ಅಣಕು ಕವಾಯತು ಆದೇಶದ ಬೆನ್ನಲ್ಲೇ ಕೇಂದ್ರ ಗೃಹ ಕಾರ್ಯದರ್ಶಿಯಿಂದ ನಿರ್ಣಾಯಕ ಸಭೆ
Photo credit: PTI
ಹೊಸದಿಲ್ಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಮೇ 7ರಂದು ಅಣಕು ರಕ್ಷಣಾ ಕವಾಯತುಗಳನ್ನು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಇದರಂತೆ ದೇಶದ ಒಟ್ಟು 259 ಸ್ಥಳಗಳಲ್ಲಿ ಮೇ 7ರಂದು ರಕ್ಷಣಾ ಅಣಕು ಕವಾಯತು ನಡೆಯಲಿದೆ ಎಂದು ವರದಿಯಾಗಿದೆ.
ಈ ಕವಾಯತು ಪ್ರಾಥಮಿಕವಾಗಿ ವಾಯುದಾಳಿ ಎಚ್ಚರಿಕೆ ಸೈರನ್ಗಳು ಮತ್ತು ಶತ್ರುಗಳ ದಾಳಿಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ನಾಗರಿಕ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡುವುದನ್ನು ಒಳಗೊಂಡಿದೆ.
1971ರ ನಂತರ ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಕವಾಯತುಗಳು ನಡೆಯಲಿದೆ.
ಮೇ 7ರಂದು ಅಣಕು ಕಸರತ್ತುಗಳನ್ನು ನಡೆಸಲು ಆದೇಶಿಸಿದ ಬೆನ್ನಲ್ಲೇ ಮಂಗಳವಾರ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ನಿರ್ಣಾಯಕ ಸಭೆ ಕರೆದಿದ್ದಾರೆ. ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಸಿವಿಲ್ ಸಿಫೆನ್ಸ್ ಮುಖ್ಯಸ್ಥರು, ಎನ್ಡಿಆರ್ಎಫ್ ಮುಖ್ಯಸ್ಥರು ಸೇರಿದಂತೆ ಹಲವು ಉನ್ನತಾಧಿಕಾರಿಗಳು ಭಾಗವಹಿಸಿದ್ದಾರೆ.
ಗ್ರಾಮ ಮಟ್ಟದವರೆಗೆ ಅಣಕು ಕವಾಯತನ್ನು ನಡೆಸಲು ಯೋಜಿಸಲಾಗಿದೆ. ಈ ಕವಾಯತು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸನ್ನದ್ಧತೆಯನ್ನು ನಿರ್ಣಯಿಸುವ ಮತ್ತು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ.