ಏಕಸೌಮ್ಯ ಮಾರುಕಟ್ಟೆ ವ್ಯವಸ್ಥೆಗೆ ಕಡಿವಾಣ ಹಾಕಲು ವಿತ್ತ ಸಚಿವೆಗೆ ಜಿಲ್ಲಾ ಬಿಜೆಪಿ ನಿಯೋಗ ಮನವಿ
ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ರಷರ್ ಉದ್ಯಮವನ್ನು ಏಕಸೌಮ್ಯ ಮಾರುಕಟ್ಟೆ ಮಾಡಲು ಹೊರಟಿರುವ ಕ್ರಮಕ್ಕೆ ಕಡಿವಾಣ ಹಾಕಿಸುವಂತೆ ಒತ್ತಾಯಿಸಿ, ಜಿಲ್ಲಾ ಬಿಜೆಪಿ ನಿಯೋಗ ಬುಧವಾರ ಕೇಂದ್ರ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.
ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವರನ್ನು ಸ್ವಾಗತಿಸಿದ ಜಿಲ್ಲಾ ಬಿಜೆಪಿ ನಿಯೋಗ, ಬಳಿಕ ವಿತ್ತ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಾಗುತ್ತಿರುವ ಗ್ರಾಹಕ ವಿರೋಧಿ ನಡೆಯ ಕುರಿತು ಗಮನಕ್ಕೆ ತರಲಾಯಿತು.
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ತಮ್ಮದೇ ನೇತೃತ್ವದ ಪ್ರೇರಣಾ ಎನ್ನುವ ಏಜೆನ್ಸಿ ಸ್ಥಾಪಿಸಿ, ಕ್ರಷರ ಉದ್ಯಮವನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ. ಇನ್ನೂ ಮುಂದೆ ಸಾರ್ವಜನಿಕರು ಸೇರಿ ಎಲ್ಲರೂ ಜಲ್ಲಿಕಲ್ಲು ಸೇರಿ ಕ್ರಷರ್ ಉದ್ಯಮಕ್ಕೆ ಸಂಬಂಧಿಸಿದ 8 ವಸ್ತುಗಳನ್ನು ತಾವು ಸ್ಥಾಪಿಸಿರುವ ಪ್ರೇರಣಾ ಏಜೆನ್ಸಿ ಮೂಲಕವೇ ತೆಗೆದುಕೊಳ್ಳಬೇಕೆಂಬ ಅಲಿಖಿತ ನಿಯಮ ಹೇರಿದ್ದಾರೆ ಎಂದು ತಿಳಿಸಿದ್ದಾರೆ.
ಇದು, ಗ್ರಾಹಕ ಕಾನೂನುಗಳ ವಿರುದ್ಧ ಎಂಬುದು ಗೊತ್ತಿದ್ದರೂ, ಅಧಿಕಾರ ದುರ್ಬಳಕೆ ಮಾಡಿಕೊಂಡು ಕ್ರಷರ್ ಉದ್ಯಮ ಹಿಡಿತಕ್ಕೆ ತೆಗೆದುಕೊಂಡಿರುವ ಸಂಸದರಾದ ರಾಜಶೇಖರ ಹಿಟ್ನಾಳ್, ಜನ ಸಾಮಾನ್ಯರಿಗೆ ತೊಂದರೆಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರಿಂದ ಕೊಪ್ಪಳ ಜಿಲ್ಲೆಯ ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬಿರುತ್ತಿದೆ. ನಾಗರೀಕರು ಕ್ರಷರ್ ಮಾಲಕರ ಮುಖಾಂತರ ಜಲ್ಲಿಕಲ್ಲು ಖರೀದಿಸಿದರೇ 600 ರಿಂದ 700 ರೂ. ವರೆಗೆ ಬಿಳುತ್ತದೆ. ಆದರೆ ಈಗ ಪ್ರೇರಣಾ ಏಜೆನ್ಸಿ ಮೂಲಕ ಖರೀದಿಸಬೇಕಾಗಿರುವುದರಿಂದ 1400-1500 ರೂ. ವರೆಗೆ ಕೊಡಬೇಕಾಗಿದೆ. ಇದು, ಯಾವ ನ್ಯಾಯ...? ಕೂಡಲೇ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ಜರುಗಿಸುವಂತೆ ಸೂಚಿಸಲು ಬಿಜೆಪಿಯ ಎಲ್ಲಾ ನಾಯಕರು ಒಕ್ಕೂರಲಿನಿಂದ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಮನವಿ ಮಾಡಿದರು.
ಬಳಿಕ ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ್ ಗೆ ಮನವಿ ಸಲ್ಲಿಸಿದರು.
ಈ ವೇಳೆ ವಿಪ ಸದಸ್ಯೆ ಹೇಮಲತಾ ನಾಯಕ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ವೈದ್ಯ ಡಾ.ಬಸವರಾಜ ಕ್ಯಾವಟರ್, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸ್ಗೂರು, ಮುಖಂಡರಾದ ಗಣೇಶ ಹೊರತಟ್ನಾಳ್, ವೀರೇಶ ಸಜ್ಜನ ಸೇರಿದಂತೆ ಇತರರು ಇದ್ದರು.