×
Ad

ಕೇರಳ | ದಟ್ಟ ಕಾಡಿನಲ್ಲಿ ದಾರಿ ತಪ್ಪಿ ನಾಪತ್ತೆಯಾದ ಮೂವರು ಮಹಿಳೆಯರು: 15 ಗಂಟೆಗಳ ಸುದೀರ್ಘ ಹುಡುಕಾಟದ ಬಳಿಕ ರಕ್ಷಣೆ

Update: 2024-12-01 19:30 IST

PC | thehindu.com

ಕೊಚ್ಚಿ : ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನ ಕುಟ್ಟಂಪೂಳ ಪಂಚಾಯತ್‌ ನ ಅನಕ್ಕಯಂ ವಿಭಾಗದ ಅಟ್ಟಿಕಲಂ ದಟ್ಟವಾದ ಕಾಡಿನಲ್ಲಿ ದಾರಿ ತಪ್ಪಿ ನಾಪತ್ತೆಯಾದ ಮೂವರು ಮಹಿಳೆಯರನ್ನು 15 ಗಂಟೆಗಳ ಸುದೀರ್ಘ ಶೋಧದ ನಂತರ ಕೊನೆಗೂ ಪತ್ತೆ ಹಚ್ಚಲಾಗಿದ್ದು, ಮಹಿಳೆಯರ ನಾಪತ್ತೆಯಿಂದ ಕಂಗಾಲಾಗಿದ್ದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಅಟ್ಟಿಕಲಂನ ದಟ್ಟವಾದ ಕಾಡಿನಲ್ಲಿ ಕುಟ್ಟಂಪೂಳ ಪಂಚಾಯತ್‌ ನ ಅನಕ್ಕಯಂ ನಿವಾಸಿ ಮಾಯಾ ಅವರ ಮೇಯಲು ಬಿಟ್ಟ ದನ ನಾಪತ್ತೆಯಾಗಿತ್ತು. ಸಂಜೆ ವೇಳೆ ಹಸು ವಾಪಾಸ್ಸಾಗಿದೆ. ಆದರೆ ಕಾಡಿನ ಬಗ್ಗೆ ಸಾಕಷ್ಟು ಪರಿಚಿತರಾಗಿದ್ದ ಹಸುವನ್ನು ಹುಟುಕಾಟಕ್ಕೆ ತೆರಳಿದ ಮಾಯಾ(46), ಪಾರುಕುಟ್ಟಿ(64), ಡಾರ್ಲಿ(56)ಯವರ ಸುಳಿವೇ ಇರಲಿಲ್ಲ.

ಅಟ್ಟಿಕಲಂನ ದಟ್ಟವಾದ ಕಾಡಿನಲ್ಲಿ ಮೂವರು ಮಹಿಳೆಯರ ನಾಪತ್ತೆ ಸುದ್ದಿ ವ್ಯಾಪಕವಾಗಿ ಹರಡಿದೆ ಮತ್ತು ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾಡಿನಲ್ಲಿ ನಾಪತ್ತೆಯಾಗಿದ್ದ ಮೂವರು ಮಹಿಳೆಯರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು, ಸ್ಥಳೀಯರು ಸುದೀರ್ಘವಾಗಿ ಹುಡುಕಾಟವನ್ನು ನಡೆಸಿದ್ದಾರೆ. ಹುಡುಕಾಟ ರಾತ್ರಿವರೆಗೂ ಮುಂದುವರಿದರೂ ಮಹಿಳೆಯರು ಪತ್ತೆಯಾಗಿರಲಿಲ್ಲ.

