ಟಾಟಾ ನಗರ–ಎರ್ನಾಕುಲಂ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ; ಓರ್ವ ಪ್ರಯಾಣಿಕ ಮೃತ್ಯು
ಎರಡು ಎಸಿ ಬೋಗಿಗಳು ಸಂಪೂರ್ಣ ಭಸ್ಮ
PC: screengrab/TeluguReporter
ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ದುವ್ವಾಡ ಮೂಲಕ ಹಾದುಹೋಗುತ್ತಿದ್ದ ಟಾಟಾ ನಗರ–ಎರ್ನಾಕುಲಂ (18189) ಎಕ್ಸ್ ಪ್ರೆಸ್ ರೈಲಿನಲ್ಲಿ ಸೋಮವಾರ ಬೆಳಗಿನ ಜಾವ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಈ ದುರಂತದಲ್ಲಿ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದಾರೆ.
ಬೆಳಗಿನ ಜಾವ 1.30ರ ಸುಮಾರಿಗೆ ಪ್ಯಾಂಟ್ರಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು, ಅದು ಪಕ್ಕದ ಬಿ1 ಹಾಗೂ ಎಂ2 ಎಸಿ ಬೋಗಿಗಳಿಗೆ ವೇಗವಾಗಿ ಹರಡಿತು. ಎಲಮಂಚಿಲಿ ಸಮೀಪ ಹೊಗೆ ಕಂಡುಬಂದ ತಕ್ಷಣ ಲೋಕೋ ಪೈಲಟ್ ಗಳು ರೈಲನ್ನು ಹತ್ತಿರದ ನಿಲ್ದಾಣದಲ್ಲಿ ನಿಲ್ಲಿಸಿದರೂ, ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಎರಡು ಬೋಗಿಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದ್ದವು.
ಘಟನೆಯಿಂದ ರೈಲಿನಲ್ಲಿದ್ದ ಪ್ರಯಾಣಿಕರು ಆತಂಕಿತರಾದರು. ದಟ್ಟವಾದ ಹೊಗೆ ಆವರಿಸುತ್ತಿದ್ದಂತೆ ನಿದ್ದೆಯಲ್ಲಿದ್ದ, ಭಯಭೀತರಾದ ಪ್ರಯಾಣಿಕರು ತಮ್ಮ ಬೋಗಿಗಳಿಂದ ಹೊರಬಂದು ಪ್ಲಾಟ್ಫಾರ್ಮ್ಗೆ ಧಾವಿಸಿದರು.
ರೈಲು ಅನಕಪಲ್ಲಿಗೆ ಸುಮಾರು ನಾಲ್ಕು ಗಂಟೆಗಳ ತಡವಾಗಿ ತಲುಪಿತು. ನಂತರ ನರಸಿಂಗಬಳ್ಳಿ ಬಳಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಬಿ1 ಬೋಗಿಯಲ್ಲಿ ಬ್ರೇಕ್ ಜಾಮ್ ಆಗಿರುವುದೇ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಎಲಮಂಚಿಲಿ ಹಾಗೂ ನಕ್ಕಪಲ್ಲಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಲವು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸಿದರು. ಸುಟ್ಟುಹೋದ ಬೋಗಿಗಳಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ನಾಶವಾಗಿವೆ. ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿತ್ತು.
ಚಳಿಗಾಲದ ತೀವ್ರ ಚಳಿ ನಡುವೆಯೇ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಸುಮಾರು 2,000 ಪ್ರಯಾಣಿಕರು ನಿಲ್ದಾಣದಲ್ಲೇ ಸಿಲುಕಿಕೊಂಡರು. ಘಟನೆಯಿಂದ ವಿಶಾಖಪಟ್ಟಣ–ವಿಜಯವಾಡ ಮಾರ್ಗದಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಬೆಳಗಿನ ಜಾವ 3.30ರ ಸುಮಾರಿಗೆ ಸುಟ್ಟುಹೋದ ಬೋಗಿಗಳನ್ನು ಬೇರ್ಪಡಿಸಿ, ಉಳಿದ ಬೋಗಿಗಳಲ್ಲಿ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಿ ರೈಲನ್ನು ಮುಂದುವರಿಸಲು ಅಧಿಕಾರಿಗಳು ಅನುಮತಿ ನೀಡಿದರು.
ಒಬ್ಬ ಪ್ರಯಾಣಿಕ ಮೃತ್ಯು
ಬೆಂಕಿ ದುರಂತದಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿರುವುದನ್ನು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತರನ್ನು ವಿಜಯವಾಡ ನಿವಾಸಿ ಚಂದ್ರಶೇಖರ್ ಸುಂದರ್ (70) ಎಂದು ಗುರುತಿಸಲಾಗಿದೆ. ಅವರು ಬಿ1 ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬೆಂಕಿಯಿಂದ ಸುಟ್ಟುಹೋದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಮೂರು ಆರ್ಟಿಸಿ ಬಸ್ ಗಳ ಮೂಲಕ ಸಮರ್ಲಕೋಟ ನಿಲ್ದಾಣಕ್ಕೆ ಸಾಗಿಸಲಾಯಿತು. ಅಲ್ಲಿಂದ ಎರ್ನಾಕುಲಂ ಕಡೆಗೆ ಪ್ರಯಾಣ ಮುಂದುವರಿಸಲು ಎರಡು ಬದಲಿ ಎಸಿ ಬೋಗಿಗಳನ್ನು ರೈಲಿಗೆ ಜೋಡಿಸಲಾಯಿತು.
ಘಟನೆಯ ಪರಿಣಾಮ ವಿಶಾಖಪಟ್ಟಣ–ವಿಜಯವಾಡ ನಡುವಿನ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು. ಬೋಗಿ ತೆರವುಗೊಳಿಸಿ ಸಾಮಾನ್ಯ ಕಾರ್ಯಾಚರಣೆ ಪುನಃಸ್ಥಾಪಿಸುವವರೆಗೆ ವಿಶಾಖಪಟ್ಟಣ, ಅನಕಪಲ್ಲಿ ಮತ್ತು ಟುನಿ ನಿಲ್ದಾಣಗಳಲ್ಲಿ ಹಲವು ರೈಲುಗಳನ್ನು ಸ್ಥಗಿತಗೊಳಿಸಲಾಯಿತು ಎಂದು ತಿಳಿದು ಬಂದಿದೆ.