ಕನಕಗಿರಿ | 5 ತಿಂಗಳ ಹೆಣ್ಣು ಚಿರತೆ ಸೆರೆ
ಕನಕಗಿರಿ: ಸಮೀಪದ ಹೊಲವೊಂದರ ಗಿಡದ ಮೇಲೆ ಕುಳಿತುಕೊಂಡಿದ್ದ ಅಂದಾಜು 5 ತಿಂಗಳ ಹೆಣ್ಣು ಚಿರತೆಯನ್ನು ಸೆರೆಹಿಡಿದ ಘಟನೆ ಭಾನುವಾರ ನಡೆದಿದೆ.
ಪಟ್ಟಣದ ಹೊರವಲಯದಲ್ಲಿರುವ ಭುವನೇಶಪ್ಪ ಅವರ ಹೊಲದ ಪರಿಸರದಲ್ಲಿರುವ ಗಿಡದ ಮೇಲೆ ಈ ಚಿರತೆಯನ್ನು ಅಲ್ಲಿನ ಯುವಕರು ನೋಡಿದ್ದಾರೆ. ಚಿರತೆ ಪ್ರತ್ಯಕ್ಷವಾಗಿದ್ದನ್ನು ಕಂಡ ಹೊಲದ ಮಾಲಕರು ಅರಣ್ಯಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಈ ಸಮಯದಲ್ಲಿ ನೂರಾರು ಜನ ಗಿಡದ ಕೆಳಗಡೆ ಜಮಾವಣೆಗೊಂಡಿದ್ದು, ಜನರ ಗುಂಪು ಕಂಡ ಚಿರತೆ ಕೆಳಗಡೆ ಇಳಿಯಲಿಲ್ಲ, ಕ್ರಮೇಣ ಜನರು ಚದುರಿದ್ದನ್ನು ನೋಡಿ ಕೆಳಗೆ ಬಂದ ಚಿರತೆಯನ್ನು ಸೆರೆ ಹಿಡಿಯಲಾಯಿತು ಎಂದು ಅರಣ್ಯ ಇಲಾಖೆಯ ಗಸ್ತ ವನಪಾಲಕ ಈರಪ್ಪ ಹಾದಿಮನಿ ತಿಳಿಸಿದರು.
ಚಿರತೆಯ ಕಾಲಿಗೆ ಗಾಯವಾಗಿದ್ದರಿಂದ ಓಡಾಡಲು ಸಾಧ್ಯ ವಾಗಲಿಲ್ಲ, ಪಶು ಸೆರೆ ಹಿಡಿಯುವ ಬಲೆಯಿಂದ ಚಿರತೆಯನ್ನು ಸೆರೆ ಹಿಡಿಯಲಾಯಿತು, ಚಿಕಿತ್ಸೆಗಾಗಿ ಗಂಗಾವತಿಗೆ ತೆಗೆದುಕೊಂಡು ಹೋಗಲಾಯಿತು ಎಂದು ಅವರು ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಶಿವರೆಡ್ಡಿ, ಮಂಜುನಾಥ, ಹನುಮಂತಪ್ಪ ಇದ್ದರು.