ಮಲಯತ್ತೂರು ವಿಭಾಗೀಯ ಅರಣ್ಯಾಧಿಕಾರಿ(ಡಿಎಫ್ಒ) ಕುರ್ರಾ ಶ್ರೀನಿವಾಸ್ ಮತ್ತು ಕುಟ್ಟಂಪುಳ ವಲಯ ಅಧಿಕಾರಿ ಆರ್. ಸಂಜೀವ್ ಕುಮಾರ್ ನೇತೃತ್ವದಲ್ಲಿ ಸುಮಾರು 50 ಜನರ ತಂಡ ಇಡಮಲಯಾರ್ ಮತ್ತು ತುಂಡತ್ತಿಲ್ ಅರಣ್ಯ ವ್ಯಾಪ್ತಿಯ ಸಿಬ್ಬಂದಿಗಳ ಸಹಾಯದೊಂದಿಗೆ ಹುಡುಕಾಟ ನಡೆಸಿದರೆ, ಕೋತಮಂಗಲಂ ಅಗ್ನಿಶಾಮಕ ಠಾಣಾಧಿಕಾರಿ ಕೆ.ಕೆ ಬೆನೊಯ್ ನೇತೃತ್ವದ ಅಗ್ನಿಶಾಮಕ ತಂಡ ಮತ್ತು ಕುಟ್ಟಂಪುಳ ಠಾಣಾಧಿಕಾರಿ ಪಿ.ಎ. ಫೈಸಲ್ ಅವರ ನೇತೃತ್ವದ ಪೊಲೀಸ್ ತಂಡ ಇನ್ನೊಂದು ಕಡೆ ತಡರಾತ್ರಿವರೆಗೆ ಸುದೀರ್ಘವಾಗಿ ಶೋಧ ನಡೆಸಿದೆ. ಆದರೆ ಮಹಿಳೆಯರು ಪತ್ತೆಯಾಗಿರಲಿಲ್ಲ.

ನಾಪತ್ತೆಯಾಗಿದ್ದ ಮೂವರು ಮಹಿಳೆಯರಲ್ಲಿ ಓರ್ವ ಮಹಿಳೆ ಮೊಬೈಲ್ ಫೋನ್ ಕೊಂಡೊಯ್ದಿದ್ದರು. ಮರುದಿನ ಸಂಜೆ 4 ಗಂಟೆ ಸುಮಾರಿಗೆ ಆ ಮೊಬೈಲ್ ನಿಂದ ಕರೆ ಬಂದಿದ್ದು, ಮೊಬೈಲ್ ಕರೆಯನ್ನು ಆಧಾರವಾಗಿಟ್ಟು ಹುಡುಕಾಟ ನಡೆಸಿ ಮಹಿಳೆಯರನ್ನು ರಕ್ಷಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅರಣ್ಯಾಧಿಕಾರಿ ಶ್ರೀನಿವಾಸ್, ನಾಪತ್ತೆಯಾಗಿರುವ ಮಹಿಳೆಯರನ್ನು ದಟ್ಟ ಕಾಡಿನೊಳಗೆ ಸುಮಾರು 6 ಕಿ.ಮೀ. ದೂರದಲ್ಲಿ ಬಂಡೆಯೊಂದರ ಮೇಲೆ ಶೋಧ ದಳ ಪತ್ತೆ ಮಾಡಿದೆ. ಆನೆಗಳ ಭಯದಿಂದ ಆಹಾರ ಮತ್ತು ನೀರು ಮತ್ತು ನಿದ್ದೆಯಿಲ್ಲದ ರಾತ್ರಿಯಿಡೀ ಕಾಡಿನಲ್ಲಿ ಅವರು ಕಳೆದಿದ್ದಾರೆ. ಮೂವರು ಮಹಿಳೆಯರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ. ಮೂವರನ್ನು ರಕ್ಷಿಸಲಾಗಿದೆ. ಮೂವರನ್ನು ಕುಟ್ಟಂಪುಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿ ಕುಟುಂಬದ ಜೊತೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.

ಮೂವರು ಮಹಿಳೆಯರ ನಾಪತ್ತೆಯಿಂದ ಕುಟುಂಬಸ್ಥರು ಮತ್ತು ಗ್ರಾಮಕ್ಕೆ ಗ್ರಾಮವೇ ಆತಂಕಕ್ಕೆ ಒಳಗಾಗಿತ್ತು. ಮೂವರು ಸುರಕ್ಷಿತವಾಗಿ ತಮ್ಮ ಕುಟುಂಬವನ್ನು ಕೊನೆಗೂ ಸೇರಿದ್ದು ದಟ್ಟವಾದ ಕಾಡಿನಲ್ಲಿನ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಸೌಜನ್ಯ : thehindu.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News