ಕೇರಳ: ಎಲ್ಡಿಎಫ್ ನೇತೃತ್ವದಲ್ಲಿ ಉತ್ತರ ವಲಯ ಅಭಿವೃದ್ಧಿ ಜಾಥಾ ನಾಳೆ ಆರಂಭ
ಕುಂಬಳೆಯಿಂದ ಜಾಥಾ ಪ್ರಾರಂಭ; ಫೆ.1ರಂದು ಸಿಎಂ ಪಿಣರಾಯಿ ವಿಜಯನ್ ಚಾಲನೆ
Update: 2026-01-31 10:20 IST
ಕಾಸರಗೋಡು, ಜ.31: ಎಲ್ಡಿಎಫ್ ರಾಜ್ಯ ಸಮಿತಿಯ ನೇತೃತ್ವದಲ್ಲಿ ಆಯೋಜಿಸಿರುವ ಉತ್ತರ ವಲಯ ಅಭಿವೃದ್ಧಿ ಮುನ್ನಡೆ ಜಾಥಾ ನಾಳೆ (ಫೆ.1) ಕುಂಬಳೆಯಿಂದ ಪ್ರಾರಂಭವಾಗಲಿದೆ.
ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮಾಸ್ಟರ್ ಅವರ ನೇತೃತ್ವದಲ್ಲಿ ನಡೆಯುವ ಈ ಜಾಥಾಗೆ ನಾಳೆ ಸಂಜೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಲಿದ್ದಾರೆ.
ಕೇರಳದಲ್ಲಿ ಎಡರಂಗ ಸರ್ಕಾರ ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳು ಹಾಗೂ ಸಾಧನೆಗಳನ್ನು ಜನರ ಮುಂದೆ ಇಡುವ ಉದ್ದೇಶದಿಂದ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಕುಂಬಳೆಯಿಂದ ಹೊರಡುವ ಜಾಥಾಗೆ ನಾಳೆ ಸಂಜೆ 4 ಗಂಟೆಗೆ ಕಾಸರಗೋಡು ತಾಲೂಕಿನ ನುಳ್ಳಿಪಾಡಿಯಲ್ಲಿ ಸ್ವಾಗತ ನೀಡಲಾಗುವುದು.
ಫೆ.2ರಂದು ಬೆಳಗ್ಗೆ ಚಟ್ಟಂಚಾಲ್ನಲ್ಲಿ, ನಂತರ ಕಾಂಞಂಗಾಡ್ ಹಾಗೂ ಕಾಲಿಕಡವ್ನಲ್ಲಿ ಜಾಥಾಗೆ ಸ್ವಾಗತ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.