ್ತಿಯನ್ನು ಆಯ್ಕೆ ಮಾಡುವವರಿಗೂ ಯೋಜನೆ ರೂಪಿಸಿ ಶಿಷ್ಯವೇತನ ನೀಡಬೇಕು. ಅರ್ಚಕರ ಮಕ್ಕಳು ಐಎಎಸ್, ಐಪಿಎಸ್, ಐಎಫ್‌ಎಸ್, ಐಆರ್‌ಎಸ್, ಕೆಎಎಸ್ ಇತ್ಯಾದಿ ಪರೀಕ್ಷೆಗಳ ಪ್ರಾಥಮಿಕ ಹಂತದಲ್ಲಿ ಉತ್ತೀರ್ಣರಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಗಾಗಿ ಉಚಿತ ತರಬೇತಿ ನೀಡುವ ಚಾಣಕ್ಯ ಆಡಳಿತ ತರಬೇತಿ ಯೋಜನೆ ಇದೆ. ಇದೇ ಸೌಲಭ್ಯವನ್ನು ದೈವಪಾತ್ರಿಗಳ ಮಕ್ಕಳಿಗೂ ವಿಸ್ತರಿಸಬೇಕು ಎಂದು ನಾವು ಆಗ್ರಹಿಸಬೇಕಿದೆ” ಎಂದರು.

ದೈವಪಾತ್ರಿಗಳ ಒಕ್ಕೂಟ ಬಾಕುಡ ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕು. ಸಮುದಾಯವು ಉದ್ಯೋಗ, ಶಿಕ್ಷಣ, ಜಮೀನುಗಳನ್ನು ಹಕ್ಕಿನಿಂದ ಪಡೆದುಕೊಳ್ಳಬೇಕು. ದೈವಪಾತ್ರಿ ವೃತ್ತಿಯು ಉತ್ತಮ ಆದಾಯ ಬರುವ ವೃತ್ತಿಯಾದರೂ ಸಾಮಾಜಿಕ–ರಾಜಕೀಯ ಗೌರವದ ಪ್ರಶ್ನೆಯನ್ನು ಅರ್ಥೈಸಿಕೊಳ್ಳಬೇಕಿದೆ. ಸಮುದಾಯದ ಸ್ವಾಭಿಮಾನದ ಬದುಕಿಗಾಗಿ ದೈವಪಾತ್ರಿಗಳ ಒಕ್ಕೂಟವು ಹೋರಾಟದ ಹಾದಿಯನ್ನೂ ಹಿಡಿಯಬೇಕಿದೆ. ದೈವಸ್ಥಾನ, ನಾಗಬನಗಳಿಗೆ ಕರಾವಳಿಯಲ್ಲಿ ಬೇಕಾದಷ್ಟು ಜಮೀನುಗಳಿವೆ. ದೈವಪಾತ್ರಿಗಳಿಗೆ, ನಾಗಕೋಲ ಮಾಡುವ ಬಾಕುಡರಿಗೆ ಜಮೀನುಗಳಿಲ್ಲ. ಹಾಗಾಗಿ ಜಮೀನಿನ ಪ್ರಶ್ನೆಯನ್ನು ದೈವಪಾತ್ರಿ ಸಮುದಾಯಗಳು ಆದ್ಯತೆಯ ಪ್ರಶ್ನೆಯನ್ನಾಗಿಸಬೇಕಿದೆ ಎಂದು ಸೂರಿಂಜೆ ಹೇಳಿದರು.

ದೈವಸ್ಥಾನದಲ್ಲಿ ಬ್ರಾಹ್ಮಣರ ಗಣಹೋಮ, ಶುದ್ಧೀಕರಣ ಕಾರ್ಯಗಳನ್ನು ಸಂಪೂರ್ಣ ನಿಲ್ಲಿಸಬೇಕು. ದೈವದ ಪಾತ್ರಿಯೇ ದೈವ ಆವಾಹನೆಯಾದ ಬಳಿಕ ಅಷ್ಟಮಂಗಲ ಪ್ರಶ್ನೆ ಇಡಲು ಸೂಚಿಸಬಾರದು. ಕೆಲ ದೈವಪಾತ್ರಿಗಳೇ ಸಮಸ್ಯೆ ಇತ್ಯರ್ಥಪಡಿಸಲು ಬ್ರಾಹ್ಮಣರನ್ನು ಭೇಟಿಯಾಗಲು ಸೂಚಿಸುತ್ತಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ದೈವದ ಅಸ್ತಿತ್ವಕ್ಕೂ ದೈವಪಾತ್ರಿಯ ವೃತ್ತಿಗೂ ಸಂಚಕಾರವಾಗಿದೆ ಎಂದು ನವೀನ್ ಸೂರಿಂಜೆ ಆತಂಕ ವ್ಯಕ್ತಪಡಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಬಲ್ಲಾರ್ ಧರ್ಮಚಾವಡಿಯ ದೈವಪಾತ್ರಿಯಾಗಿರುವ ಗಣೇಶ್ ಮಂಗಳೂರು ಮಾತನಾಡಿ, “ದೈವಸ್ಥಾನಗಳು ವೈದಿಕೀಕರಣಗೊಳ್ಳುವುದನ್ನು ನಾವು ತಡೆಯಬೇಕು. ಇಲ್ಲದೇ ಇದ್ದರೆ ನಾಗಮೂಲಸ್ಥಾನಗಳನ್ನು ಕಳೆದುಕೊಂಡಂತೆ ದೈವಸ್ಥಾನಗಳನ್ನೂ ನಾವು ಕಳೆದುಕೊಳ್ಳುತ್ತೇವೆ. ದೈವಪಾತ್ರಿ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ನಾವು ಒಕ್ಕೂಟ ರಚಿಸಿಕೊಂಡಿದ್ದು, ನಮ್ಮದೇ ಆದ ಜಮೀನು ಮತ್ತು ಸಭಾಭವನಗಳನ್ನು ನಾವು ಹೊಂದಬೇಕಿದೆ” ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಧಾರ್ಮಿಕ ಮುಂದಾಳು ಹರೀಶ್ ಮಾಡ, “ದೈವಾರಾಧನೆ ಎಂಬುದು ಶೂದ್ರ ಜನಪದ ಸಂಸ್ಕೃತಿಯಾಗಿದೆ. ಅನಗತ್ಯ ವೈದಿಕ ಸಂಸ್ಕೃತಿಯ ಅಳವಡಿಕೆಯಿಂದ ಗೊಂದಲಗಳು ಉಂಟಾಗುತ್ತಿವೆ. ಹಿಂದೂ ಸಮುದಾಯವು ತನ್ನ ಸಮಸ್ಯೆಗಳಿಗೆ ಮತ್ತೊಂದು ಧರ್ಮವನ್ನು ದೂರುವ ಬದಲು ತನ್ನ ಧರ್ಮದೊಳಗಿನ ಅಸಮಾನತೆ–ಅನ್ಯಾಯಗಳನ್ನು ನಿವಾರಿಸಿಕೊಳ್ಳಬೇಕಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಾವರ ಕೋಮರಾಯ ಚಾಮುಂಡಿ ದೈವದ ದೈವಪಾತ್ರಿ ಶಂಕರ ಅಡ್ಕ ವಹಿಸಿದ್ದರು. ಕೋಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಚಂಚಲಾಕ್ಷಿ, ಕಾಸರಗೋಡು ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷ ತುಳಸೀದಾಸ್ ಮಂಜೇಶ್ವರ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News